ಜಮಖಂಡಿ,19 : ನಗರದ ರಾಮತೀರ್ಥ ರೋಟರಿ ಸಂಸ್ಥೆಯ ವತಿಯಿಂದ 44 ಲಕ್ಷ ರೂ ಮೌಲ್ಯದ ಅತ್ಯಾಧುನಿಕ ಐಸಿಯು ಕಾರ್ಡಿಯಾಕ್ ಆಂಬ್ಯುಲೆನ್ಸ್ ವಾಹನವನ್ನು ನಗರದ ಸಿದ್ಧಿವಿನಾಯಕ ಆಸ್ಪತ್ರೆ ಹಾಗೂ ರಿಸರ್ಚ್ ಸೆಂಟರ್ಗೆ ಶನಿವಾರ ಸಂಜೆ ಹಸ್ತಾಂತರಿಸಲಾಯಿತು. ಆಸ್ಪತ್ರೆಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ 2024-25 ನೇ ಸಾಲಿನ ರೋಟರಿಯ ಜಿಲ್ಲಾ ಗವರ್ನರ ಶೈರದ್ ಪೈ ಹಾಗೂ ರೋಟರಿ ರಾಮತೀರ್ಧದ ಅಧ್ಯಕ್ಷ ಕಿರಣ ಜಾಲಿಹಾಳ ಅವರು ವಾಹನವನ್ನು ಆಸ್ಪತ್ರೆಯ ಆಡಳಿತ ಮಂಡಲಿಗೆ ಹಸ್ತಾಂತರಿಸಿದರು. ಜಿಲ್ಲಾ ಗವರ್ನರ ಶರದ್ ಪೈ ಮಾತನಾಡಿ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ರೋಟರಿ ಸಂಸ್ಥೆ ತುರ್ತು ಚಿಕಿತ್ಸಾ ವಾಹನವನ್ನು ವಿತರಿಸಿದೆ. ರೋಟರಿ ಸೇವಾ ಸಂಸ್ಥೆಯಾಗಿದ್ದು ಸಮಾಜ ಸೇವೆಗೆ ಅನೇಕ ಅನುಕೂಲತೆಗಳನ್ನು ಪ್ರತಿವರ್ಷ ಮಾಡಿ ಕೊಡುತ್ತದೆ ಎಂದು ತಿಳಿಸಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ ಮಾತನಾಡಿ ಸರ್ಕಾರ ದೊಂದಿಗೆ ಖಾಸಗಿ ಒಡೆತನದ ಆಸ್ಪತ್ರೆಗಳು ಹಾಗೂ ಸೇವಾ ಸಂಘಟನೆಗಳು ಕೈಜೋಡಿಸಿದಾಗ ಗ್ರಾಮಿಣ ಭಾಗದ ಜನರಿಗೆ ಸರಿಯಾದ ಸಮಯಕ್ಕೆ ಆರೋಗ್ಯ ಸೇವೆಗಳನ್ನು ಒದಗಿಸಬಹುದಾಗಿದೆ ಎಂದು ತಿಳಿಸಿದರು. ಕಿರಣ ಜಾಲಿಹಾಳ ಮಾತನಾಡಿ ತಮ್ಮ ಅಧಿಕಾರ ಅವಧಿಯಲ್ಲಿ ಸಮಾಜಕ್ಕೆ ಶಾಶ್ವತ ಯೋಜನೆ ರೂಪಿಸುವ ಉದ್ದೇಶ ದಿಂದ ಐಸಿಯು ಕಾರ್ಡಿಯಾಕ್ ಆಂಬ್ಯುಲೆನ್ಸ್ ಯೋಜನೆ ಕೈಗೆತ್ತಿ ಕೊಳ್ಳಲಾಗಿತ್ತು. ಸದಸ್ಯರ ಸಹಕಾರ ಹಾಗೂ ರೋಟರಿಯ ಬೆಂಬಲ ಹಾಗೂ ಸಾರ್ವಜನಿಕರ ಪ್ರೋತ್ಸಾಹ ದಿಂದ ಯೋಜನೆ ಯಶಸ್ವಿ ಯಾಗಿದೆ ಎಂದು ತಿಳಿಸಿದರು. ರೋಟರಿ ಅಧ್ಯಕ್ಷ ರಾಜಶೇಖರ ವಾರದ ಅವರು ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಆರೋಗ್ಯ, ಶಿಕ್ಷಣ ಹಾಗೂ ಸಮಾಜ ಮುಖಿ ಕಾರ್ಯಕ್ರಮಗಳನ್ನು ಇನ್ನಷ್ಟು ವಿಸ್ತರಿಸಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಜಿಲ್ಲಾ ಗವರ್ನರ ಅಶೋಕ ನಾಯಕ, ಸಹಾಯಕ ಗವರ್ನರ ನಾರಾಯಣ ಹೆರಕಲ್ ಮಾತನಾಡಿದರು. ಆರ್.ಪಿ.ನ್ಯಾಮಗೌಡ, ವೈದ್ಯರ ಸಂಘ, ಸೇರಿದಂತೆ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಗಣ್ಯರು ಭಾಗವಹಿಸಿದ್ದರು. ಎಸ್.ವೈ.ಪಾಟೀಲ್ ಹಾಗೂ ಚಿದಾನಂದ ಸಿದ್ಧಾಪೂರ ಮಠ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನ ಜಿರಲಿ ವಂದಿಸಿದರು.
