ವಿಜಯಪುರ, ಮೇ.೧೪ : ಸಾರಿಗೆ ಸೌಲಭ್ಯಗಳ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕಾಧಿಕಾರಿಗಳಾದ ರಿಷಿ ಆನಂದ ಅವರು ಫೋನ್ ಇನ್ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಸಾರಿಗೆ ಸಂಸ್ಥೆಯ ವೀಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಗೆ ಆಗಮಿಸಿ, ಜಿಲ್ಲೆಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಾರಿಗೆ ವ್ಯವಸ್ಥೆಯ ಕುರಿತು ಫೋನ್ ಇನ್ ಕಾರ್ಯಕ್ರಮದಲ್ಲಿ ಅವಲೋಕನ ಮಾಡಿದರು. ಮಧ್ಯಾಹ್ನ ೩.೩೦ರಿಂದ ೪ ಗಂಟೆ ಅವಧಿಯಲ್ಲಿ ಸಾರಿಗೆ ಸೌಲಭ್ಯಗಳ ಕುರಿತು ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ನೂರಾರು ಕರೆಗಳನ್ನು ಸ್ವೀಕರಿಸಿ, ಅವರ ಸಮಸ್ಯೆಗೆ ಸ್ಪಂದಿಸಿದರು.
ಸಾರಿಗೆ ಸೌಲಭ್ಯಗಳ ಕುರಿತು ಪ್ರಯಾಣಿಕರಿಂದ ಬಂದ ಕರೆ ಸ್ವೀಕರಿಸಿ, ಅವರ ಸಮಸ್ಯೆ ಆಲಿಸಿ ಅದಕ್ಕೆ ಪರಿಹಾರ ಕಲ್ಪಿಸಿದರು. ಇಂಡಿ ತಾಲೂಕಿನ ಬಸನಾಳ ಕ್ರಾಸ್ಗೆ ವಾಹನ ನಿಲುಗಡೆ ಕುರಿತು ಬಂದ ಬೇಡಿಕೆಗೆ ಸ್ಪಂದಿಸಿದರು. ವಿಜಯಪುರ ನಗರದಲ್ಲಿ ನೂತನ ನಗರ ಸಾರಿಗೆ ವಾಹನಗಳ ಕುರಿತು ಗಣೇಶನಗರದ ಪೂಜಾರಿ ಎನ್ನುವ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿ ಕರೆ ಮಾಡಿದ್ದನ್ನು ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು. ಸಾರ್ವಜನಿಕರು ಬಸ್ಸುಗಳ ಆಗಮನ, ನಿರ್ಗಮನಗಳ ಮಾಹಿತಿಯನ್ನು ಫೋನ್ ಮೂಲಕ ಕೇಳಿದ್ದನ್ನು ಕಂಡು ಸಂತಸ ವ್ಯಕ್ತಪಡಿಸಿ, ಸಾರ್ವಜನಿಕ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಸೇರಿದಂತೆ ಮತ್ತಿತರರು ಇದ್ದರು.
