ಕೊಪ್ಪಳ: ನಗರಸಭೆ ಮುಂದೆ ನಡೆದ ಬಲ್ಡೋಟ ತೊಲಗಿಸಿ ಕೊಪ್ಪಳ-ಭಾಗ್ಯನಗರ ಉಳಿಸಿ ೨೦೭ನೇ ದಿನದ ಧರಣಿಗೆ ರಾಜ್ಯ ರೈತ ಸಂಗದ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಘಯ್ಯ ಬೆಂಬಲ ಸೂಚಿಸಿ ಮಾತನಾಡಿ, ಇಲ್ಲಿ ನಗರದ ಜನ, ಬುದ್ದಿಜೀವಿಗಳು, ಬರಹಗಾರರು ಮತ್ತು ಹೋರಾಟದ ಮುಂಚೂಣಿಯ ಸಂಘಟನೆಗಳು ೨೦೭ ದಿನಗಳಿಂದ ಹೋರಾಡುತ್ತಿದ್ದಾರೆ. ಇದನ್ನು ಇಲ್ಲಿನ ಶಾಸಕರು, ಸಂಸದರು ಹಾಗೂ ಜಿಲ್ಲಾ ಮಂತ್ರಿಗಳು ಹಗುರವಾಗಿ ತೆಗೆದುಕೊಂಡರೆ ರಾಜ್ಯದ ಪ್ರಜ್ಞಾವಂತರು ಬೀದಿಗಿಳಿಯುತ್ತಾರೆ. ದೇವನಹಳ್ಳಿ ಹೋರಾಟ ಹೀಗೆ ಆಯಿತು. ಇಲ್ಲಿನ ಗ್ರಾಮೀಣ ಮತ್ತು ನಗರದ ಜನ ತಿರುಗಿ ಬೀಳುವ ಅನಿವಾರ್ಯ ಸನ್ನಿವೇಶ ತರಬಾರದು.
ಕರ್ನಾಟಕ ರಾಜ್ಯ ರೈತ ಸಂಘ ೨೧ ದಿನಗಳಿಂದ ಬಲ್ಡೋಟ ಕಂಪನಿ ಗೇಟ್ ಎದುರು ಬಸಾಪುರ ಕೆರೆ ಜನ, ಜಾನುವಾರು ನೀರು ಕುಡಿಯಲು ಹೈಕೋರ್ಟ್ ಆದೇಶದಂತೆ ಮುಕ್ತಗೊಳಿಸಬೇಕು ಎಂದು ಅನಿರ್ದಿಷ್ಟ ಧರಣಿ ನಡೆಸುತ್ತಿದೆ. ಜಿಲ್ಲಾಧಿಕಾರಿಗಳ ಮಂಜೂರಿ ಷರತ್ತು ಉಲ್ಲಂಘನೆ ಮಾಡಿ ೨೦ ಎಕರೆ ಮುಚ್ಚಿ ಕೆರೆಯ ಮೂಲ ಸ್ವರೂಪ ಬದಲಾಯಿಸಿದ್ದನ್ನು ನಾವು ಸರ್ವೆ ಮಾಡಿದರೆ ತೋರಿಸಿ ಕೊಡುತ್ತೇವೆ. ಕಾಲವಿಳಂಬ ಮಾಡದೇ ಜಿಲ್ಲಾಧಿಕಾರಿಗಳು ನಮ್ಮ ಸಮ್ಮುಖದಲ್ಲಿ ಸರ್ವೆ ಮಾಡಬೇಕು. ಆಗ ಮಾತ್ರ ಷರತ್ತು ಹೇಗೆ ಉಲ್ಲಂಘನೆಯಾಗಿದೆ ಎಂದು ತೋರಿಸುತ್ತೇವೆ. ಈ ವಿಚಾರವಾಗಿ ಕಂದಾಯ ಮಂತ್ರಿ ಕೃಷ್ಣ ಭೈರೇಗೌಡ ಅವರನ್ನು ನಿಯೋಗದೊಂದಿಗೆ ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ. ಅವರು ಕೆರೆ ಬಿಡಿಸಿಕೊಡುವ ಭರವಸೆ ನೀಡಿದ್ದಾರೆ. ಇದರಲ್ಲಿ ಸರ್ಕಾರ ಮೀನಾಮೇಷ ಮಾಡಿದರೆ ಅನಿವಾರ್ಯವಾಗಿ ರೈತ ಸಂಘ ಕೆರೆಯ ನೀರಿನ ಹಕ್ಕು ಸಾಧಿಸಲು ಉಗ್ರ ಹೋರಾಟಕ್ಕೆ ಮುಂದಾಗುತ್ತದೆ ಎಂದು ಎಚ್ಚರಿಸಿದರು. ಇಷ್ಟೊಂದು ದೀರ್ಘ ಕಾಲದ ಹೋರಾಟ ನಗರದಲ್ಲಿ ನಡೆಯುತ್ತಿದ್ದುದು ಸಾಮಾನ್ಯವಲ್ಲ. ಇದರ ಬೇಗುದಿ ಒಳಗೆ ಕುದಿಯುತ್ತಿರುತ್ತದೆ. ಇದರಲ್ಲಿ ಯಾರಾದರೂ ಕಾರ್ಖಾನೆ ಪರವಾಗಿ ನಿಂತರೆ ಅವರಿಗೆ ಭವಿಷ್ಯವಿಲ್ಲ. ಮುಖ್ಯಮಂತ್ರಿಗಳು ಶೀಘ್ರವಾಗಿ ಸಂಪುಟ ಸಭೆಯ ತೀರ್ಮಾನ ಮಾಡಿ ಬಲ್ಡೋಟ ತೊಲಗಿಸಲಿ ಎಂದರು.
ಇನ್ನೊಬ್ಬ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಹಿರಿಯ ವಕೀಲ ಆರ್.ಕೆ.ದೇಸಾಯಿ ಮಾತನಾಡಿ, ಈ ಹೋರಾಟ ಇಡೀ ರಾಜ್ಯದ ಜನರ ಬೆಂಬಲ ಪಡೆದಿದೆ. ನಮ್ಮ ಕೆ.ಪಿ.ಆರ್.ಎಸ್ ಸಂಘಟನೆ ಸಂಪೂರ್ಣ ಬೆಂಬಲಿಸಿ ಮುಂದಿನ ದಿನಗಳಳಲ್ಲಿ ಈ ಹೋರಾಟಕ್ಕೆ ಶಕ್ತಿ ತುಂಬಲು ಭಾಗವಹಿಸುತ್ತದೆ ಎಂದರು.
ಧರಣಿಯಲ್ಲಿ ಮಾನವ ಬಂಧುತ್ವ ವೇದಿಕೆಯ ಮುಖಂಡ ಟಿ. ರತ್ನಾಕರ, ಸಂಚಾಲಕರಾದ ಮಲ್ಲಿಕಾರ್ಜುನ ಗೋನಾಳ, ಮಂಜುನಾಥ ಗೊಂಡಬಾಳ, ಪುಟ್ಟರಾಜ ಪಾಟೀಲ್, ಶಾಹೀದ ಹುಸೇನ್, ಶಹಾಬುದ್ದೀನಸಾಬ್, ಶರಣು ಶೆಟ್ಟರ್, ಮಹಿಳಾ ಧುರೀಣೆ ಜ್ಯೋತಿ ಎಂ. ಗೊಂಡಬಾಹ, ಗೌರಿ ಗೋನಾಳ, ಸಲೀಮಾ ಜಾನ್, ಯಮುನಾ ಚೆಳ್ಳೂರು, ಅಬ್ದುಲ್ ಖುದ್ದೂಸ್, ಧರ್ಭರಾಜ ಗೋನಾಳ, ಯಮನೂರಪ್ಪ ಈಳಿಗನೂರು, ಚಂದುಸಾಬ ಕನಕಗಿರಿ, ಪಾಮಣ್ಣ ಅರಳಿಗನೂರು, ಮುರ್ತುಜಾಸಾಬ್ ಬಂಗಾರಗುಂಡ, ಮಹ್ಭದ್ ಇಸ್ಮಾಯಿಲ್, ಕಾಶಿಂ ನಾಗೇಶನಹಳ್ಳಿ, ಬಸವರಾಜ ನರೇಗಲ್, ಗಾಳೆಪ್ಪ ಪೂಜಾರ ಹೂವಿನಾಳ, ತೌಫಿಕ್, ದುರುಗೇಶ ಬರಗೂರು, ಸಿರಾಜ್ ಸಿದ್ದಾಪೂರ, ಗವಿಸಿದ್ದಪ್ಪ ವದ್ನಾಳ, ಮದ್ದಾನಯ್ಯ ಹಿರೇಮಠ, ನಿವೃತ್ತ ಉಪನ್ಯಾಸಕ ಶಂಭುಲಿಃಗಪ್ಪ ಹರಗೇರಿ, ಶಿವಾನಂದಯ್ಯ ಬೀಳಗಿಮಠ, ರಾಜಶೇಖರ ಏಳುಬಾವಿ, ಎಸ್. ಮಹಾದೇವಪ್ಪ ಮಾವಿನಮಡು, ಚೆನ್ನವೀರಯ್ಯ ಹಿರೇಮಠ ಕುಣಿಕೇರಿ, ಮಂಜುನಾಥ ಹ್ಯಾಟಿ, ಯಮನೂರಪ್ಪ ನಾವು ದ್ರಾವಿಡ ಕನ್ನಡಿಗ, ಶಿವಪ್ಪ ಜಲ್ಲಿ, ಚಿಕ್ಕನಗೌಡ್ರ ಹಿರೇಗೌಡ್ರ ಪಾಲ್ಗೊಂಡರು.
