ತಾಳಿಕೋಟೆ,ಸೆ,೧೬ : ೦೨೫-೨೬ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ದಾಖಲಿಸಿದ ತಾಳಿಕೋಟೆಯ ಶ್ರೀ ಸಂಗಮೇಶ್ವರ ಪ್ರೌಢಶಾಲೆಗೆ ಶಿಕ್ಷಣ ಇಲಾಖೆಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಲಾಗಿದೆ.
ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದ ಪರಿಶ್ರಮವೇ ಕಾರಣವಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ಫಲಿತಾಂಶ ಸಾಧಿಸಿರುವ ಶಾಲೆಯ ಕಾರ್ಯಕ್ಕೆ ಶಿಕ್ಷಣ ಇಲಾಖೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಂಗಮೇಶ್ವರ ವಿದ್ಯಾ ಸಂಸ್ಥೆಯ ಆವರಣದಲ್ಲಿ ಮಂಗಳವಾರ ರಂದು ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಚ್.ಎಸ್. ಪಾಟೀಲ್ ಅವರು ಅಭಿನಂದನಾ ಪತ್ರವನ್ನು ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿರುವ ಶಿಕ್ಷಣ ಇಲಾಖೆ, ಮುಂದಿನ ದಿನಗಳಲ್ಲಿಯೂ ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದೆ. ಈ ಗೌರವದಿಂದ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿದ್ದು, ಶೈಕ್ಷಣಿಕ ಪ್ರಗತಿಗೆ ಮತ್ತಷ್ಟು ಪ್ರೋತ್ಸಾಹ ದೊರೆತಂತಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಚಿನ ಎಚ್. ಪಾಟೀಲ ಕಾರ್ಯದರ್ಶಿಗಳು, ಕಿರಣ ಎಚ್. ಪಾಟೀಲ ಆಡಳಿತಾಧಿಕಾರಿಗಳು, ಮುಖ್ಯೋಪಾಧ್ಯಾಯ ಅಶೋಕ ಕಟ್ಟಿ, ಮುಖ್ಯ ಅತಿಥಿಗಳಾದ ಪ್ರವೀಣ ಜಿ. ಘೋರ್ಪಡೆ, ಹಿರಿಯ ಶಿಕ್ಷಕ ಬಿ. ಆಯ್. ಹಿರೇಹೊಳಿ, ಎಸ್.ವಿ. ಜಾಮಗೊಂಡಿ, ಎಚ್.ಬಿ. ಪಾಟೀಲ, ಎಸ್.ಸಿ. ಗುಂಡಗುಂಟಿ, ಎಮ್.ಎಸ್. ರಾಯಗೊಂಡ, ಯು.ಎಚ್. ಗಟನೂರ, ಶ್ರೀಮತಿ ರೇಣುಕಾ ಬಿರಾದಾರ, ಶ್ರೀಮತಿ ಎ.ಸಿ. ಗುಮಶೆಟ್ಟಿ, ಕೆ.ಎನ್. ನಾಲತವಾಡ, ಬಿ.ಪಿ. ಕೊಣ್ಣುರ, ಸುನೀಲ ಮತ್ತಿಗಟ್ಟಿ ಹಾಗೂ ಸಿದ್ದನಗೌಡ ಮುದನೂರ ಪಾಲ್ಗೊಂಡಿದ್ದರು.