ಬಳ್ಳಾರಿ, ಮೇ 02: ಮಲೇಶಿಯಾದಲ್ಲಿ ನಡೆಯಲಿರುವ 22ನೇ ಅಂತರಾಷ್ಟ್ರೀಯ ಒಕಿನವ ಗೋಜು ರಾಯ್ ಇಪಾನ್ ಸಿಟಿ ಮುಕ್ತ ಕರಾಟೆ ಸ್ಪರ್ಧೆ–2026ಕ್ಕೆ ಬಳ್ಳಾರಿಯ ಶ್ರೀ ಪಂಚಾಕ್ಷರಿ ಮಾರ್ಷಲ್ ಆರ್ಟ್ಸ್ ಟ್ರಸ್ಟ್ನ ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಹಾಗೂ ಕರಾಟೆ ಮಾಸ್ಟರ್ ಬಂಡ್ರಾಳ್ ಎಂ. ಮೃತ್ಯುಂಜಯ ಸ್ವಾಮಿ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಗಾಂಧಿನಗರದಲ್ಲಿರುವ ಟ್ರಸ್ಟ್ ಮೂಲಕ ಬಾಲ ಭಾರತಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಕರಾಟೆ, ಯೋಗ ಮತ್ತು ಧ್ಯಾನ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳು ಮತ್ತು ವಿಶೇಷ ತರಬೇತಿ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಟ್ರಸ್ಟ್, ಈಗಾಗಲೇ ತನ್ನ ವಿದ್ಯಾರ್ಥಿಗಳನ್ನು ಶ್ರೀಲಂಕಾ, ಇಂಡೋನೇಷಿಯಾ, ಸಿಂಗಾಪುರ್, ಮಲೇಶಿಯಾ ಹಾಗೂ ಜಪಾನ್ ದೇಶಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಲು ಕಳುಹಿಸಿ ಉತ್ತಮ ಸಾಧನೆ ಮಾಡಿಸಿದೆ ಎಂದು ಅವರು ಹೇಳಿದರು.
ಮೇ 8ರಿಂದ 10ರವರೆಗೆ ಮಲೇಶಿಯಾದ ತನಜುಂಗ್ ರಮಭೂತಾನ್ ಇಪಾನ್ ಸಿಟಿಯಲ್ಲಿ ನಡೆಯಲಿರುವ ಈ ಸ್ಪರ್ಧೆಗೆ ಬಾಲ ಭಾರತಿ ಕೇಂದ್ರೀಯ ವಿದ್ಯಾಲಯದ ನಯೋನಿಕ ಮಂಗಳ ಹಾಗೂ ನಕ್ಷತ್ರ ವರ್ಣ ಮಂಗಳ, ವೀರಶೈವ ವಿದ್ಯಾವರ್ಧಕ ಸಂಘದ ಪದವಿ ಪೂರ್ವ ಕಾಲೇಜಿನ ಪ್ರಜ್ವಲ ಗಣೇಶ್ ಮತ್ತು ಡ್ರೀಮ್ ವರ್ಲ್ಡ್ ಶಾಲೆಯ ಮುದಿಯಮಂ ದೇವಗನ್ ಶ್ರೀವತ್ಸ ಆಯ್ಕೆಯಾಗಿದ್ದಾರೆ.
ಟ್ರಸ್ಟ್ ಇದುವರೆಗೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಆತ್ಮರಕ್ಷಣಾ ಕಲೆಗಳ ತರಬೇತಿ ನೀಡಿದ್ದು, ಗ್ರಾಮೀಣ ಮತ್ತು ನಗರ ಭಾಗದ ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಿದರು.
ಮಾಧ್ಯಮಗಳ ಸಹಕಾರವನ್ನು ಸ್ಮರಿಸಿದ ಮೃತ್ಯುಂಜಯ ಸ್ವಾಮಿ, ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಗೌರವಾಧ್ಯಕ್ಷ ವಿಕ್ರಮ ಮಹಿಪಾಲ್, ಸದಸ್ಯರಾದ ಹೆಚ್.ಎಂ. ಅಂಬರೀಶ್, ಚೈತನ್ಯ ಷಡಕ್ಷರಿ, ಆರ್.ಎಂ. ಬಸವರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.