ಹುಕ್ಕೇರಿ : ಇಡೀ ಜಗತ್ತಿಗೆ ಶಿಕ್ಷಣದಿಂದ ಏನನ್ನಾದರೂ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ ಅವರು ಹಿಮಾಲಯ ಪರ್ವತವಿದ್ದಂತೆ. ಎಂದೆಂದಿಗೂ ಕರಗದ ಜ್ಞಾನ ಶಿಖರ. ಪ್ರಸ್ತುತ ದಿನಗಳಲ್ಲಿ ಅವರಂಥ ಮಹಾನಾಯಕರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವುದು ಇಂದಿನ ಅಗತ್ಯ ಎಂದು ಮಾಜಿ ಸಂಸದ ರಮೇಶ ಕತ್ತಿ ಅಭಿಪ್ರಾಯಪಟ್ಟರು.
ತಾಲೂಕಿನ ಗುಡಸ ಗ್ರಾಮದಲ್ಲಿ ಶುಕ್ರವಾರ ಸುಲ್ತಾನಪೂರದ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನಸೇವಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ ಅಂಬೇಡ್ಕರ ಅವರ ೧೩೫ನೇ ಜಯಂತಿ ಹಾಗೂ ತಾಲೂಕು ಮಟ್ಟದ ಭೀಮೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಭುದ್ಧ ಭಾರತ ನಿರ್ಮಾಣಕ್ಕೆ ಅಂಬೇಡ್ಕರ ಅವರು ತಮ್ಮನ್ನು ತಾವು ತೊಡಗಿಸಿಕೊಂಡವರು. ಅವರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದರು.
ಭಾರತದ ರಾಜಕೀಯ, ಸಾಮಾಜಿಕ-ಸಾಂಸ್ಕೃತಿಕ ವ್ಯವಸ್ಥೆ ರೂಪಿಸುವಲ್ಲಿ ಅಂಬೇಡ್ಕರರು ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಸಂವಿಧಾನ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಬಾಬಾಸಾಹೇಬ ಅಂಬೇಡ್ಕರರು ನೀಡಿರುವ ಕೊಡುಗೆ ಅನನ್ಯವಾಗಿದೆ. ಅಸಮಾನತೆ ವಿರುದ್ಧ ಹೋರಾಡಿ ಗೆದ್ದ ಅಂಬೇಡ್ಕರರ ವಿಚಾರಧಾರೆಗಳನ್ನು ದೇಶದ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ದಲಿತರು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆಯಬೇಕು. ಲಿಂಗ ತಾರತಮ್ಯ ಮತ್ತು ಮಹಿಳೆಯರಲ್ಲಿ ಅಸಮಾನತೆ ಹೋಗಲಾಡಬೇಕು ಎಂದು ರಮೇಶ ಕತ್ತಿ ಹೇಳಿದರು.
ಕರ್ನಾಟಕ ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ನಿರ್ದೇಶಕರೂ ಆದ ಕಾರ್ಯಕ್ರಮದ ಆಯೋಜಕ ಸುರೇಶ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಭೀಮೋತ್ಸವದ ಮೂಲಕ ಅಂಬೇಡ್ಕರರ ಜೀವನ ಚರಿತ್ರೆ, ಹೋರಾಟಗಳ ಸ್ಮರಣೆ ಮತ್ತು ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ. ತಮ್ಮ ಎನ್ಜಿಒ ಮೂಲಕ ಕಾಗವಾಡದಲ್ಲಿ ಮಹಿಳಾ ಸಾಂತ್ವನ ಕೇಂದ್ರ, ಬೈಲಹೊಂಗಲದಲ್ಲಿ ವೃದ್ಧಾಶ್ರಮ ನಡೆಸಲಾಗುತ್ತಿದೆ. ಜೊತೆಗೆ ಮಹಿಳೆಯರು ಮತ್ತು ನಿರುದ್ಯೋಗ ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ ಸರಕಾರದಿಂದ ಆರ್ಥಿಕ ನೆರವು ಕಲ್ಪಿಸುವುದು ಸೇರಿದಂತೆ ವಿವಿಧ ರೀತಿಯ ಸಮಾಜಮುಖಿ ಕೆಲಸ ಮಾಡಲಾಗುತ್ತಿದೆ ಎಂದರು.
ವಿಜಯಪುರದ ದಿಕ್ಸೂಚಿ ಭಾಷಣಕಾರ ಪ್ರೊ.ಬಸವರಾಜ ಜಾಲವಾದಿ ಉಪನ್ಯಾಸ ನೀಡಿ, ಸಮಾನತೆ, ಮೀಸಲಾತಿ ಮತ್ತು ಜನರ ಹಕ್ಕುಗಳ ಬಗ್ಗೆ ಪ್ರತಿಪಾದಿಸಿದ ಅಂಬೇಡ್ಕರರ ಜಯಂತಿ ಪ್ರತಿವರ್ಷ ಆಚರಣೆಗಷ್ಟೇ ಸೀಮಿತವಾಗುತ್ತಿದೆ. ಪ್ರಸ್ತುತ ಸಮಾಜದಲ್ಲಿ ಅಸಮಾನತೆ ತಾಂಡವಾಡುತ್ತಿದೆ. ಜಾತಿ ವ್ಯವಸ್ಥೆ ಹೆಚ್ಚುತ್ತಿದೆ. ಜನರಲ್ಲಿ ವೈಚಾರಿಕ ಚಿಂತನೆ ಕೊರತೆ ಎದ್ದು ಕಾಣುತ್ತಿದೆ. ದೇಶ ಆಳುವ ಜನರಲ್ಲಿ ಬಹುತೇಕರು ಅನಕ್ಷರಸ್ಥರಾಗಿದ್ದಾರೆ. ಇದು ಪ್ರಜಾಪ್ರಭುತ್ವ ಅಲ್ಲ ಮಜಾಪ್ರಭುತ್ವ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಯಮಕನಮರಡಿ ಹುಣಸಿಕೊಳ್ಳಮಠದ ಸಿದ್ಧಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ನಿರ್ದೇಶಕ ಸುರೇಶ ತಳವಾರ ಅಧ್ಯಕ್ಷತೆ ವಹಿಸಿದ್ದರು. ಶಾಸಕ ನಿಖಿಲ್ ಕತ್ತಿ, ಅಧಿಕಾರಿಗಳಾದ ಗುರುಶಾಂತ ಪಾವಟೆ, ಡಾ.ಉದಯ ಕುಡಚಿ, ಎಚ್.ಹೊಳೆಪ್ಪ, ಪಿಡಿಒ ನಿರಂಜನ ಕುರಬೇಟ, ಮುಖಂಡರಾದ ಮಲ್ಲಿಕಾರ್ಜುನ ನರಸನ್ನವರ, ರಾಯಪ್ಪಾ ಢೂಗ, ಸದಾನಂದ ಹಿರೇಮಠ, ಸುನೀಲ ನೇರ್ಲಿ, ಶಿವನಗೌಡ ಪಾಟೀಲ, ಸತ್ಯಪ್ಪಾ ಚಂದರಗಿ, ಉದಯ ಹುಕ್ಕೇರಿ, ಅಪ್ಪಣ್ಣಾ ಖಾತೇದಾರ, ಶ್ರೀಕಾಂತ ತಳವಾರ, ಸದಾಶಿವ ಕಾಂಬಳೆ, ದೀಪಕ ವೀರಮುಖ, ಕುಮಾರ ತಳವಾರ, ಗಂಗಾರಾಮ ಭೂಸಗೋಳ, ಬಸವರಾಜ ತಳವಾರ, ಪ್ರಮೋದ ಹೊಸಮನಿ, ರಮೇಶ ಹುಂಜಿ, ಕೆಂಪಣ್ಣಾ ಶಿರಹಟ್ಟಿ, ಮಹಾಂತೇಶ ತಳವಾರ, ಯಲ್ಲಪ್ಪ ಡಪ್ಪರಿ, ಅಮರ ಶಿಂಗೆ, ಮುತ್ತು ಕಾಂಬಳೆ, ಮಂಜು ಕಾಮತ, ಮುತ್ತು ರಾಯಣ್ಣವರ, ಮಂಗಲ ಮಾನೆ, ರೇಖಾ ದಾದುಗೋಳ ಮತ್ತಿತರರು ಉಪಸ್ಥಿತರಿದ್ದರು.
ಆಯೋಜಕ ಸುರೇಶ ತಳವಾರ ಸ್ವಾಗತಿಸಿದರು. ಶಿಕ್ಷಕ ರಾಜು ತಳವಾರ ನಿರೂಪಿಸಿದರು. ವಿನಯ ಕಾಂಬಳೆ ಸಂವಿಧಾನ ಪೀಠಿಕೆ ಓದಿದರು. ವಿಶಾಲ ಕೆಂಪರಾಯಗೋಳ ವಂದಿಸಿದರು.
ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ವೇಳೆ ಬಹುಮಾನ ವಿತರಿಸಿ ಗೌರವಿಸಲಾಯಿತು.
