ಬಾಗಲಕೋಟೆ, ಜುಲೈ ೧೫ : ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ವತಿಯಿಂದ ನಗರದ ವಿದ್ಯಾಗಿರಿಯಲ್ಲಿ ನೂತನವಾಗಿ ಸ್ಥಾಪಿಸಲಾದ ಆಧಾರ ಸೇವಾ ಕೇಂದ್ರವನ್ನು ಜಿಲ್ಲಾಧಿಕಾರಿ ಸಂಗಪ್ಪ ಅವರು ಉದ್ಘಾಟಿಸುವ ಮೂಲಕ ಸಾರ್ವಜನಿಕ ಸೇವೆಗೆ ಸಮರ್ಪಿಸಿದರು.
ವಿದ್ಯಾಗಿರಿಯಲ್ಲಿ ಸ್ಥಾಪಿಸಲಾದ ಆಧಾರ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಆಧಾರ ಹೊಸ ನೋಂದಣಿ, ತಿದ್ದುಪಡಿ, ಮೊಬೈಲ್ ಸಂಖ್ಯೆ ಮತ್ತು ವಿಳಾಸ ಬದಲಾವಣೆ ಸೇರಿದಂತೆ ವಿವಿಧ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗುವದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಸ್ಥಳೀಯವಾಗಿ ನಾಗರಿಕರಿಗೆ ಸುಲಭ ಹಾಗೂ ವೇಗದ ಆಧಾರದ ಸೇವೆ ಪಡೆಯುವ ಅವಕಾಶ ಸಿಗಲಿದೆ ಎಂದು ಹೇಳಿದರು.
ಡಿಜಿಟಲ್ ಸೇವೆಗಳನ್ನು ಜನಸಾಮಾನ್ಯರಿಗೆ ಇನ್ನಷ್ಟು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಇಂತಹ ಸೇವಾ ಕೇಂದ್ರಗಳನ್ನು ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಲಾಗುತ್ತಿದೆ. ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ ಪ್ರಮುಖ ದಾಖಲೆಯಾಗಿರುವದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಕರೆ ನೀಡಿದರು.
ಆಧಾರ ಸೇವಾ ಕೇಂದ್ರದ ಕ್ಲಸ್ಟರ ವ್ಯವಸ್ಥಾಪಕ ಶ್ಯಾಮಸುಂದರ್ ಮಾತನಾಡಿ ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ ವಾರದ ೭ ದಿನಗಳ ಕಾಲ ಬೆಳಿಗ್ಗೆ ೯.೩೦ ರಿಂದ ಸಮಜೆ ೫.೩೦ ವರೆಗೆ ಕಾರ್ಯನಿರ್ವಹಿಸುತ್ತದೆ. ಈ ಆಧಾರ ಸೇವಾ ಕೇಂದ್ರಗಳನ್ನು ನೇರವಾಗಿ ಯುಐಡಿಎಐ ನಿರ್ವಹಿಸುತ್ತದೆ. ಈ ಕೇಂದ್ರವನ್ನು ಸಂಪೂರ್ಣವಾಗಿ ಎಲ್ಲರನ್ನೂ ಒಳಗೊಳ್ಳುವ ಮತ್ತು ನಿವಾಸಿ ಸ್ನೇಹಿಯಾಗಿ ವಿನ್ಯಾಸಗೊಳಿಸಲಾಗಿದೆ. ವೀಲ್ಚೇರ್ ಪ್ರವೇಶ, ಪ್ರವೇಶಿಸಬಹುದಾದ ವಿಶ್ರಾಂತಿ ಕೊಠಡಿಗಳು ಮತ್ತು ಮೀಸಲಾದ ಕುಂದುಕೊರತೆ ನಿವಾರಣಾ ವ್ಯವಸ್ಥೆಯಂತಹ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
೫ ರಇಂದ ೧೭ ವರ್ಷ ವಯಸ್ಸಿನ ಮಕ್ಕಳಿಗೆ ಕಡ್ಡಾಯ ಬಯೋಮೆಟ್ರಿಕ್ ನವೀಕರಣಗಳನ್ನು ಸೆಪ್ಟೆಂಬರ ೩೦ ವರೆಗೆ ಉಚಿತವಾಗಿ ನೀಡಲಾಗುತ್ತಿದೆ. ಈ ಸೌಲಭ್ಯವು ಶಾಲಾ ಶಿಬಿರಗಳು ಮತ್ತು ಆಧಾರ ಸೇವಾ ಕೇಂದ್ರಗಳಲ್ಲಿ ಲಭ್ಯವಿದೆ. ಆಧಾರ ಸೇವಾ ಕೇಂದ್ರವನ್ನು ಎ.ಎಸ್.ಕೆ ವ್ಯವಸ್ಥಾಪಕರು ನಿರ್ವಹಿಸಲಿದ್ದು, ಬಂದಂತಹ ಕುಂದುಕೊರತೆಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ಅಲ್ಲದೇ ಸಕಾಲದಲ್ಲಿ ಪರಿಹಾರ ಬಗ್ಗೆ ಖಚಿತಪಡಿಸಕೊಳ್ಳಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಿ.ಪಂ ಮುಖ್ಯ ಯೋಜನಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ, ಆಧಾರ ಸೇವಾ ಕೇಂದ್ರದ ಯುಡಿಐಡಿ ವಿಭಾಗದ ಅಧಿಕಾರಿ ಅರ್ಚನಾ, ಸಹಾಯಕ ವ್ಯವಸ್ಥಾಪಕ ಪ್ರಸಾದ, ಆಫರೇಶನಲ್ ಮ್ಯಾನೇಜರ್ ಅಭಿಷೇಕ ಕೊಣ್ಣೂರ, ಜಿಲ್ಲಾ ಆಧಾರ ಕನ್ಸಲ್ಟಂಟ ಸಿದ್ದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.