ಬಳ್ಳಾರಿ:24. ಕನ್ನಡದ ವರನಟ, ಪದ್ಮಭೂಷಣ ಡಾ. ರಾಜ್ಕುಮಾರ್ ಅವರ ಜನ್ಮದಿನದ ಅಂಗವಾಗಿ ಬಳ್ಳಾರಿ ನಗರದ ರಾಜ್ಕುಮಾರ್ ಉದ್ಯಾನವನದಲ್ಲಿರುವ ಅವರ ಪ್ರತಿಮೆಗೆ ಮಹಾನಗರ ಪಾಲಿಕೆಯ ಮಹಾಪೌರ ಪಿ. ಗಾದೆಪ್ಪ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ರಾಜ್ಕುಮಾರ್ ಅವರ ವ್ಯಕ್ತಿತ್ವ, ಸಂಸ್ಕೃತಿ ಪ್ರೀತಿ ಮತ್ತು ಸಾಮಾಜಿಕ ಮೌಲ್ಯಗಳನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾಪೌರ ಪಿ. ಗಾದೆಪ್ಪ ಅವರು, “ಡಾ. ರಾಜ್ಕುಮಾರ್ ಅವರು ಕೇವಲ ನಟರಲ್ಲ, ಕನ್ನಡಿಗರ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿರುವ ಸಾಂಸ್ಕೃತಿಕ ಶಕ್ತಿ. ಅವರ ಜೀವನ, ಸರಳತೆ, ನಾಡು-ನುಡಿ ಬಗ್ಗೆ ಹೊಂದಿದ್ದ ಅಪಾರ ಅಭಿಮಾನ ಇಂದಿನ ಪೀಳಿಗೆಗೆ ಮಾದರಿಯಾಗಿದೆ. ಕನ್ನಡ ಭಾಷೆ, ಸಂಸ್ಕೃತಿ ಉಳಿವಿಗೆ ಅವರು ನೀಡಿದ ಕೊಡುಗೆ ಅಪಾರ. ಅವರ ಆದರ್ಶಗಳನ್ನು ಯುವಜನತೆ ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.
“ಅಣ್ಣಾವ್ರು ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲ, ಸಮಾಜದಲ್ಲಿ ನೈತಿಕ ಮೌಲ್ಯಗಳ ಪ್ರತೀಕವಾಗಿದ್ದರು. ಅವರ ದೇಶಭಕ್ತಿ, ಕನ್ನಡಾಭಿಮಾನ ಮತ್ತು ಮಾನವೀಯತೆ ಎಲ್ಲರಿಗೂ ದಾರಿದೀಪ. ಇಂತಹ ಮಹಾನ್ ವ್ಯಕ್ತಿಯ ಜನ್ಮದಿನವನ್ನು ಆಚರಿಸುವುದು ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆಯ ವಿಚಾರ” ಎಂದು ಗಾದೆಪ್ಪ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಾಜ್ಕುಮಾರ್ ಅಭಿಮಾನಿಗಳು ಪುಷ್ಪಾರ್ಚನೆ ಸಲ್ಲಿಸಿ, ಘೋಷಣೆಗಳ ಮೂಲಕ ಅಣ್ಣಾವ್ರಿಗೆ ಗೌರವ ನಮನ ಸಲ್ಲಿಸಿದರು. ಅಭಿಮಾನಿಗಳಿಂದ ರಾಜ್ಕುಮಾರ್ ಅವರ ಹಾಡುಗಳು, ಸಂಭಾಷಣೆಗಳ ಸ್ಮರಣೆ ಮೂಲಕ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ನಗರದಲ್ಲಿ ಕನ್ನಡದ ಕೀರ್ತಿಯನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಕಲಾವಿದನ ಜನ್ಮದಿನವನ್ನು ಗೌರವಪೂರ್ವಕವಾಗಿ ಆಚರಿಸಿರುವುದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಹಲವಾರು ಅಭಿಮಾನಿಗಳು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.