ಬಳ್ಳಾರಿ, ಏ.23: ನಗರದ ಖ್ಯಾತ ಶಿಕ್ಷಣ ಸಂಸ್ಥೆಯಾದ ಶಾರದಾ ವಿದ್ಯಾಪೀಠ ಶಾಲೆಯು 2025–26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿ ಗಮನ ಸೆಳೆದಿದೆ.
ಈ ಬಾರಿ ಶಾಲೆಯ ವಿದ್ಯಾರ್ಥಿನಿ ಎನ್. ಜ್ಞಾನೇಶ್ವರಿ 579 ಅಂಕಗಳನ್ನು ಪಡೆದು ಶೇ.93 ಫಲಿತಾಂಶದೊಂದಿಗೆ ಶಾಲೆಗೆ ಕೀರ್ತಿ ತಂದಿದ್ದಾರೆ. ಜೊತೆಗೆ ಅನೇಕ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ.
ಜ್ಞಾನೇಶ್ವರಿಯ ಸಾಧನೆಗೆ ಅವರ ಕಟ್ಟುನಿಟ್ಟಾದ ಪರಿಶ್ರಮ, ನಿರಂತರ ಅಭ್ಯಾಸ ಹಾಗೂ ಗುರಿ ಸಾಧನೆಗೆ ತೋರಿದ ಬದ್ಧತೆ ಪ್ರಮುಖ ಕಾರಣವಾಗಿದೆ. ಶಿಕ್ಷಕರ ಸಮರ್ಪಿತ ಬೋಧನೆ, ಸೂಕ್ತ ಮಾರ್ಗದರ್ಶನ ಹಾಗೂ ಪೋಷಕರಾದ ತಂದೆ ಓಬುಳಪತಿ ಮತ್ತು ತಾಯಿ ಪದ್ಮಾವತಿ ಅವರ ಪ್ರೋತ್ಸಾಹವೂ ಈ ಯಶಸ್ಸಿನ ಹಿಂದೆ ಮಹತ್ವದ ಪಾತ್ರ ವಹಿಸಿದೆ ಎಂದು ಶಾಲೆಯ ಮುಖ್ಯೋಪಾಧ್ಯೆ ಕವಿತಾ ತಿಳಿಸಿದ್ದಾರೆ.
ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಪೋಷಕರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿ, ಭವಿಷ್ಯದಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡುವಂತೆ ಶುಭಾಶಯ ಕೋರಿದ್ದಾರೆ.