ಬಾಗಲಕೋಟೆ : ಮೇ ೧೬: ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ರೇಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆ ಕುರಿತು ಸಂಸದ ಪಿ.ಸಿ.ಗದ್ದಿಗೌಡರ ಹಾಗೂ ಜಿಲ್ಲಾಧಿಕಾರಿ ಸಂಗಪ್ಪ ಅವರ ನೇತೃತ್ವದಲ್ಲಿ ಶುಕ್ರವಾರ ಚರ್ಚೆ ನಡೆಸಲಾಯಿತು.
ಜಿಲ್ಲಾಧಿಕಾರಿಗಳ ಸಭಾಂಗಭದಲ್ಲಿ ಭೂಸ್ವಾಧೀನ ಕುರಿತು ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಾಯಿತು. ರಾಷ್ಟ್ರೀಯ ಹೆದ್ದಾರಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಹಾಗೂ ರೇಲ್ವೆ ಯೋಜನೆಗಳ ವ್ಯಾಪ್ತಿಗೆ ಬೇಕಾಗುವ ಭೂಮಿ ಭೂಸ್ವಾಧೀನ ಹಾಗೂ ಬಾಕಿ ಪ್ರಕರಣಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಯೋಜನೆಗಳ ಅನುಷ್ಠಾನಕ್ಕೆ ಬೇಕಾಗುವ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಯೋಜನೆ ಅನುಷ್ಠಾನದಲ್ಲಿ ಕೆಲವೊಂದು ತೊಂದರೆಗಳು ಎದುರಾಗುವುದು ಸಹಜ. ಆದರೆ ಅವಗಳನ್ನು ಪರಿಹರಿಸಿಕೊಂಡು ಕಾಮಗಾರಿ ಕೆಲಸ ಪೂರ್ಣಗೊಳಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವವಾಗಿದೆ. ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿಲ್ಲ. ಇದರಿಂದ ಯೋಜನೆಗಳ ಅನುಷ್ಠಾನದಲ್ಲಿ ಕುಂಟಿತವಾಗುತ್ತಿದೆ. ಬಾಗಲಕೋಟೆ-ಕುಡಚಿ ರೇಲ್ವೆ ಮಾರ್ಗಕ್ಕಾಗಿ ಭೂಸ್ವಾಧೀನ ಕಾರ್ಯ ಪ್ರಾರಂಭವಾಗಿ ಹಲವು ವರ್ಷಗಳು ಕಳೆದಿವೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇದಕ್ಕೆ ಕಾರಣಗಳೇನು ಎಂಬ ಬಗ್ಗೆ ಪ್ರಶ್ನೆಗಳನ್ನು ಹಾಕಲಾಯಿತು.
ಯೋಜನೆ ಅನುಷ್ಠಾದಲ್ಲಿ ವಿಳಂಬ ಏಕೆ, ನ್ಯಾಯಾಲಯ ಪ್ರಕರಣಗಳು ಇದ್ದಲ್ಲಿ ಅವು ಯಾವ ಹಂತದಲ್ಲಿವೆ ಎಂಬ ಮಾಹಿತಿಯನ್ನು ಅಧಿಕಾರಿಗಳಿಗೆ ಕೇಳಲಾಯಿತು. ಯೋಜನೆ ಅನುಷ್ಠಾನಕ್ಕೆ ಹಿಂದೆಟು ಹಾಕುತ್ತಿರುವುದು ಬೇಜವಾಬ್ದಾರಿತನ ಎದ್ದು ತೋರುತ್ತಿದೆ. ಇದರಿಂದ ಸರಿಯಾಗಿ ಕೆಲಸ ಆಗುತ್ತಿಲ್ಲ. ನಿಮ್ಮ ವರ್ತನೆ ಬದಲಾಯಿಸಿಕೊಳ್ಳುವಂತೆ ರೇಲ್ವೆ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಜು ನಾಯಕಗೆ ಸೂಚನೆ ನೀಡಲಾಯಿತು.
ರಬಕವಿ-ಬನಹಟ್ಟಿ ಭಾಗದಲ್ಲಿ ೨೫ ಕಿ.ಮೀ ಬಗ್ಗೆ ಪ್ರಸ್ತಾವನೆ ನೀಡಿಲ್ಲ. ಲೋಕಾಪೂರದಿಂದ ದಾದನಟ್ಟಿ ವರೆಗಿನ ರೇಲ್ವೆ ಮಾರ್ಗದಲ್ಲಿ ೬.೬ ಕಿ.ಮೀ ಕೆಲಸ ಆಗುತ್ತಿಲ್ಲ. ಇದಕ್ಕೆ ಕಾರಣವೇನು. ದಾದನಟ್ಟಿಯಿಂದ ಯಾದವಾಡ ಮಾರ್ಗದ ಬಗ್ಗೆ ಹಾರಿಕೆ ಉತ್ತರ ಕೊಡುವುತ್ತಿರುವ ಅಧಿಕಾರಿಗಳ ಮೇಲೆ ಸಂಸದರು ಅಸಮಾಧಾನ ವ್ಯಕ್ತಪಡಿಸಿ, ವಾರದಲ್ಲಿ ಪ್ರಗತಿ ತೋರಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ಗದ್ದನಕೇರಿಯಿಂದ ಶಿರೂರವರೆಗಿನ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ೨.೭ ಕಿ.ಮೀ ರಸ್ತೆ ನಿರ್ಮಾಣ ಕಾಮಗಾರಿ ಮಾತ್ರ ಬಾಕಿ ಇರುತ್ತದೆ. ಇದು ಕೂಡಾ ಶಿಘ್ರದಲ್ಲಿ ಪೂರ್ಣಗೊಳಿಸಬೇಕು. ಅಲ್ಲದೇ ಪಟ್ಟದಕಲ್ಲದಿಂದ ಶಿರೂರವರೆಗಿನ ರಸ್ತೆ ನಿರ್ಮಾಣದಲ್ಲಿ ಅರಣ್ಯ ಇಲಾಖೆಯಿಂದ ವಿಳಂಬವಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದರೆ, ಅಧಿಕಾರಿಗಳಿಗೆ ಜನರ ತೊಂದರೆ ಅರ್ಥವಾಗುತ್ತಿಲ್ಲ. ಸರಿಯಾಗಿ ಕೆಲಸ ನಿರ್ವಹಿಸುವಂತೆ ತಿಳಿಸಲಾಯಿತು. ಜಿಲ್ಲೆಯಲ್ಲಿ ಹಾದು ಹೋಗುವ ಭಾರತ ಮಾಲಾ ಪ್ರೋಜೆಕ್ಟ ಬಗ್ಗೆಯೂ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಭೂ ದಾಖಲೆ ಇಲಾಖೆಯ ಉಪನಿರ್ದೇಶಕ ರವಿಕುಮಾರ ಎಂ, ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ದುರ್ಗಾದಾಸ ಸೇರಿದಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಪ್ರೋಜೆಕ್ಟ ಡೈರೆಕ್ಟರ, ಎಸ್ಎಲ್ಎಓ ಹಾಗೂ ಇತರರು ಇದ್ದರು.
