ಧಾರವಾಡ: "ಮನುಷ್ಯನ ಬುದ್ಧಿ ವಿಕಸನಕ್ಕೆ ಓದು ಅತ್ಯವಶ್ಯಕ. ಗ್ರಂಥಾಲಯಗಳು ಹೆಚ್ಚೆಚ್ಚು ಬೆಳೆಯಬೇಕು ಮತ್ತು ಗುಂಪು ಚರ್ಚೆಗಳ ಮೂಲಕ ವಿಷಯ ವಿನಿಮಯ ಮಾಡಿಕೊಳ್ಳುವುದರಿಂದ ಬುದ್ಧಿಮಟ್ಟ ಹೆಚ್ಚುತ್ತದೆ," ಎಂದು ಖ್ಯಾತ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಧಾರವಾಡದ ಜಿಲ್ಲಾ ಗ್ರಂಥಾಲಯ ಜಾಗೃತಿ ಸಮಿತಿಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ "ಮನೆಗೊಂದು ಗ್ರಂಥಾಲಯ ಅನುಷ್ಠಾನ" ಸಮಾರಂಭವನ್ನು ಇಲ್ಲಿನ ಡಾ. ವೀಣಾ ಬಿರಾದಾರ ಅವರ ನಿವಾಸದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಓದಿನ ಸಂಸ್ಕೃತಿ ಬೆಳೆಸುವ ಮಹತ್ವಾಕಾಂಕ್ಷಿ ಯೋಜನೆ
ಕಾರ್ಯಕ್ರಮದಲ್ಲಿ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿದ ಡಾ. ವೀಣಾ ಬಿರಾದಾರ್ ಅವರು, "ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸಾ ಅವರ ಕನಸಿನ ಕೂಸಾದ ಈ 'ಮನೆಗೊಂದು ಗ್ರಂಥಾಲಯ' ಯೋಜನೆಯು ನಮ್ಮ ಮನೆಯಲ್ಲಿ ಉದ್ಘಾಟನೆಗೊಳ್ಳುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಪುಸ್ತಕಗಳನ್ನು ಮನೆ ಮನೆಗೆ ತಲುಪಿಸಿ, ಓದುವ ಆಸಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಅತ್ಯುಪಯುಕ್ತವಾಗಿದೆ," ಎಂದು ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, "ಇಂತಹ ಸಾರಸ್ವತ ಕಾರ್ಯಕ್ರಮಗಳು ಸಮಾಜದಲ್ಲಿ ಓದಿನ ಸಂಸ್ಕೃತಿಯನ್ನು ಬೆಳೆಸಲು ಪೂರಕವಾಗಿವೆ. ಇಂದು ಧಾರವಾಡದ ಒಟ್ಟು ೭ ಮನೆಗಳಲ್ಲಿ ಈ ಗ್ರಂಥಾಲಯವನ್ನು ಅನುಷ್ಠಾನಗೊಳಿಸಲಾಗುತ್ತಿದೆ," ಎಂದು ಮಾಹಿತಿ ನೀಡಿದರು.
ಡಿಜಿಟಲ್ ಯುಗದಲ್ಲಿ ಪುಸ್ತಕದ ಮಹತ್ವ
ಇದೇ ಸಂದರ್ಭದಲ್ಲಿ ಜಿಲ್ಲಾ ಜಾಗೃತ ಸಮಿತಿಯ ಸಂಚಾಲಕರಾದ ಮಹಾಂತಪ್ಪ ನಂದೂರ ಅವರು ಮಾತನಾಡಿ, "ಇಂದಿನ ಡಿಜಿಟಲ್ ಯುಗದಲ್ಲಿ ಯುವ ಜನತೆಯಲ್ಲಿ ಪುಸ್ತಕ ಓದುವ ಹವ್ಯಾಸ ಹಾಗೂ ಜಾಗೃತಿ ಮೂಡಿಸುವ ಇಂಥ ಕಾರ್ಯಕ್ರಮಗಳು ಅತ್ಯವಶ್ಯಕವಾಗಿವೆ. ಈ ಯೋಜನೆಯು ರಾಜ್ಯಾದ್ಯಂತ ಒಟ್ಟು ಒಂದು ಲಕ್ಷ ಮನೆಗಳನ್ನು ತಲುಪುವ ಗುರಿ ಹೊಂದಿದೆ," ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಹೇಮಾ ಪಟ್ಟಣಶೆಟ್ಟಿ, ಕೆ.ಎಸ್. ಕೌಜಲಗಿ, ಚೈತ್ರಾ ಹರಪನಹಳ್ಳಿ, ಮಾಂತೇಶ್ ನರೇಗಲ್, ಚಿಂತನ್ ಹತ್ತಿಕಾಳ, ಸುರೇಶ್ ಗಾಡಿ ಹಾಗೂ ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದರು. ಚಂದ್ರಶೇಖರ ರೊಟ್ಟಿಗವಾಡ ಕಾರ್ಯಕ್ರಮ ನಿರೂಪಿಸಿದರೆ, ಶ್ರೀನಾಥ್ ಜೋಶಿ ವಂದನಾರ್ಪಣೆ ಮಾಡಿದರು.
