ಧಾರವಾಡ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸರ್ಕಾರದಲ್ಲಿ ಜಮೀರ್ ಅಹಮ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಧಾರವಾಡ ಅಂಜುಮನ್ ಇಸ್ಲಾಂ ಸಂಸ್ಥೆಯ ಉಪಾಧ್ಯಕ್ಷ ಬಸೀರ್ ಅಹ್ಮದ್ ಜಾಹಗೀರದಾರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯದ ನಾಯಕ ಜಮೀರ್ ಅಹಮ್ಮದ್ ಖಾನ್ ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಅವರನ್ನು ಸಚಿವ ಸಂಪುಟದಿಂದ ದೂರ ಇಟ್ಟಿರುವ ಕ್ರಮ ಖಂಡನೀಯ. ಮುಸ್ಲಿಂ ಸಮುದಾಯದ ಪರವಾಗಿ ಉತ್ತಮ ಕೆಲಸಗಳನ್ನು ಜಮೀರ್ ಅಹಮ್ಮದ್ ಖಾನ್ ಮಾಡಿದ್ದಾರೆ. ಸಚಿವರಾಗಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಆದರೂ ಜಮೀರ್ ಅಹಮ್ಮದ್ ಖಾನ್ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿರುವುದು, ಮುಸ್ಲಿಂ ಸಮುದಾಯದ ಜನರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದರು. ಜಮೀರ್ ಅಹಮ್ಮದ್ ಖಾನ್ ಸೇರಿದಂತೆ ಐದು ಜನ ಹಿರಿಯ ಮುಸ್ಲಿಂ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ನ ಹಿರಿಯ ಮುಖಂಡ ದೀಪಕ ಚಿಂಚೋರೆ ಅವರು ಮಾತನಾಡಿ ಮುಸ್ಲಿಂ ಸಮುದಾಯ, ದಲಿತ ಸಮುದಾಯ, ಓಬಿಸಿ ಸಮುದಾಯಗಳು ಕಾಂಗ್ರೆಸ್ನ ವೋಟ್ ಬ್ಯಾಂಕ್. ಹೀಗಾಗಿ ಮುಸ್ಲಿಂ ಸಮುದಾಯದ ಐವರು ಶಾಸಕರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡಬೇಕು ಸಿಎಂ ಪ್ರಮಾಣ ವಚನ ಸಂದರ್ಭದಲ್ಲೇ ಇನ್ನೊಬ್ಬ ಮುಸ್ಲಿಂ ಶಾಸಕರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಮುಸ್ಲಿಂ ಸಮುದಾಯದ ಜನ ವ್ಯಕ್ತಿಗೆ ಮತ ಹಾಕುವುದಿಲ್ಲ. ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಾರೆ. ಹೀಗಾಗಿ ನಮ್ಮ ಪಕ್ಷ ಮುಸ್ಲಿಂ ಸಮುದಾಯದ ಐವರು ಶಾಸಕರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಜಮೀರ್ ಅಹ್ಮದ್ ಅವರಿಗೆ ಮೊದಲ ಪಟ್ಟಿಯಲ್ಲೇ ಸಚಿವ ಸ್ಥಾನ ಸಿಗಬೇಕಿತ್ತು. ಅವರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮುಸ್ಲಿಂ ಮತಗಳು ಮುಖ್ಯವಾಗಿವೆ. ಜಮೀರ್ ಅವರಿಗೆ ಸಚಿವ ಸ್ಥಾನ ಕೊಡದೇ ಇರುವುದು ಅವರಿಗೆ ಮಾಡಿದ ಅಪಮಾನ. ಕಾಂಗ್ರೆಸ್ ಒಳ್ಳೆಯ ಪಕ್ಷ. ಉಳಿದವರಿಗೆ ಸಚಿವ ಸ್ಥಾನ ಕೊಟ್ಟಂತೆ ಮುಸ್ಲಿಂ ಸಮುದಾಯಕ್ಕೂ ಕೊಡಬೇಕಿತ್ತು. ಜಮೀರ್ ಜನರಿಗೆ ಬೇಕಾದವರು. ಅವರನ್ನು ಷಡ್ಯಂತ್ರದಿಂದ ಬಚಾವ್ ಮಾಡಬೇಕಿದೆ. ನಾನು ರಾಹುಲ್ ಗಾಂಧಿ ಅವರಿಗೆ ಮನವಿ ಮಾಡುತ್ತೇನೆ, ಜಮೀರ್ ಹಲವು ಅಂಜುಮನ್ ಸಂಸ್ಥೆಗಳಿಗೆ ಸಹಾಯ ಮಾಡಿದ್ದಾರೆ. ಅವರು ರಾಜ್ಯದ ದೊಡ್ಡ ನಾಯಕರಿದ್ದಾರೆ.ಅವರಿಗೆ ಸಚಿವ ಸ್ಥಾನ ನೀಡಿ ಎಂದು ಆಗ್ರಹಿಸಿದರು
ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ. ಬಶೀರ ಅಹ್ಮದ ಜಹಾಗೀರದಾರ. ಕಾರ್ಯದರ್ಶಿಗಳಾದ ಡಾ. ಎಸ್. ಎಸ್. ಸರಗಿರೋ ಖಜಾಂಚಿ ಶ್ರೀ, ರಪೀಕ ಅಹ್ಮದ ಶಿರಹಟ್ಟಿ, ಸಂಸ್ಥೆಯ ಮಾಜಿ ಕಾರ್ಯದರ್ಶಿ ಮತ್ತು ಶ್ರೀ. ನಜೀರ ಮನಿಯಾರ, ಆಡಳಿತ ಮಂಡಳಿಯ ಸದಸ್ಯರು, ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ. ದೀಪಕ ಚಿಂಚೊರೆ ಹಾಗೂ ಮಹಾನಗರ ಪಾಲಿಕೆಯ ಸದಸ್ಯರಾದ ಮೆಹಬೂಬಖಾನ ಪಠಾಣ, ಉಪಸ್ಥಿತರಿದ್ದರು.