ಬೀಳಗಿ - ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಡಿ ಕೆ ಶಿವುಕುಮಾರ ನೇತ್ರತ್ವದ ಸರ್ಕಾರದ ಸಚಿವ ಸಂಪುಟದಲ್ಲಿ ಬೀಳಗಿ ಶಾಸಕ ಜೆ.ಟಿ.ಪಾಟೀಲ ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಬೀಳಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನಮಂತ ಕಾಖಂಡಕಿ ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡರು ಶನಿವಾರ ಕಾಂಗ್ರೆಸ್ ತಾಲ್ಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಜೆ.ಟಿ ಪಾಟೀಲ ಅವರು ನಿರಂತರವಾದ ಹೋರಾಟಗಳ ಮೂಲಕ ಜನರ ಸಮಸ್ಯೆಗಳ ಬಗ್ಗೆ ಸದಾ ಗಟ್ಟಿಯಾಗಿ ಧ್ವನಿ ಎತ್ತುವ ಮನೋಭಾವದವರು. ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು
ದಲಿತ ಸಂಘರ್ಷ ಸಮಿತಿಯ ಬೆಳಗಾವಿ ಭಾಗದ ಸಂಚಾಲಕ ಮಹಾದೇವ ಹಾದಿಮನಿ ಮಾತನಾಡಿ ಜೆ.ಟಿ. ಪಾಟೀಲರಿಗೆ ಅನುಭವ, ಹಿರಿತನ, ಪಕ್ಷ ನಿಷ್ಠೆ,ಮೌಲ್ಯಗಳ ಆಧಾರದ ಮೇಲೆ ಮುಂಬರುವ ಕ್ಯಾಬಿನೆಟ್ ನಲ್ಲಿ ಸ್ಥಾನ ನೀಡಬೇಕೆಂದರು.
ಕಾಂಗ್ರೆಸ್ ಪಕ್ಷದ ಕೋಶಾಧ್ಯಕ್ಷ ಅಣವೀರಯ್ಯ ಪ್ಯಾಟಿಮಠ ಮಾತನಾಡಿ ಬೀಳಗಿ ತಾಲ್ಲೂಕಿಗೆ ಇಲ್ಲಿಯವರೆಗೆ ನಮ್ಮ ಪಕ್ಷದ ವಿಧಾನಸಭೆಯ ಶಾಸಕರಾದವರಿಗೆ ಸಚಿವರಾಗುವ ಅವಕಾಶ ಸಿಕ್ಕಿಲ್ಲ ಅಲ್ಲದೆ ಜಿಲ್ಲೆಯ ಹಿರಿಯ ರಾಜಕಾರಣಿಯೂ ಆಗಿರುವ ಜೆ. ಟಿ.ಪಾಟೀಲರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಹೇಳಿದರು .
ಕಾಂಗ್ರೆಸ್ ಪಕ್ಷದ ಎಸ್.ಸಿ. ಘಟಕದ ತಾಲ್ಲೂಕಾ ಅಧ್ಯಕ್ಷ ಬಸವರಾಜ ಹಳ್ಳದಮಣಿ ಮಾತನಾಡಿ ಉತ್ತರ ಕರ್ನಾಟಕದ ಹಿರಿಯ ರಾಜಕಾರಣಿ ಜೆ.ಟಿ.ಅವರು ಕೃಷಿಯಲ್ಲಿ ಅಪಾರ ಅನುಭವ ಹಾಗೂ ಆಸಕ್ತಿ ಹೊಂದಿರುವಂತಹ ಇವರಿಗೆ ಕೃಷಿ ಸಚಿವರನ್ನಾಗಿ ಮಾಡಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸಿದ್ದು ಸಾರಾವರಿ,ಮುಖಂಡರಾದ ನೇಮಿರಾಜ ದೇಸಾಯಿ ರಸೂಲ್ ಮುಜಾವರ, ಉದಯ ರಜಪೂತ,ಹನಮಂತ ಸೂಳಿಕೇರಿ, ರೇಖಾ ಕಟ್ಟೆಪ್ಪನವರ, ಸದಾಶಿವ ಜೂಂಜುರಿ ಇದ್ದರು.
