ಬಳ್ಳಾರಿ. ಜು. 11 : ಪ್ರಸ್ತುತ ಕಾಲಘಟ್ಟದಲ್ಲಿ ನಾವು ಭೌತಿಕ ಸಂಪತ್ತನ್ನು ಗಳಿಸುವದನ್ನೇ ಜೀವನದ ಪರಮಗುರಿಯನ್ನಾಗಿಸಿ ಕೊಂಡು ಮಾನವೀಯ ಸಂಬಂಧಗಳು ದಿನದಿಂದ ದಿನಕ್ಕೆ ಬದಲಾಗಿ ಸಾಮಾಜಿಕ ಮೌಲ್ಯಗಳ ಕುಸಿತಕ್ಕೆ ಕಾರಣವಾಗಿದೆ ಎಂದು ಆರ್ ವೈ ಎಂ ಸಿ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ತಿಮ್ಮನಗೌಡ ಅಭಿಪ್ರಾಯ ಪಟ್ಟರು
ಅವರು ಶುಕ್ರವಾರದಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕುಪ್ಪಗಲ್ ಅಯ್ಯಪ್ಪ ನ್ಯಾಶನಲ್ ಸ್ಕೂಲ್ ನಲ್ಲಿ ಆಯೋಜಿಸಿದ್ದ ಕುಪ್ಪಗಲ್ಲು ನಾಗಪ್ಶ ದತ್ತಿ, ವಡ್ಡಿನಶೆಟ್ರ ಸಿದ್ಧರಾಮಯ್ಯ ಮತ್ತು ಮಹಾಂತಮ್ಮ ದತ್ತಿ, ಸಂಗನಕಲ್ಲು ಶಾಂತಮ್ಮ ಸ್ಮಾರಕ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೆ.ಪಿ.ಎಸ್ ಬಾಲಕಿಯರ ಪ್ರೌಢಶಾಲೆಯ ಸಹಶಿಕ್ಷಕರಾದ ಪಿ. ಹರಿಪ್ರಸಾದ್ ವಿಶೇಷ ಉಪನ್ಯಾಸ ನೀಡಿ, ನೈತಿಕ ಜೀವನ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಹೀಗಾಗಿ ವಿದ್ಯಾರ್ಥಿಗಳು ಬಾಲ್ಯದಿಂದಲೂ ನೈತಿಕ ಮೌಲ್ಯಗಳನ್ನು ರೂಢಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಕಾತ್ಯಾಯಿನಿ ಎಂ ಮರಿದೇವಯ್ಯ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಂಡು ತಮ್ಮ ಬದುಕನ್ನು ತಿದ್ದಿಕೊಂಡು ನೈತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ತಿಳಿಸಿದರು.
ವೀ.ವಿ. ಸಂಘದ ನೌಕರರ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕರಾದ ಕೋಳೂರು ವೆಂಕಟೇಶಗೌಡ, ರಾಷ್ಟ್ರಕವಿ ಕುವೆಂಪು ಕನ್ನಡ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎಂ. ವಿಶ್ವನಾಥ ಶಾಸ್ತ್ರಿಯವರನ್ನು ಸನ್ಮಾನಿಸಲಾಯಿತು.
ನ್ಯಾಯವಾದಿಗಳಾದ ಅರವಿ ಭೀಮನಗೌಡ, ಕಣೆಕಲ್ಲು ಎರ್ರಿಸ್ವಾಮಿ, ಕುಪ್ಪಗಲ್ಲು ಗಿರಿಜಾ, ಕಸಾಪ ಮಾಜಿ ಅಧ್ಯಕ್ಷ ಹೆಚ್. ಹಂಪನಗೌಡ, ಕರ್ನಾಟಕ ಯುವಕ ಸಂಘದ ಮಾಜಿ ಅಧ್ಯಕ್ಷ ವಿ.ಎಸ್ ಬಸವರಾಜ್, ಚೆಂಬರ್ ಆಫ್ ಕಾಮರ್ಸ್ ನ ಉಪಾಧ್ಯಕ್ಷ ಸಂಗನಕಲ್ಲು ದೊಡ್ಡನಗೌಡ, ಶಾಲೆಯ ಮುಖ್ಯೋಪಾಧ್ಯಾಯಿನಿ ಹೆಚ್ ಆಶಾ, ಕಸಾಪ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ , ದತ್ತಿದಾನೆಗಳ ಕುಟುಂಬ ವರ್ಗದವರು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು.