ಸಿರುಗುಪ್ಪ16:.: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಳ್ಳಿಗಳ ಮಟ್ಟದಲ್ಲಿ ಆಯೋಜಿಸುತ್ತಿರುವುದು ಪ್ರಶಂಸನೀಯ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಹೇಳಿದರು.
ತಾಲೂಕಿನ ಬೂದುಗುಪ್ಪ ಗ್ರಾಮದಲ್ಲಿ ಅಭಿನಯ ಕಲಾಕೇಂದ್ರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಧನಸಹಾಯ ಯೋಜನೆಯಡಿ ನಿನ್ನೆ ರಾತ್ರಿ ಆಯೋಜಿಸಿದ್ದ ‘ನಮ್ಮ ಹಳ್ಳಿ ಕಲಾ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘದ ಅಧ್ಯಕ್ಷ ಕೆ. ಜಗದೀಶ್ ಹೊಸ ನಾಟಕಗಳನ್ನು ರಚಿಸಿ ಗ್ರಾಮೀಣ ಭಾಗಗಳಲ್ಲಿ ನಿರಂತರ ಕಲಾಪ್ರದರ್ಶನ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಾದ ಇಲಕಲ್ ಉಮಾರಾಣಿ, ಜಿಲಾನಿ ಭಾಷಾ ಹಾಗೂ ಭಾವಳ್ಳಿ ರೇಣುಕಾ ಅವರಂತಹ ಹಿರಿಯ ಕಲಾವಿದರನ್ನು ಗ್ರಾಮೀಣ ವೇದಿಕೆಗೆ ಆಹ್ವಾನಿಸಿರುವುದು ಸಂತಸದ ವಿಚಾರ ಎಂದರು.
ಹಿರಿಯ ಕಲಾವಿದೆ ಇಲಕಲ್ ಉಮಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕರ್ನಾಟಕ ರಾಜ್ಯ ಬಯಲಾಟ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ವಿಶ್ವನಾಥ ಸಾಹುಕಾರ, ರಂಗಭೂಮಿ ಕಲಾವಿದೆ ಭಾವಳ್ಳಿ ರೇಣುಕಾ ಹಾಗೂ ಕೂಡ್ಲಿಗಿ ದಿವ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಧ್ಯರಾತ್ರಿವರೆಗೆ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು. ಎಸ್.ಕೆ. ಸಮೀರ್ ಅವರ ಏಕವ್ಯಕ್ತಿ ನೃತ್ಯ, ಡಿ.ಎನ್. ರೇಣುಕಾ ಬಾವಳ್ಳಿ ಅವರ ರಂಗಗೀತೆ ಹಾಗೂ ಎಸ್.ಕೆ. ಜಿಲಾನಿ ಭಾಷಾ ತಂಡದ ಸಮೂಹ ನೃತ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಉತ್ತನೂರು ರಾಮಣ್ಣ ಅವರ ಹಾರ್ಮೋನಿಯಂ ಸಾಥ್ ಹಳೆಯ ಹಾಡುಗಳ ನೆನಪು ಮೂಡಿಸಿತು.
ಗೀತಾ ಹೂಗಾರ ರಚಿಸಿದ ‘ಸಂಗಯ್ಯನ ಸಂಸಾರ’ ನಾಟಕದಲ್ಲಿ ಇಲಕಲ್ ಉಮಾ, ಕೂಡ್ಲಿಗಿ ದಿವ್ಯ ಹಾಗೂ ಬಿ. ಗುರುರಾಜರಾವ್ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದರು. ಅತ್ತೆ–ಸೊಸೆಯರ ಸನ್ನಿವೇಶಗಳು ನಗೆಗಡಲಲ್ಲಿ ತೇಲಿಸಿದವು.
ಗಾಳಿ ಮಲ್ಲಯ್ಯ ವಿರಚಿತ ‘ಶ್ರೀ ರೇಣುಕಾ ಮಹಾತ್ಮೆ’ ಬಯಲಾಟಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೂದುಗುಪ್ಪ ಎರಿಸ್ವಾಮಿ ಅವರ ಹಾರ್ಮೋನಿಯಂ ವಾದನ ಗಮನ ಸೆಳೆಯಿತು.
ರೇಣುಕಾ ಪಾತ್ರದಲ್ಲಿ ಹಿರೇಹಾಳು ಅನಿತಾ, ಮೇನಕಾ ಪಾತ್ರದಲ್ಲಿ ರಾರಾವಿ ನೂರ್ ಜಾ, ಜಮದಗ್ನಿ ಪಾತ್ರದಲ್ಲಿ ಶಂಕರ ಬಂಡೆ ಪೀರಸಾಬ್, ಪರಶುರಾಮ ಪಾತ್ರದಲ್ಲಿ ಬಸರಕೋಡು ಗಾದಿಲಿಂಗ ಹಾಗೂ ಕಾರ್ತ್ಯವೀರಾಜುನ ಪಾತ್ರದಲ್ಲಿ ಕೂರಿಗನೂರು ರಮೇಶ್ ಅಭಿನಯಿಸಿದರು. ತಬಲಾದಲ್ಲಿ ಗೋಟೂರು ಗಾದಿಲಿಂಗ ಹಾಗೂ ರಿದಂ ಪ್ಯಾಡ್ನಲ್ಲಿ ವಿಜಯಕುಮಾರ್ ಎಚ್. ವೀರಾಪುರ ಸಂಗೀತ ನೀಡಿದರು. ಶ್ರೀ ಬಸವೇಶ್ವರ ರಂಗಸಜ್ಜಿಕೆಯ ವೇಷಭೂಷಣಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು.
