ರಾಮದುರ್ಗ,ಮೇ,೨೬: ತಾಲೂಕಿನ ವೀರಭದ್ರೇಶ್ವರ ಹಾಗೂ ಬಸವೇಶ್ವರ ಏತ ನೀರಾವರಿ ಕಾಮಗಾರಿ ವಿಳಂಭ ಧೋರಣೆ ಖಂಡಿಸಿ ಸೋಮವಾರ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ವಿವಿಧ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಬೆಳಗಾವಿ-ರಾಯಚೂರ ರಾಜ್ಯ ಹೆದ್ದಾರಿ ಬಂದ್ ಮಾಡಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ತಾಲೂಕಿನ ವಿವಿಧ ಮಠಾಧೀಶರು ಹಾಗೂ ಎರಡು ಏತ ನೀರಾವರಿ ಕಾಮಗಾರಿಗಳ ವ್ಯಾಪ್ತಿಯ ಗ್ರಾಮಗಳ ರೈತರು, ತಾಲೂಕಿನ ರೈತ ಮುಖಂಡರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ ರೈತ ಸಮೂಹ ನೀರಾವರಿ ಕಾಮಗಾರಿಗಳ ವಿಳಂಭ ಧೋರಣೆ ವಿರುದ್ಧ ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಸರಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಶಶಿಕಾಂತ ಗೂರೂಜಿ ಅವರು ಮಾತನಾಡಿ, ಶಾಸಕ ಅಶೋಕ ಪಟ್ಟಣ ಅವರು ಮುಖ್ಯಮಂತ್ರಿಗಳೊಂದಿಗೆ ನಿಕಟ ಸಂಪರ್ಕವುಳ್ಳವರಾಗಿದ್ದು, ಅವರ ಗಮನಕ್ಕೆ ತಂದು ಏತ ನೀರಾವರಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿತ್ತು. ಆದರೆ ಇನ್ನು ಮುಂದೆ ಇದೇ ರೀತಿ ವಿಳಂಭವಾದರೆ ನಾವು ಸಹಿಸುವುದಿಲ್ಲ. ರೈತರು ತಮ್ಮ ಕೆಲಸಗಳನ್ನು ಮಾಡಿಕೊಂಡು ಬರಲು ಬೆಂಗಳೂರಿಗೆ ಹೋಗಬೇಕಿಲ್ಲ. ಸ್ಥಳೀಯ ಜನತೆಯ ಸಮಸ್ಯೆಗಳನ್ನು ಪರಿಹರಿಸಿಕೊಂಡು ಬೆಂಗಳೂರಿಗೆ ಹೋಗಿ ಬರಲು ಶಾಸಕರನ್ನು ೩ ಲಕ್ಷ ಸಂಬಳ ಕೊಟ್ಟು ಇಟ್ಟುಕೊಂಡಿದ್ದೇವೆ. ಜನಪ್ರತಿನಿಧಿಗಳು ರೈತರ ಅನ್ನ ಊಂಡು ಅವರಿಗೆ ಬೆಳೆ ಬೆಳೆಯಲು ನೀರಾವರಿ ಸೌಲಭ್ಯ ಕಲ್ಪಿಸುವ ಕೆಲಸ ಮಾಡದೇ ಇರುವುದು ದುರ್ದೈವದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜನರ ಸೇವೆ ಜನಾರ್ಧನ ಸೇವೆ ಎಂಬುವದನ್ನು ರಾಜಕಾರಣಿಗಳು ಅರಿತುಕೊಳ್ಳಬೇಕು. ನಮ್ಮ ಸೇವೆ ಮಾಡಲು ಹಿಂದೇಟು ಹಾಕುವ ರಾಜಕಾರಣಿಗಳಿಗೆ ರೈತರು ಒಗ್ಗಟ್ಟಿನಿಂದ ಪಾಠ ಕಲಿಸಬೇಕಾಗುತ್ತದೆ. ರೈತರ ವಿಷಯದಲ್ಲಿ ರಾಜಕೀಯ ಮಾಡಿದಲ್ಲಿ ಯಾವುದೇ ಪಕ್ಷದವರಿದ್ದರೂ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಮಾತನಾಡಿ, ಸರಕಾರಕ್ಕೆ ಬಿಟ್ಟಿ ಭಾಗ್ಯಗಳನ್ನು ಕೊಡಲು ಹಣವಿದೆ. ಆದರೆ ರೈತರು ನೀರಿಲ್ಲದೆ ಸಾಯುತ್ತಿದ್ದರೂ ಅವರಿಗೆ ನೀರಾವರಿ ಸೌಲಭ್ಯ ಒದಗಿಸಬೇಕೆಂಬ ಕಿಂಚತ್ತು ಕಾಳಜಿ ಇಲ್ಲ. ಶಾಸಕ ಅಶೋಕ ಪಟ್ಟಣ ಹಿರಿಯರು ಅವರ ಬಗೆಗೆ ನಮಗೆ ಗೌರವಿದೆ. ಅವರ ತಂದೆ-ತಾಯಿಗಳಿಬ್ಬರೂ ಶಾಸಕರಾಗಿದ್ದಾರೆ. ಮುಖ್ಯಮಂತ್ರಿಗಳೊಂದಿಗೆ ಸದಾ ಸಂಚರಿಸುತ್ತಲೇ ಇರುತ್ತಾರೆ. ಮುಖ್ಯಮಂತ್ರಿಗಳನ್ನು ಮೇಲಿಂದ ಮೇಲೆ ಒತ್ತಾಯಿಸುತ್ತಿದ್ದರೆ ಇಷ್ಟೊತ್ತಿಗೆ ಕಾಮಗಾರಿಗಳು ಮುಗಿಯುತ್ತಿದ್ದವು. ಶಾಸಕರು ಶೀಘ್ರ ನೀರಾವರಿ ಇಲಾಖೆಯ ಎಂಡಿ ಅವರೊಂದಿಗೆ ನಿಗಧಿತ ಅವಧಿಯಲ್ಲಿ ಕಾಮಗಾರಿ ಮುಗಿಸಿಕೊಡುವ ಲಿಖಿತ ಭರವಸೆ ನೀಡಬೇಕು ಇಲ್ಲವಾದಲ್ಲಿ ಹೋರಾಟ ಉಗ್ರ ಸ್ವರೂಪ ಪಡೆದುಕೊಂಡು ರಾಮದುರ್ಗ ತಾಲೂಕು ಸಂಪೂರ್ಣ ಬಂದ್ ಮಾಡಿ, ರೈತರು ಚಿಮಾರಿ ಹಾಕುವ ಪರಸ್ಥಿತಿ ತಂದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು.
ಹೋರಾಟದ ಸಾನಿಧ್ಯ ವಹಿಸಿ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಹೋರಾಟ ಯಾರ ವಿರುದ್ಧವೂ ಅಲ್ಲ. ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಇಚ್ಛಾಶಕ್ತಿಯ ಕೊರತೆಯಿಂದ ಏತ ನೀರಾವರಿ ಕಾಮಗಾರಿಗಳು ವಿಳಂಭವಾಗಿವೆ. ರೈತರು ನ್ಯಾಯ ದೊರೆಯುವವರೆಗೂ ಹೋರಾಟದಿಂದ ಹಿಂದೆ ಸರಿಯಬಾರದು. ತಾಲೂಕಿನ ಸರ್ವ ಮಠಾಧೀಶರ ಬೆಂಬಲ ರೈತ ಹೋರಾಟಕ್ಕಿದೆ ಎಂದರು.
ಪ್ರತಿಭಟನೆಗೆ ವಿವಿಧ ಮಠಾದೀಶರಾದ ಎಂ. ಚಂದರಗಿಯ ವೀರಭದ್ರೇಶ್ವರ ಸ್ವಾಮೀಜಿ, ಮುಳ್ಳೂರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಟಕೋಳದ ಸಚ್ಚಿದಾನಂದ ಸ್ವಾಮೀಜಿ, ಬನ್ನೂರ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ರಾಮದುರ್ಗದ ಶಾಂತವೀರ ಸ್ವಾಮೀಜಿ, ಹೊಸಕೋಟಿಯ ಅಭಿನವ ರೇವಯ್ಯ ಸ್ವಾಮೀಜಿ, ಕುಳ್ಳೂರಿನ ಬಸವಾನಂದ ಭಾರತಿ ಸ್ವಾಮೀಜಿ, ಸಾಲಹಳ್ಳಿಯ ಅಭಿನವ ಸಿದ್ದಲಿಂಗೇಶ್ವರ ಸ್ವಾಮೀಜಿ, ಬೀಡಕಿಯ ಗಂಗಾಧರ ಸ್ವಾಮೀಜಿ, ಕಟಕೋಳದ ಸಿದ್ರಾಯಜ್ಜನವರು, ಬಟಕುರ್ಕಿಯ ರೇವಯ್ಯ ಸ್ವಾಮೀಜಿ, ಭಾಗೋಜಿಕೊಪ್ಪದ ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ, ತೊಂಡಿಕಟ್ಟಿಯ ಅಭಿನವ ವೆಂಕಟೇಶ ಮಹಾರಾಜರು, ಹರ್ಲಾಪೂರದ ರೇಣುಕ ಶಿವಯೋಗಿ ಶಿವಾಚಾರ್ಯರು, ನಾಗನೂರಿನ ಬಸವಗೀತಾ ತಾಯಿ ಬೆಂಬಲ ಸೂಚಿಸಿದರು.
ಬೆಂಬಲ ಸೂಚಿಸಿದ ಗಣ್ಯರು: ರೈತರ ಈ ಹೋರಾಟಕ್ಕೆ ಮಾಜಿ ಶಾಸಕ ಹಾಗೂ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಹಾದೇವಪ್ಪ ಯಾದವಾಡ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ಮಲ್ಲಣ್ಣ ಯಾದವಾಡ, ಬಿಜೆಪಿ ಮಂಡಲ ಅಧ್ಯಕ್ಷ ಡಾ.ಕೆ.ವಿ. ಪಾಟೀಲ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.
ಪಾದಯಾತ್ರೆ: ಪ್ರತಿಭಟನೆಗೂ ಮುನ್ನ ತಾಲೂಕಿನ ಗೊಡಚಿ ವೀರಭದ್ರೇಶ್ವರ ದೇವಸ್ಥಾನದಿಂದ ರೈತರು ಟ್ರ್ಯಾಕ್ಟರ್, ಎತ್ತಿನ ಚಕ್ಕಡಿ ಸೇರಿದಂತೆ ವಿವಿಧ ವಾಹನದೊಂದಿಗೆ ಪಾದಯಾತ್ರೆಯ ಮುಖಾಂತರ ಸಾಲಹಳ್ಳಿಯಲ್ಲಿ ನಿರ್ಮಿಸಿದ ಪ್ರತಿಭಟನಾ ವೇದಿಕೆಗೆ ಆಗಮಿಸಿ, ಸಮಾವೇಶಗೊಂಡಿತು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ವೈ.ಎಚ್. ಪಾಟೀಲ, ಮಾರುತಿ ಕೊಪ್ಪದ, ಸುರೇಶ ಗುಂಜೇರಿ, ಜಗದೀಶ ದೇವರಡ್ಡಿ, ರೈತ ಸಂಘದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ರೈತ ಸಂಘ ಹಾಗೂ ವಿವಿಧ ರೈತಪರ ಸಂಘಟನೆಗಳ ಪದಾಧಿಕಾರಿಗಳು, ರೈತ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.
