ಬೆಳಗಾವಿ : ಸಿನಿಮಾ ಒಂದು ಪ್ರಜಾಸತ್ತಾತ್ಮಕ ಕಲೆಯಾಗಿದ್ದು ಜನಸಮುದಾಯವನ್ನು ತಲುಪಬಲ್ಲ ಪ್ರಭಾವಶಾಲಿ ಮಾಧ್ಯಮವಾಗಿದೆ. ಅದು ಶ್ರಮ ಮತ್ತು ಸೃಜನಶೀಲತೆ ಒಟ್ಟಾಗಿ ಇರುವ ಬಹುವ್ಯಕ್ತಿ ಸೃಷ್ಟಿಯಾಗಿದ್ದು ಪ್ರಜಾಸತ್ಯಾತ್ಮಕ ಒಕ್ಕೂಟ ಕಲೆ. ಅದರ ಮೂಲಕ ಪ್ರಗತಿಪರ ವಿಚಾರಧಾರೆಯನ್ನು ಜನಸಾಮಾನ್ಯರಲ್ಲಿಗೆ ತಲುಪಿಸಬಹುದಾಗಿದೆ ಎಂದು ಹಿರಿಯ ಬಂಡಾಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ಪಟ್ಟರು.
ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸಭಾಭವನದಲ್ಲಿ ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಬೆಳಗಾವಿ ಜಿಲ್ಲಾ ಘಟಕ ಆಯೋಜಿಸಿದ್ದ 'ಬಂಡಾಯ ಸಾಹಿತ್ಯ:ಹೊಸ ತಲೆಮಾರು' ಅಭಿಯಾನದ ಅಂಗವಾಗಿ 'ಕನ್ನಡ ಸಿನಿಮಾ : ಪ್ರಗತಿಪರ ನೆಲೆಗಳ ಸ್ವರೂಪ' ಎನ್ನುವ ರಾಜ್ಯ ಮಟ್ಟದ ವಿಚಾರ ಸಂಕಿರಣದ ಮೊದಲ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಸಿನಿಮಾಗಳು ಕನ್ನಡ ಸಾಹಿತ್ಯದ ಮೂಲ ಆಶಯಕ್ಕೆ ಧಕ್ಕೆ ಬಾರದಂತೆ ಮರುಸೃಷ್ಟಿಗೆ ಪ್ರಾಧಾನ್ಯತೆ ನೀಡಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಮುಖ್ಯವಾಹಿನಿ ಕನ್ನಡ ಸಿನೆಮಾಗಳ ಮೂಲ ಧಾರೆ ಪ್ರಗತಿಪರ ಚಿಂತನೆಯೇ ಆಗಿದೆ. ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಸಿನಿಮಾಗಳಲ್ಲಿ ಉಪಧಾರೆಗಳ ಮೂಲಕ ಹೊಸ ಚಿಂತನೆಗಳನ್ನು ರೂಪಿಸಿವೆ. ಸಿನಿಮಾ ತಂತ್ರಜ್ಞಾನ ಎಷ್ಟೇ ಬೆಳದರೂ ಮನುಷ್ಯ ಜ್ಞಾನವೇ ಅದರ ಮೂಲವಾಗಿರುವುದರಿಂದ ಅದರ ಮೂಲ ಆತ್ಮ ಕಥೆಯೇ ಆಗಿದೆಯೆ ಹೊರತು ತಂತ್ರಜ್ಞಾನವಲ್ಲ ಎನ್ನುವುದನ್ನು ಗಮನಿಸಬೇಕು. ಸಿನಿಮಾಗಳ ಮೂಲ ಬೇರು ಜನಸಾಮಾನ್ಯರ ಬದುಕಿನ ಅಂತಃಕರಣವೇ ಆಗಿರುವುದರಿಂದ ಸಾಮಾಜಿಕ ಸ್ಥಿತ್ಯಂತರಗಳನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ರೂಪಗೊಳ್ಳಬೇಕು. ಈ ನಿಟ್ಟಿನಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಸಮಕಾಲೀನ ಸಂದರ್ಭದ ಸಾಮಾಜಿಕ, ಸಾಂಸ್ಕೃತಿಕ ಸಮಸ್ಯೆ, ಸವಾಲುಗಳ ಬಗ್ಗೆ ಅರಿವು ಮೂಡಿಸುವ ವಿವಿಧ ವಿಷಯಗಳನ್ನು ಹೊಸ ತಲೆಮಾರಿಗೆ ತಲುಪಿಸುವುದಕ್ಕಾಗಿ ಇಂತಹ ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ. ಈ ನಿಟ್ಟಿನಲ್ಲಿ ಹೊಸತಲೆಮಾರನ್ನು ಒಳಗೊಂಡಿರುವ ಬೆಳಗಾವಿಯ ಈ ವಿಚಾರಸಂಕಿರ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಸಾಹಿತ್ಯ ಮತ್ತು ಸಿನಿಮಾ : ಸೃಷ್ಟಿ ಸ್ವರೂಪ ಕುರಿತು ನದೀಮ್ ಸನದಿ, ಕನ್ನಡ ಸಿನಿಮಾ : ಪೌರಾಣಿಕ ವಸ್ತುವಿನಲ್ಲಿ ಪ್ರಗತಿಪರ ನೆಲೆ ಕುರಿತು ನಿರ್ಮಲಾ ಬಟ್ಟಲ ಮಾತನಾಡಿದರು. ವಿನಯಕುಮಾರ್ ಎಂ ಜಿ. ದಿಕ್ಸೂಚಿ ನುಡಿಗಳನ್ನಾಡಿದರು ಜಿಲ್ಲಾ ಸಂಚಾಲಕ ಯಲ್ಲಪ್ಪ ಹಿಮ್ಮಡಿ ಪ್ರಾಸ್ತಾವಿಕ ಮಾತನಾಡಿದರು.
ಡಿ.ಎಸ್. ಚೌಗಲೆ ಅಧ್ಯಕ್ಷತೆಯ ಗೋಷ್ಠಿಯಲ್ಲಿ ಕನ್ನಡ ಸಿನಿಮಾ : ಚರಿತ್ರೆಯ ಜನಪರ ಕಟ್ಟುವಿಕೆ ಕುರಿತು ವಿನಯ ನಂದಿಹಾಳ, ಕನ್ನಡ ಸಿನಿಮಾ : ಸಾಮಾಜಿಕ ವಸ್ತುವಿನಲ್ಲಿ ಪ್ರಗತಿಪರತೆ ಕುರಿತು ಸಂತೋಷ ನಾಯಿಕ ಮಾತನಾಡಿದರು.
ಮಧ್ಯಾಹ್ನ ನಡೆದ ಸತ್ಯಾನಂದ ಪಾತ್ರಟ ಅಧ್ಯಕ್ಷತೆ ವಹಿಸಿರುವ ಕವಿಗೋಷ್ಠಿಯಲ್ಲಿ 16 ಜನ ಕವಿಗಳು ಕವಿತೆ ವಾಚನ ಮಾಡಿದರು. ಅನುಸೂಯ ಕಾಂಬಳೆ ಆಶಯ ನುಡಿಗಳನ್ನು ಹಾಡಿದರು.
ಸಂಜೆ ನಡೆದ ಸರಜೂ ಕಾಟ್ಕರ್ ಅಧ್ಯಕ್ಷತೆಯ ಸಮಾರೋಪದಲ್ಲಿ ರಾಜಪ್ಪ ದಳವಾಯಿ ಸಮಾರೋಪ ನುಡಿಗಳನ್ನಾಡಿದರು. ಸತೀಶ್ ಕುಲಕರ್ಣಿ ಅತಿಥಿಯಾಗಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಪರಿಸರವಾದಿ ಶಿವಾಜಿ ಕಾಗಣೀಕರ, ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ್, ಸುನಿಲ ಮೂಗಿ, ಮಂದಾ ನೇವಗಿ, ವಿಷ್ಣು ಶಿಂಧೆ, ಶಂಕರ ಕೊಡತೆ, ಸುಬ್ಬರಾವ ಎಂಟೆತ್ತಿನವರ, ಶಂಕರ ಬಾಗೇವಾಡಿ, ರಾಧಾ. ಎಂ. ಎನ್. ಸಾಹಿತಿಗಳಾದ ಚಂದ್ರಕಾಂತ ಪೋಕಳೆ, ರಾಮಕೃಷ್ಣ ಮರಾಠೆ, ಬಸವರಾಜ ಜಗಜಂಪಿ, ಶಿವಯೋಗಿ ಕುಸುಗಲ್ಲ, ಪ್ರೊ. ಕೆ. ಬಿ. ಚಂದ್ರಿಕಾ, ಕವಿತಾ ಕುಸುಗಲ್ಲ, ಆಶಾ ಯಮಕನಮರಡಿ, ರಂಜನಾ ಗೋದಿ, ಇಂದಿರಾ ಮೋಟೆಬೆನ್ನೂರ, ಮಹಾದೇವಿ ಹುಣಸಿಬೀಜ, ಬಸವರಾಜ ಗಾರ್ಗಿ, ಭರತ ಕಲಾಚಂದ, ಯಾದವೇಂದ್ರ ಪೂಜಾರ, ಮಹಾಬಲ ಸಾಬಣ್ಣವರ, ಎಸ್. ಟಿ. ಕರೀಭೀಮಗೋಳ, ಕಲ್ಲಪ್ಪ ಕಾಂಬಳೆ, ದುರ್ಗೇಶ್ ಮೇತ್ರಿ ಉಪಸ್ಥಿತರಿದ್ದರು.
