ಹೊಸಪೇಟೆ: ಮುಂಬರುವ ಕಾಂಗ್ರೆಸ್ ಸರ್ಕಾರದಲ್ಲಿ ಬಿ.ಜೆಡ್. ಜಮೀರ್ ಅಹಮ್ಮದ್ ಖಾನ್ ರವರಿಗೆ ಡಿ ಸಿ ಎಂ ಸ್ಥಾನ ನೀಡುವಂತೆ ಒತ್ತಾಯಿಸಿ ಮುಸ್ಲಿಂ ಮುಖಂಡರಿoದ ನಗರದ ಪತ್ರಿಕಾ ಭವನದಲ್ಲಿ ಗೋಷ್ಠಿ ನಡೆಸಲಾಯಿತು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಮುಸ್ಲಿಂ ಮುಖಂಡರಾದ ಕೊತ್ವಾಲ ಮೊಹಮ್ಮದ್ ಮೋಸಿನ್, ನಮ್ಮ ಸಮುದಾಯವು ರಾಜ್ಯದಲ್ಲಿ ಸುಮಾರು ೮೦ ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದು, ಕಾಂಗ್ರೆಸ್ ಪಕ್ಷವು ಸದಾ ಅಲ್ಪಸಂಖ್ಯಾತರ ಹಿತಾಸಕ್ತಿಯನ್ನು ಕಾಪಾಡಿಕೊಂಡು ಬಂದಿದ್ದು ಈ ಹಿನ್ನೆಲೆಯಲ್ಲಿ ನಮ್ಮ ಅಲ್ಪಸಂಖ್ಯಾತ ಸಮುದಾಯದ ನ್ಯಾಯಯುತ ಬೇಡಿಕೆಯಾಗಿದೆ.
ಬಿ.ಜೆಡ್. ಜಮೀರ್ ಅಹಮ್ಮದ್ ಖಾನ್ ರವರು ಈ ರಾಜ್ಯದಲ್ಲಿ ಒಂದು ಸಮುದಾಯದ ನಾಯಕರಲ್ಲ, ಅವರು ಎಲ್ಲಾ ಜಾತಿ, ಜನಾಂಗ ಧರ್ಮಗಳನ್ನು ಪ್ರೀತಿಸುವ ನಾಯಕ, ಕಷ್ಟ ದಲ್ಲಿ ಯಾರೇ ಆದರೂ ಅವರಿಗೆ ತನು ಮನದಿಂದ ಸಹಾಯ ಸಹಕಾರ ನೀಡುವ ಮಾನವೀಯ ಗುಣದ ನಾಯಕರಾಗಿದ್ದಾರೆ.
ಬಿ.ಜೆಡ್. ಜಮೀರ್ ಅಹಮ್ಮದ್ ಖಾನ್ ಅವರು ಹಲವು ವರ್ಷಗಳಿಂದ ಜನಸೇವೆ ಮತ್ತು ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಕಾಂಗ್ರೆಸ್ ಸಕಾರದಲ್ಲಿ ಹಲವು ಬಾರಿ ಸಚಿವರಾಗಿ ವಿವಿಧ ಇಲಾಖೆಗಳ ನಿರ್ವಹಣೆಯಲ್ಲಿ ಕಾರ್ಯಕ್ಷಮತೆ ತೋರಿದ್ದಾರೆ ಹಾಗೂ ರಾಜ್ಯಾದ್ಯಂತ ಪಕ್ಷದ ಬಲವರ್ಧನೆಗೆ ಕೊಡುಗೆ ನೀಡಿದ್ದಾರೆ. ಹಾಗಾಗಿ ಇವರಿಗೆ ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ಪ್ರಾತಿನಿಧಿತ್ವದಲ್ಲಿ ಸರ್ಕಾರದ ಉನ್ನತ ಹಂತದಲ್ಲಿ ಸೂಕ್ತ ಸ್ಥಾನ ದೊರಕಬೇಕು.
ಇವರು ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ಬಡವರಲ್ಲಿ ಕಾಂಗ್ರೆಸ್ ಪರ ವಿಶ್ವಾಸ ಹೆಚ್ಚಿಸಲು ಶ್ರಮಿಸಿದ್ದಾರೆ. ಅನೇಕ ಚುನಾವಣೆಯಲ್ಲಿ ಪಕ್ಷದ ಪರವಾಗಿ ಸಕ್ರಿಯವಾಗಿ ಕೆಲಸ ಮಾಡುವ ಮೂಲಕ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ, ಇತ್ತೀಚಿಗೆ ಪಕ್ಕದ ರಾಜ್ಯವಾದ ಕೇರಳದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನಿರಂತರವಾಗಿ ಪ್ರಚಾರ ನಡೆಸಿ ಅನೇಕ ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗಿದ್ದಾರೆ.
ಸಾಮಾಜಿಕ ನ್ಯಾಯದ ದೃಷ್ಟಿಕೋನದಿಂದ ಉಪ ಮುಖ್ಯಮಂತ್ರಿ ಹುದ್ದೆ ನೀಡುವುದರಿಂದ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳ ಸಂದೇಶ ರಾಜ್ಯದಾದ್ಯಂತ ಹೋಗುತ್ತದೆ. ಎಲ್ಲಾ ಸಮುದಾಯಗಳಿಗೆ ಸಮಾನ ಗೌರವ ನೀಡುವ ಕಾಂಗ್ರೆಸ್ ಪಕ್ಷದ ಬದ್ಧತೆ ಮತ್ತಷ್ಟು ಬಲವಾಗುತ್ತದೆ.
ಜಮೀರ್ ಅಹಮ್ಮದ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ವಿವಿಧ ಸಮುದಾಯಗಳ ನಡುವೆ ವಿಶ್ವಾಸ ಮತ್ತು ಸಾಮರಸ್ಯ ಹೆಚ್ಚುತ್ತದೆ ಹಾಗೂ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಿಸಲು ನೆರವಾಗುತ್ತದೆ.
ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವ ಹಾಗೂ ರಾಜ್ಯ ನಾಯಕರು ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು.ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ಆಶಯಗಳಿಗೆ ಗೌರವ ನೀಡಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಹಾಗೂ ಅಲ್ಪಸಂಖ್ಯಾತ ಸಮುದಾಯದ ಧ್ವನಿಯಾಗಿ ಸೇವೆ ಸಲ್ಲಿಸಿರುವ ಸಚಿವ ಜಮೀರ್ ಅಹಮ್ಮದ್ ಖಾನ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದು ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಲಿದೆ.
ಪಕ್ಷದ ಹೈಕಮಾಂಡ್ ಹಾಗೂ ಹಂಗಾಮಿ ಮುಖ್ಯಮಂತ್ರಿ ಗಳಾದ ಸನ್ಮಾನ್ಯ ಸಿದ್ದರಾಮಯ್ಯ ರವರು ಹಾಗೂ ಕೆ.ಪಿ.ಸಿ.ಸಿ. ಅಧ್ಯಕ್ಷರು ಹಾಗೂ ಮುಂದಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಡಿ.ಕೆ.ಶಿವಕುಮಾರ್ ರವರು ರಾಜ್ಯದ ಜನರ ಹಾಗೂ ಅಲ್ಪಸಂಖ್ಯಾತ ಸಮುದಾಯದ ಭಾವನೆಗಳನ್ನು ಗೌರವಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ನಾವು ಆಗ್ರಹಿಸುತ್ತೇವೆ."
ಇದೇ ವೇಳೆ ನಗರದ ಮುಸ್ಲೀಂ ಮುಖಂಡರು ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿ ತಾಲೂಕು ಕಛೆರಿ ಎದುರುಗಡೆ ಭಿತ್ತಿ ಪತ್ರಗಳನ್ನು ಹಿಡಿದು ಘೋಷಣೆಗಳು ಕೂಗುತ್ತಾ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ಹಂಗಾಮಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಮತ್ತು ನೂತನ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರಿಗೆ ಒತ್ತಾಯಿಸಿದರು.
ಈ ವೇಳೆ ಸಮುದಾಯದ ಮುಖಂಡರಾದ ಕೊತ್ತವಾಲ್ ಮೊಹಮ್ಮದ ಮೊಸೀನ್, ಪೀರೋಜ್ ಖಾನ್, ಬಿ. ಅನ್ಸರ್ ಭಷಾ, ಎಮ್.ಎಮ್. ಗೌಸ್, ಅಬೂಬ್ ಕರ್, ಎನ್.ಎಸ್. ರಫೀಕ್, ಅತೀಕ್ ರಷೀಧ್, ರಾಜಾಕ್, ಎಮ್.ಡಿ. ಜಾವೀದ್ ಸಾದೀಕ್ ಅಲಿ, ನೌಷಾದ್, ಅಬ್ದುಲ್ ಗಫುರ್, ಕರಂಗಿ ನಜೀರ್, ಯೂನಿಸ, ನಾವಜ್ ನೂರಾರು , ಮುಖಂಡರು ಉಪಸ್ಥಿತರಿದ್ದರು.
