ಬಳ್ಳಾರಿ, ಮೇ 16: ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಶ್ರೀ ಪಿ. ಅನಂತ್ ಅವರನ್ನು ಬಳ್ಳಾರಿ ಲೋಕಸಭಾ ಸದಸ್ಯ E. Tukaram ಅವರ ಸಮಕ್ಷಮದಲ್ಲಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ ಕೆ.ಎಂ. ಮಹೇಶ್ವರ ಸ್ವಾಮಿ ನೇತೃತ್ವದ ನಿಯೋಗವು ಶನಿವಾರ ಬೆಳಿಗ್ಗೆ ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಭೇಟಿ ಮಾಡಿ ವಿವಿಧ ರೈಲ್ವೆ ಸಮಸ್ಯೆಗಳ ಕುರಿತು ಮನವಿ ಪತ್ರ ಸಲ್ಲಿಸಿತು.
ಬಳ್ಳಾರಿ ಭಾಗದ ರೈಲು ಸಂಪರ್ಕ ಮತ್ತು ಪ್ರಯಾಣಿಕರ ಸೌಲಭ್ಯಗಳ ಕುರಿತು ಹಲವು ವರ್ಷಗಳಿಂದ ಮುಂದುವರಿದಿರುವ ಸಮಸ್ಯೆಗಳ ಬಗ್ಗೆ ಸಮಿತಿಯ ಸದಸ್ಯರು ಜನರಲ್ ಮ್ಯಾನೇಜರ್ ಅವರ ಗಮನ ಸೆಳೆದರು. ವಿಶೇಷವಾಗಿ ಬಳ್ಳಾರಿ–ಸಿರುಗುಪ್ಪ–ಸಿಂಧನೂರು–ಲಿಂಗಸುಗೂರು ನೂತನ ರೈಲ್ವೆ ಮಾರ್ಗ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. ಈ ಮಾರ್ಗದಿಂದ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಮಿತಿಯವರು ಮನವರಿಕೆ ಮಾಡಿದರು.
ಇದೇ ವೇಳೆ ಬಳ್ಳಾರಿ ಮಾರ್ಗವಾಗಿ ಬೆಂಗಳೂರಿಗೆ ಬೆಳಿಗ್ಗೆ ತೆರಳಿ ಮರಳಲು ಅನುಕೂಲವಾಗುವಂತೆ ಇಂಟರ್ಸಿಟಿ ಸೂಪರ್ಫಾಸ್ಟ್ ಅಥವಾ ವಂದೇ ಭಾರತ್ ರೈಲನ್ನು ಆರಂಭಿಸುವಂತೆ ಕೋರಲಾಯಿತು. ಜೊತೆಗೆ ಮಧ್ಯಾಹ್ನ ಹೊಸಪೇಟೆಯಿಂದ ಹೊರಡುವ ಮುಂಬೈ ರೈಲಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಬಳ್ಳಾರಿಯಿಂದ ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಗೆ ಸಂಚರಿಸುವ ಡೆಮೋ ಅಥವಾ ಮೆಮೊ ರೈಲನ್ನು ಆರಂಭಿಸಬೇಕೆಂದು ಮನವಿಯಲ್ಲಿ ತಿಳಿಸಲಾಯಿತು.
ಕಳೆದ ಕೆಲವು ತಿಂಗಳುಗಳಿಂದ ಸ್ಥಗಿತಗೊಂಡಿರುವ ಶಿವಮೊಗ್ಗ–ಬಳ್ಳಾರಿ–ಚೆನ್ನೈ ರೈಲನ್ನು ಪುನರಾರಂಭಿಸುವಂತೆ ಆಗ್ರಹಿಸಿದ ನಿಯೋಗ, ಹಂಪಿ ಎಕ್ಸ್ಪ್ರೆಸ್ ರೈಲಿನಲ್ಲಿ ಸ್ಲೀಪರ್ ಬೋಗಿಗಳ ಸಂಖ್ಯೆಯನ್ನು 12ರಿಂದ 7ಕ್ಕೆ ಕಡಿತಗೊಳಿಸಿರುವುದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿತು. ಈ ಹಿಂದೆ ಇದ್ದಂತೆ 12 ಸ್ಲೀಪರ್ ಬೋಗಿಗಳನ್ನು ಮರುಸ್ಥಾಪಿಸಬೇಕೆಂದು ಕೋರಲಾಯಿತು.
ಬಳ್ಳಾರಿ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ಹಂಪಿ ಎಕ್ಸ್ಪ್ರೆಸ್ ರೈಲು ಬೆಂಗಳೂರಿನಿಂದ ರಾತ್ರಿ 9.50ರ ಬದಲು 10.30ಕ್ಕೆ ಹೊರಡುವಂತೆ ವೇಳಾಪಟ್ಟಿಯನ್ನು ಪರಿಷ್ಕರಿಸುವಂತೆ ಮನವಿ ಸಲ್ಲಿಸಲಾಯಿತು. ವಾರದಲ್ಲಿ ಎರಡು ದಿನ ಎಸಿ ಬೋಗಿಗಳು ರೈಲಿನ ಮುಂಭಾಗದಲ್ಲಿ ಹಾಗೂ ಉಳಿದ ಐದು ದಿನ ಹಿಂಭಾಗದಲ್ಲಿ ಜೋಡಿಸಲಾಗುತ್ತಿರುವುದರಿಂದ ಪ್ರಯಾಣಿಕರಿಗೆ ಗೊಂದಲ ಮತ್ತು ತೊಂದರೆ ಉಂಟಾಗುತ್ತಿದೆ. ಈ ನ್ಯೂನತೆಯನ್ನು ತಕ್ಷಣ ಸರಿಪಡಿಸುವಂತೆ ಒತ್ತಾಯಿಸಲಾಯಿತು.
ಅಮೃತ್ ಭಾರತ್ ಯೋಜನೆಯಡಿ ಬಳ್ಳಾರಿ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ 2023ರಲ್ಲಿ ₹17 ಕೋಟಿ ಮಂಜೂರಾಗಿದ್ದರೂ ಕಳೆದ ಮೂರು ವರ್ಷಗಳಿಂದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಸಮಿತಿಯವರು ಅಸಮಾಧಾನ ವ್ಯಕ್ತಪಡಿಸಿದರು. ಈ ವರ್ಷದಲ್ಲೇ ಕಾಮಗಾರಿ ಪೂರ್ಣಗೊಳಿಸುವಂತೆ ಹಾಗೂ ಗೇಟ್ ಸಂಖ್ಯೆ 111ರ ರೇಡಿಯೋ ಪಾರ್ಕ್ ಮೇಲ್ಸೇತುವೆಗೆ ಎರಡೂ ಬದಿಗಳ ಸಂಪರ್ಕ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಮನವಿ ಮಾಡಿದರು.
ಜನರಲ್ ಮ್ಯಾನೇಜರ್ ಶ್ರೀ ಪಿ. ಅನಂತ್ ಅವರು ಮನವಿಯಲ್ಲಿರುವ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಎಂದು ಸಮಿತಿಯವರು ತಿಳಿಸಿದ್ದಾರೆ.
ನಿಯೋಗದಲ್ಲಿ ಡಿಆರ್ಯುಸಿಸಿ ಸದಸ್ಯ ಕೆ.ಎಂ. ಕೊಟ್ರೇಶ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳಾದ ಪಿ. ಬಂಡೆಗೌಡ, ಶಿವಶಂಕರಗೌಡ ಬಂದ್ರಾಳ್, ಮೃತ್ಯುಂಜಯ ಕೊಳಗಲ್, ಅಂಜಿನಿ, ಎಚ್.ಕೆ. ಗೌರಿಶಂಕರ, ಕೆ.ಎಂ. ಶರಣಬಸವ, ಜಿ. ಮಧುಸೂದನಗೌಡ, ವಿ. ಸೂರ್ಯಪ್ರಕಾಶ್, ಮೂರಿಗೆರೆ ಕೊಟ್ರೇಶ್ ಹಚ್ಚೊಳ್ಳಿ, ಅಮರೇಶ್ ಹಾಗೂ ಶಂಕರಮೂರ್ತಿ ಉಪಸ್ಥಿತರಿದ್ದರು.
