ಬಳ್ಳಾರಿ, ಮೇ. 26: ರಾಜ್ಯ ಸರ್ಕಾರ ಆಯೋಜಿಸಬೇಕಾಗಿರುವ ಕೃಷಿ ಮೇಳವನ್ನು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಆಯೋಜಿಸಿರುವುದು ಅಭಿನಂದನೀಯ ಎಂದು ಬ ಮೇಯರ್ ಪಿ. ಗಾದೆಪ್ಪ ಹೇಳಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವದಲ್ಲಿ ಜಿಲ್ಲಾಡಳಿತ, ವಿವಿಧ ಇಲಾಖೆಗಳು, ಬಳ್ಳಾರಿ ಎಪಿಎಂಸಿ ದಲ್ಲಾಲಿ ವರ್ತಕರ ಸಂಘ, ಬಳ್ಳಾರಿ ಎಪಿಎಂಸಿ ವರ್ತಕರ ಸಂಘ, ಹತ್ತಿ ಬೆಳೆಗಾರರು ಮತ್ತು ರೈತ ಸಮೂಹಗಳ ಸಹಕಾರದೊಂದಿಗೆ ನಡೆದ 'ಗುಣಮಟ್ಟದ ಬೀಜ ಮತ್ತು ವೈಜ್ಞಾನಿಕ ಬಿತ್ತನೆ' ವಿಷಯದ ಕೃಷಿ ಮೇಳವನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಹಕಾರದಲ್ಲಿ 'ರಾಸಾಯನಿಕ ಮುಕ್ತ' ಹಣ್ಣುಗಳು ಮತ್ತು ತರಕಾರಿ ಮಾರಾಟಕ್ಕೆ ಮಹಾನಗರ ಪಾಲಿಕೆಯು 'ರೈತ ಸಂತೆ'ಗಳನ್ನು ಏರ್ಪಡಿಸಲು ಉತ್ಸುಕವಾಗಿದೆ. ಈ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಬಳ್ಳಾರಿ ಶಾಸಕ ನಾರಾ ಭರತ ರೆಡ್ಡಿ ಅವರು, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜನಪರ ಕಾಳಜಿ - ಕಳಕಳಿಯು ಗಮನಾರ್ಹ. ಈ ಸಂಸ್ಥೆಯು ಎಲ್ಲಾ ಕ್ಷೇತ್ರಗಳಲ್ಲಿ ಗಮನಾರ್ಹವಾಗಿ ಸೇವೆ ಸಲ್ಲಿಸುತ್ತಿದೆ ಎಂದರು.
ಲಿಡ್ಕರ್ ಅಧ್ಯಕ್ಷರಾದ ಮುಂಡ್ರಗಿ ನಾಗರಾಜ್ ಅವರು,
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಜನಪರವಾಗಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯು ಹಮ್ಮಿಕೊಂಡಿರುವ ರೈತಣ್ಣ ಊಟ, ರೈತರ ವಸತಿ, ಕೌಶಲ್ಯಾಭಿವೃದ್ಧಿ ಸೆಂಟರ್ ಇನ್ನಿತರೆಗಳು ಎಲ್ಲವೂ ಅನೇಕರಿಗೆ ಅನುಕೂಲಗಳಾಗಿದ್ದು, ಶ್ಲಾಘನೀಯ ಎಂದರು.
ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿರುವ ಕೆ.ಇ. ಚಿದಾನಂದಪ್ಪ ಅವರು, ರೈತರು ಮತ್ತು ಕೃಷಿ ಮುಂದಿನ ಪೀಳಿಗೆ ಗಾಗಿ ಉಳಿಯಲು ಸರ್ಕಾರ ಸ್ವಾಮಿನಾಥನ್ ವರದಿಯನ್ನು ಅನುಷ್ಟಾನ ಮಾಡಬೇಕು ಎಂದು ಹೇಳಿದರು.
ತುಂಗಭದ್ರ ರೈತ ಸಂಘದ ಅಧ್ಯಕ್ಷರಾಗಿರುವ ಡಾ. ಪುರುಷೋತ್ತಮ ಗೌಡ ಅವರು, ಶೀಘ್ರದಲ್ಲೇ ಪ್ರಾರಂಭವಾಗುವ ತುಂಗಭದ್ರ ಹೂಳಿನ ಜಾತ್ರೆ-2026ರಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಮುಂದಿನ ಪೀಳಿಗೆಗಾಗಿ ಜಲಾಶಯವನ್ನು ಸಂರಕ್ಷಣೆ ಮಾಡೋಣ ಎಂದು ಮನವಿ ಮಾಡಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾಗಿರುವ ಕೆ.ಎಂ. ಸೋಮಸುಂದರ್ ಅವರು,ರೈತರು ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ)ಯ ವ್ಯವಸ್ಥೆಯಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಆದ್ಯತೆ ನೀಡಬೇಕು. ಆಧುನಿಕ ಮತ್ತು ವೈಜ್ಞಾನಿಕ - ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ದೃಢೀಕೃತ ಬೀಜಗಳನ್ನು ಖರೀದಿಸಿ, ಬಿತ್ತನೆ ಮಾಡಬೇಕು ಎಂದರು.
ಕೃಷಿ ವಿಜ್ಞಾನಿಗಳಾಗಿರುವ ಡಾ. ಎ.ಜಿ. ಶ್ರೀನಿವಾಸ್, ಡಾ. ರವಿಶಂಕರ್ ಜಿ. ಡಾ. ಪಾಲಯ್ಯ ಮತ್ತು ಡಾ. ಎಂ. ಭೀಮಣ್ಣ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು, 'ಗುಣಮಟ್ಟದ ಬೀಜ ಮತ್ತು ವೈಜ್ಞಾನಿಕ ಬಿತ್ತನೆ' ವಿಷಯದ ಕುರಿತು ಉಪನ್ಯಾಸ ನೀಡಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಅವರು ಸ್ವಾಗತಿಸಿ, ಕೃಷಿ ಮೇಳವು ವರ್ಷದಿಂದ ವರ್ಷ ದೊಡ್ಡ ಪ್ರಮಾಣದಲ್ಲಿ ಬೆಳೆಯಲಿದೆ. ಮುಂದಿನ ದಿನಗಳಲ್ಲಿ ಮೂರು ದಿನಗಳ ಮೇಳವನ್ನು ಏರ್ಪಡಿಸುವ ಚಿಂತನೆ ಇದೆ ಎಂದರು.
ಡಾ. ಶ್ರೀನಿವಾಸ ರೆಡ್ಡಿ ಅವರು ಕಾರ್ಯಕ್ರಮ ನಿರೂಪಿಸಿದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು ಅವರು ವಂದನಾರ್ಪಣೆ ಸಲ್ಲಿಸಿದರು.
ಕೃಷಿ ಮತ್ತು ಆಧುನಿಕ - ವೈಜ್ಞಾನಿಕತೆಯನ್ನು ಒಟ್ಟಾಗಿ ಅಳವಡಿಸಿಕೊಂಡಿರುವ ಆದರ್ಶರೈತರಾಗಿರುವ ಕೆ.ಜೆ. ಜಯರಾಂ ಮತ್ತು ವದ್ದಟ್ಟಿಯ ಗಂಟ ಪಾಪಾರಾವ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕಲಾಕ್ಷೇತ್ರ ತಂಡ, ಅವನಿ ಗಂಗಾವತಿ, ಅಭಿಷೇಕ್ ಮತ್ತು ಸಂಗಡಿಗರು ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶನ ಮಾಡಿದರು. ಕೃಷಿ ಮೇಳದ ಅಂಗವಾಗಿ ನಗರೆ ಶ್ರೀ ನಗರೇಶ್ವರ ದೇವಸ್ಥಾನದಿಂದ ಜೋಡೆತ್ತಿ ಬಂಡಿ, ಹಕ್ಕಿಪಿಕ್ಕಿ ತಂಡ, ಕೋಲಾಟ, ಡೊಳ್ಳು ಕುಣಿತ, ವೀರಭದ್ರ ಕುಣಿತ ಸೇರಿ ವಿವಿಧ ಕಲಾಪ್ರಕಾರಗಳ ಜಾಥಾ ಆಕರ್ಷಕವಾಗಿ ನಡೆಯಿತು.
ಬಳ್ಳಾರಿ ಜಿಲ್ಲಾ ಕಾಟನ್ ಅಸೋಸಿಯೇಷನ್ ನ ಡಿ. ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾ ಘಟದ ಹಚ್. ತಿಮ್ಮನಗೌಡ, ರಾಜ್ಯ ಸಂಚಾಲಕ ಗಣಪಾಲ್ ಐನಾಥರೆಡ್ಡಿ, ಬಳ್ಳಾರಿ ಎಪಿಎಂಸಿ ವರ್ತಕರ ಸಂಘದ ಟಿ. ಚಿದಾನಂದಪ್ಪ, ಅಗ್ರಿ ಎಂಪ್ಲಾಯೀಸ್ ಅಸೋಸಿಯೇಷನ್ ನ ಕೆ.ಟಿ. ಚೌಹ್ಹಾಣ್, ಬಳ್ಳಾರಿ ದಲ್ಲಾಲಿ ವರ್ತಕರ ಸಂಘ, ಬಿಡಿಸಿಸಿ&ಐನ ಮಾಜಿ ಅಧ್ಯಕ್ಣರುಗಳಾದ ಸಿ. ಶ್ರೀನಿವಾಸರಾವ್, ಬಿ. ಮಹಾರುದ್ರಗೌಡ, ಹಿರಿಯ ಉಪಾಧ್ಯಕ್ಷರಾಗಿರುವ ಎಸ್. ದೊಡ್ಡನಗೌಡ, ಉಪಾಧ್ಯಕ್ಷರಾದ ಸೊಂತ ಗಿರಿಧರ, ಪಿ. ಪಾಲಣ್ಣ, ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೆಡ್ ಮಲ್ಲಿಕಾರ್ಜುನ ಗೌಡ, ವಿ. ರಾಮಚಂದ್ರ, ಖಜಾಂಚಿಗಳಾದ ಸಿ.ಎಸ್. ಸತ್ಯನಾರಾಯಣ, ಕಾರ್ಯಕಾರಿ ಸಮಿತಿ ಸದಸ್ಯರು ವಿವಿಧ ಕಮಿಟಿಗಳ ಚೇರ್ಮನ್ ಗಳು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು ಹಾಗೂ ರೈತ ಸಮೂಹ ಪಾಲ್ಗೊಂಡಿದ್ದರು.
