ಬೆಂಗಳೂರು, ಮೇ. 22: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವದಲ್ಲಿ ಜಿಲ್ಲಾಡಳಿತದ ಸಹಕಾರದಲ್ಲಿ ಮೇ 26ರ ಮಂಗಳವಾರ ನಡೆಯಲಿರುವ ಗುಣಮಟ್ಟದ ಬೀಜ ಮತ್ತು ವೈಜ್ಞಾನಿಕ ಕೃಷಿ ವಿಷಯದ ಕೃಷಿ ಮೇಳವನ್ನು ಉದ್ಘಾಟಿಸಲು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರನ್ನು ಬೆಂಗಳೂರಿನಲ್ಲಿ ಗುರುವಾರ ಭೇಟಿ ಮಾಡಿ, ಸ್ವಾಗತ ಕೋರಲಾಯಿತು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಅವರು ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಕೃಷಿ ಮೇಳದ ಕುರಿತು ಮಾಹಿತಿ ನೀಡಿ, ಆಹ್ವಾನ ಪತ್ರಿಕೆಯನ್ನು ನೀಡಿ ಸ್ವಾಗತಿಸಿದರು. ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಕೃಷಿ ಮೇಳ ಉದ್ಘಾಟನೆಗೆ ಬರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಖಜಾಂಚಿಗಳಾದ ಸಿ.ಎಸ್. ಸತ್ಯನಾರಾಯಣ ಹಾಗೂ ಬಳ್ಳಾರಿ ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್ ಆಗಿರುವ ಬೆಣಕಲ್ಲು ಬಸವರಾಜಗೌಡ ಅವರು ಉಪಸ್ಥಿತರಿದ್ದರು.
