ಅಥಣಿ: ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ವಿಷ್ಣು ಕ್ರಿಕೆಟ್ ಕ್ಲಬ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ 'ಎಲ್.ಎಸ್ ಟ್ರೋಫಿ-2026' ಅಥಣಿ-ಕಾಗವಾಡ ತಾಲ್ಲೂಕು ಪ್ರೀಮಿಯರ್ ಲೀಗ್ ಸೀಸನ್-2ರ ರೋಚಕ ಫೈನಲ್ ಪಂದ್ಯದಲ್ಲಿ ಫಿಜಾನ್ ಯೂಸುಫ್ ನಾಲಬಂದ (FYN) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಅತ್ಯಂತ ಕುತೂಹಲಕಾರಿಯಾಗಿ ನಡೆದ ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಫಿಜಾನ್ ನಾಲಬಂದ ಅವರ FYN ತಂಡ ಪ್ರಥಮ ಸ್ಥಾನ ಗಳಿಸಿ 1 ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಜಿದ್ದಾಜಿದ್ದಿನ ಪೈಪೋಟಿ ನೀಡಿದ ಆಕಾಶ್ ಅಲಬಾಳ ನೇತೃತ್ವದ ಬುಲ್ಡೋಜರ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಯುವ ನಾಯಕ ಚಿದಾನಂದ ಸವದಿ ಹಾಗೂ ಪ್ರಮುಖ ಉದ್ಯಮಿ ಶಿವಕುಮಾರ್ ಸವದಿ ಅವರು ಕ್ರೀಡಾಂಗಣಕ್ಕೆ ಭೇಟಿ ನೀಡಿ, ಆಟಗಾರರೊಂದಿಗೆ ಕೆಲಕಾಲ ಕ್ರಿಕೆಟ್ ಆಡುವ ಮೂಲಕ ಉತ್ಸಾಹ ತುಂಬಿದರು. ಬಳಿಕ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ ಉದ್ಯಮಿ ಶಿವಕುಮಾರ್ ಸವದಿ ಅವರು, "ಕ್ರೀಡೆಯು ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕ. ನಮ್ಮ ಭಾಗದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಇಂತಹ ಪಂದ್ಯಾವಳಿಗಳು ನಿರಂತರವಾಗಿ ನಡೆಯಬೇಕು. ಕ್ರಿಕೆಟ್ ಕ್ರೀಡೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯುವ ಸಮೂಹ ತೋರುತ್ತಿರುವ ಆಸಕ್ತಿ ಶ್ಲಾಘನೀಯ," ಎಂದು ಹಾರೈಸಿದರು.
ನಂತರ ಮಾತನಾಡಿದ ಯುವ ನಾಯಕ ಚಿದಾನಂದ ಸವದಿ ಅವರು ವಿಷ್ಣು ಕ್ರಿಕೆಟ್ ಕ್ಲಬ್ ವತಿಯಿಂದ ಮೊದಲನೇ ಬಾರಿಯೂ ತಾವು ಮಾಡಿದ್ದೀರಿ ಅದೇ ರೀತಿ 2026 ರಲ್ಲಿ ತಾವು ಅಥಣಿ ಹಾಗೂ ಕಾಗವಾಡದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಈ ಟೂರ್ನಿಯು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಯಶಸ್ವಿಯಾಗಿ ಆಯೋಜನೆ ಮಾಡಿದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇದೆ ರೀತಿ ಮುಂದಿನ ವರ್ಷವೂ ಕೂಡ ಇನ್ನೂ ಅದ್ದೂರಿಯಾಗಿ ಅಥಣಿ ಹಾಗೂ ಕಾಗವಾಡ ತಾಲೂಕ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ತುಂಬುವ ಕೆಲಸ ಮಾಡೋಣ ಹಾಗೂ ಮುಂದಿನ ವರ್ಷವೂ ಸಹ ತಂದೆಯವರಾದ ಲಕ್ಷ್ಮಣ ಸವದಿ ಅವರ ವತಿಯಿಂದ 1 ಲಕ್ಷ ರೂಪಾಯಿ ಬಹುಮಾನ ನೀಡುತ್ತೇನೆ. ಹಾಗೂ ಶಾಸಕ ಅನುದಾನದಲ್ಲಿ ಸ್ಟೇಡಿಯಂ ನಲ್ಲಿ ಕ್ರೀಡಾಪಟುಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸೇಡ ನಿರ್ಮಾಣ ಮಾಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಭಾಗದ ಕ್ರಿಕೆಟ್ ಕ್ರೀಡೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಗುರಿಯೊಂದಿಗೆ ನಡೆದ ಈ ಪಂದ್ಯಾವಳಿಯು ಸಾವಿರಾರು ಕ್ರೀಡಾಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ಈ ಸಂದರ್ಭದಲ್ಲಿ,ಮಹಾತೇಶ ಟಕನ್ನವರ,ಮಲೇಶ ಸವದಿ, ಫಿಜಾನ ನಾಲಬಂದ,ಪೈಸಲ ಸನದಿ,ತುಕಾರಾಮ ಕದಮ,ಮಲ್ಲು ಕುಳೋಳಿ,ಮುತ್ತು ಮೋಕಾಶ,ಬಸವರಾಜ ತೇರದಾಳ,ಮತ್ತಿನ ಮುಲ್ಲಾ,ಸಾಗರ ಸನದಿ,ಮದಸರ ಅವಟಿ,ಮಂಜು ನೂಲಿ,ಶಬ್ಬೀರ ಸಾತಬಚ್ಚೆ,ಮಹಾತೇಶ ಹುಲಸದಾರ,ವಿಶ್ವನಾಥ ಚಿಮ್ಮಡ,ರವಿ ಬಾಸಿಂಗಿ, ರವಿ ಬಡಕಂಬಿ,ಮುಜಾಹಿದ ನಾಲಬಂದ, ಸುಂದರ ಸೌದಾಗರ,ಮಾಂತೇಶ ಬಾಡಗಿ,ಸಂತೋಷ ಬಡಕಂಬಿ ಸೇರಿದಂತೆ ,ಕ್ರೀಡಾ ಪ್ರೇಮಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
