ರಾಮದುರ್ಗ:
ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿ ಮಾಡಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಕೇಂದ್ರದ ಆದೇಶ ಪ್ರತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಸಿಐಟಿಯು ನೇತೃತ್ವದಲ್ಲಿ ನಗರದ ಎಪಿಜೆ ಅಬ್ದುಲ್ ಕಲಾಂ ವೃತ್ತದ ಹತ್ತಿರ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಆದೇಶದ ಪ್ರತಿಗಳನ್ನು ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿರುವ ಕೇಂದ್ರದ ಮೋದಿ ಸರಕಾರ ಯಾರ ಜೊತೆಯು ಚರ್ಚಿಸದೇ, ಅಧಿಸೂಚನೆಗೆ ಆಕ್ಷೇಪಣೆಯೂ ಕೇಳದೆ ಕಾನೂನುಗಳನ್ನು ಜಾರಿ ಮಾಡಿ ದುಡಿಯುವ ಜನರಿಗೆ ಕೇಂದ್ರ ಸರಕಾರ ದ್ರೋಹ ಬಗೆದಿದೆ. ಕೇಂದ್ರ ಸರಕಾರ ೨೦೧೯ ರಲ್ಲಿಯೇ ಈ ಹೊಸ ಕಾರ್ಮಿಕ ಸಂಹಿತೆಗಳನ್ನು ತರಲು ಮುಂದಾಗಿತ್ತು. ದೇಶದಲ್ಲಿ ಕಾರ್ಮಿಕರ ವಿರೋಧಗಳು, ಪ್ರತಿಭಟನೆಗಳು ತೀವ್ರವಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರಕ್ಕೆ ಜಾರಿ ಮಾಡಲು ಆಗಿರಲಿಲ್ಲ. ಇತ್ತೀಚೆಗೆ ನಡೆದ ಬಿಹಾರ್ ಚುನಾವಣೆ ಮೊನ್ನೆ ನಡೆದ ೫ ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ವಿಜಯ ಸಾಧಿಸಿದ್ದರ ಅಹಂನಲ್ಲಿ ಈ ಹೊಸ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಕಸಿದುಕೊಂಡು ಈ ದೇಶದ ಬಂಡವಾಳ ಶಾಹಿಗಳ ಜೇಬು ತುಂಬಲು ಹೊರಟಿದೆ ಎಂದು ಜಿ.ಎಂ ಜೈನೆಖಾನ್ ಆಕ್ರೋಶ ವ್ಯಕ್ತಪಡಿಸಿದರು.
ಹಠಮಾರಿ ಕೇಂದ್ರ ಸರಕಾರ ಕಾರ್ಮಿಕರ ಭವಣೆ ಕೇಳದೆ, ಪ್ರತಿಭಟನೆಗೂ ಕಿವಿ ಕೊಡದೆ, ಮನವಿಗಳಿಗೂ ಸ್ಪಂದಿಸದೆ ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಿರುವುದು ಖೇದಕರ ಸಂಗತಿ ಎಂದು ಕಾರ್ಮಿಕ ಮುಖಂಡ ನಾಗಪ್ಪ ಸಂಗೊಳ್ಳಿ ವಿಷಾದ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಕಾರ್ಮಿಕ ಸಂಘದ ಮುಖಂಡರಾದ ಕೃಷ್ಣಾ ಹೊಸೂರ, ಮಹಾಂತೇಶ ಪಾಶ್ಚಾಪೂರ, ಅಂಗನವಾಡಿ ನೌಕರರ ಸಂಘದ ಮುಖಂಡರಾದ ವಿಜಯಲಕ್ಷ್ಮೀ ಸಿದ್ದಿಬಾಂವಿ, ರೇಖಾ ಪಟ್ಟಿಹಾಳ, ಬೋರವ್ವ ತೆಕ್ಕಿ, ಕಟ್ಟಡ ಕಾರ್ಮಿಕರ ಸಂಘದ ಮಾರುತಿ ಮುದಗುರಿ, ಬಾಳಪ್ಪ ಕಿಟದಾಳ ಇತರರು ಇದ್ದರು.
