ಬಳ್ಳಾರಿ.01: ಪ್ರಪಂಚದಲ್ಲಿ ಅತ್ಯಂತ ಉತ್ಕೃಷ್ಟವಾದ ಸಂವಿಧಾನವನ್ನು ನೀಡಿರುವ ಡಾ. ಬಿ..ಆರ್.ಅಂಬೇಡ್ಕರ್ ಅವರು ಒಬ್ಬ ಮಹಾನ್ವಿ ವಿಶ್ವ ಜ್ಞಾನಿಯಾಗಿದ್ದರು ಎಂದು ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ. ಚಿನ್ನಸ್ವಾಮಿ ಸೋಸಲೆ ಪ್ರತಿಪಾದಿಸಿದರು.
ಅವರು ನಗರದ ಜೋಳದರಾಶಿ ದೊಡ್ಡನಗೌಡ ರಂಗಮAದಿರದಲ್ಲಿ ಹಮ್ಮಿಕೊಂಡಿದ್ದ ಬಳ್ಳಾರಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘದ ಉದ್ಘಾಟನೆ ಮತ್ತು ಛಲವಾದಿ ಸಮುದಾಯದ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,
ದೇಶದಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಎದುರಿಸದವರು, ಅನುಭವಿಸದವರು ಅನುಭವಿಸಿದಂತೆ ಹೇಳಿಕೊಳ್ಳುತ್ತಿದ್ದಾರೆ. ನಿಜವಾಗಿ ಸಾಮಾಜಿಕ ಸಮಸ್ಯೆ ಎದುರಿಸಿ, ಅನುಭವಿಸಿದ ಅಂಬೇಡ್ಕರ್ ಅವರು, ತಮ್ಮನ್ನು ಅಸ್ಪೃಶ್ಯರೆಂದು ಕರೆದವರು, ನಿರ್ಲಕ್ಣ್ಯದಿಂದ ನೋಡಿದವರ ವಿರುದ್ಧ ಬರೆದಿದ್ದಾರೆ. ಅವರ ಮಾನಸಿಕ ಅಸ್ಪೃಶ್ಯದ ಬಗ್ಗೆ, ಅವರನ್ನು ಅಸ್ಪೃಶ್ಯ ಎಂದು ಕರೆದವರ ಬಗ್ಗೆ ಬರೆದಿದ್ದಾರೆ. ಅವರಿಗೆ ಈ ನೆಲಮೂಲದ ಬಗ್ಗೆ ಗೊತ್ತು. ಅದಕ್ಕೆ ಅವರು ಸಂವಿಧಾನ ಬರೆದಿದ್ದಾರೆ ಎಂದ ಅವರು, ಅಂಬೇಡ್ಕರ್ ಪರ ಇದ್ದವರಿಗೆ ಅವರ ಬಗ್ಗೆ ಗೊತ್ತಾಗಲಿಲ್ಲಲ್ಲ. ಅವರ ವಿರೋಧಿಗಳಿಗೆ ಗೊತ್ತು. ಅದಕ್ಕೆ ಅವರು ಅಭಿವೃದ್ಧಿಯಾಗಿದ್ದಾರೆ ಎಂದು ಮೇಲ್ವರ್ಗದ ಬಗ್ಗೆ ಮಾರ್ಮಿಕವಾಗಿ ತಿಳಿಸಿದರು.
ಇದೇ ವೇಳೆ ಅಂಬೇಡ್ಕರ್ ಅವರನ್ನು ದೇವರಾಗಿ ಅಲ್ಲ, ಅವರನ್ನು ಜ್ಞಾನಿಯಾಗಿ ನೋಡಬೇಕು ಎಂದ ಅವರು, ನಾವು ಕಣ್ಣು ಮುಚ್ಚಿಕೊಂಡು ಸಂವಿಧಾನವನ್ನು ನೋಡುತ್ತಿದ್ದೇವೆ ನಾವು ಅಧೀನರಲ್ಲ, ಧೀನರು. ಇಂದಿನ ಮಕ್ಕಳೆ ನಾಳಿನ ಪ್ರಜೆಗಳು . ಅಂಬೇಡ್ಕರ್ ಅವರ ಫಲವನ್ನು ನಾವು ಅನುಭವಿಸಬೇಕು. ನಮ್ಮ ಫಲವತ್ತಾದ ಭೂಮಿಯಲ್ಲಿ ಅಂಬೇಡ್ಕರ್ ಪಾರ್ಕ್ ನಿರ್ಮಿಸಬೇಕು ಎಂದು ಅವರು ವಿವರಿಸಿದರು.
ತೀರ್ಥದ ಚರಿತ್ರೆ ಅಲ್ಲ:
ನಮ್ಮದು ಬೆವರಿನ ಚರಿತ್ರೆ, ತೀರ್ಥದ ಚರಿತ್ರೆ ಅಲ್ಲ. ಎಡ-ಬಲ ಎಂದು ನಾವೇ ಬಡಿದಾಡಿದರೆ ಮತ್ತೊಂದು ವರ್ಗದವರು ಮುಖ್ಯಮಂತ್ರಿಯಾಗುತ್ತಾರೆ. ಹಳ್ಳಿಗಳಲ್ಲಿ ಗ್ರಾಮದೇವತೆ ಹೆಸರಲ್ಲಿ ನಡೆಯುವ ದೇವದಾಸಿಯಂತಹ ಅನಿಷ್ಠ ಪದ್ಧತಿಗಳನ್ನು ನಿರ್ಮೂಲನೆ ಮಾಡಬೇಕು ಎಂದು ಅವರು ತಿಳಿಸಿದರು.
ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಹೆಚ್.ಕೆ.ಬಸವರಾಜ ಮಾತನಾಡಿ, ರಾಜ್ಯದಲ್ಲಿ ದಲಿತ ಸಮುದಾಯ ಸಂಘಟನೆಗಳ ಶಕ್ತಿಯನ್ನು ದಲಿತ ರಾಜಕಾರಣಿಗಳು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಒಂದು ವೇಳೆ ಬಳಸಿಕೊಂಡಿದ್ದರೆ ಸಿಎಂ ಆಗುತ್ತಿದ್ದರು. ದಲಿತ ರಾಜಕಾರಣಿಗಳಿಗೆ ಸಮುದಾಯದ ಸಂಘಟನಾ ಶಕ್ತಿ, ಪ್ರಾಮಾಣಿಕತೆ ಎಲ್ಲವೂ ಗೊತ್ತಿದೆ. ಬಲಗೈ ಕೋಟದಲ್ಲಿ ಶಾಸಕರು, ಸಚಿವರು ಆಗಿದ್ದಾರೆ. ಬಲಗೈ ಸಮುದಾಯದ ಪ್ರಭಲ ರಾಜಕಾರಣಿಗಳಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹಸಚಿವ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಅವರು ಸಮುದಾಯದ ಪರ ಬಲವಾಗಿ ನಿಂತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಉತ್ತುಂಗದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಸರಿಯಾಗಿ ಧ್ವನಿ ಎತ್ತಲಿಲ್ಲ, ಧ್ವನಿ ಎತ್ತಿದ್ದರೆ ಸೋನಿಯಾಗಾಂಧಿ, ರಾಹುಲ್ ಗಾಂಧಿ ಎಲ್ಲರೂ ಬೆಲೆ ಕೊಡುತ್ತಿದ್ದರು ಎಂದ ಅವರು, ದಲಿತ ಸಿಎಂ ಅಂತು ಮಾಡಲಿಲ್ಲ, ಡಿಸಿಎಂ ಸ್ಥಾನವನ್ನೂ ಕೇಳಬೇಕಾ ಎಂದು ಪ್ರಶ್ನಿಸಿದರು.
ಬಿಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಆರ್.ಗಂಗಾಧರಯ್ಯ, ನಗರ ಡಿವೈಎಸ್ ಪಿ ವಿ.ಗೋವಿಂದರಾಜುಲು, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ನರಸಪ್ಪ, ಗೌರವಾಧ್ಯಕ್ಷ ಡಾ. ಸಿ.ಹೆಚ್.ಸೋಮನಾಥ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಗೂಳಪ್ಪ ಬೆಳ್ಳೇಕಟ್ಟೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಮುದಾಯದ ನಿವೃತ್ತ ಸರ್ಕಾರಿ ನೌಕರರ, ವಿಶೇಷ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ಎಸ್ ಎಸ್ ಎಲ್ ಸಿ, ಪಿಯುಸಿ ಯಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದ್ದ 140ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಹನುಮಪ್ಪ ಸ್ವಾಗತಿಸಿದರು. ಹಿರಿಯ ವರದಿಗಾರ ಸಿ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೌದ್ಧ ಮಹಾಸಭಾದ ಕಮಲರತ್ನ ಬಂತೇಜಿ, ವೆಂಕಟರಮಣ, ಸಿ..ಆರ್.ಹನುಮಂತ, ಶಂಕ್ರಪ್ಪ ಸೇರಿದಂತೆ ಸಮುದಾಯದ ಹಲವಾರು ಮುಖಂಡರು ಇದ್ದರು.
