ಕೊಪ್ಪಳ ಮೇ ೦೬: ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಎಲ್ಲಾ ಕೂಲಿಕಾರರು ಫಾರಂ ನಂ.೬ ಸಲ್ಲಿಸುವ ಮೂಲಕ ಕೂಲಿ ಕೆಲಸಕ್ಕೆ ಹಾಜರಾಗುವಂತೆ ಜಿಲ್ಲಾ ಪಂಚಾಯತ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಕರೆ ನೀಡಿದರು.
ಕಲಕೇರಿ ಗ್ರಾಮ ಪಂಚಾಯತಿಯ ವತಿಯಿಂದ ಮಂಗಳವಾರ ಕಲಕೇರಿ ಗ್ರಾಮದ ಸಂತ ಷರೀಪರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಐಇಸಿ ಕಾರ್ಯಕ್ರಮದಡಿ ರೋಜಗಾರ್ ದಿವಸ್ ಕಾರ್ಯಕ್ರಮದಲ್ಲಿ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿ ಮಾನವ ದಿನಕ್ಕೆ ರೂ. ೩೭೦ ಕೂಲಿ ನಿಗದಿಪಡಿಸಿದ್ದು, ಸಂಪೂರ್ಣವಾಗಿ ಕೂಲಿ ಕೆಲಸ ನಿರ್ವಹಿಸಿ ಪೂರ್ತಿ ಹಣ ಪಡೆದುಕೊಳ್ಳಬೇಕು. ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಕೆಲಸದ ಜೊತೆಗೆ ಆರೋಗ್ಯ ಕಡೆ ಕಾಳಜಿವಹಿಸಬೇಕು. ೧೮ ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರು ಜಾಬಕಾರ್ಡ ಬಳಕೆ ಮಾಡಿಕೊಂಡು ಕೂಲಿ ಕೆಲಸ ಪಡೆಯಲು ಕಡ್ಡಾಯವಾಗಿ ನಮೂನೆ-೬ ಸಲ್ಲಿಸಬೇಕು. ಮೇ ಮತ್ತು ಜೂನ್ ವರೆಗೆ ೬೦ ದಿನಗಳ ಕೂಲಿ ಕೆಲಸ ಪಡೆಯಬೇಕೆಂದರು.
ಕೂಲಿ ಹಣದಿಂದ ಮಕ್ಕಳ ಶಾಲಾ, ಕಾಲೇಜು ಶುಲ್ಕ ಭರಿಸಲು, ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗೆ ಶುಲ್ಕ ಹಾಗೂ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದರು.ಜಾಬಕಾರ್ಡನಲ್ಲಿರುವ ಕುಟುಂಬದ ಎಲ್ಲ ಸದಸ್ಯರು ಇ-ಕೆವೈಸಿ ಹೊಂದಿದ ನಂತರವೇ ಎನ್ಎಂಆರ್ ಪ್ರಕಾರ ಕೂಲಿಕಾರರು ಕೂಲಿ ಕೆಲಸಕ್ಕೆ ಹಾಜರಾಗಬೇಕು. ೧ & ೨ನೇ ಹಾಜರಾತಿ ಕಡ್ಡಾಯವಾಗಿರುತ್ತದೆ ಎಂದು ಹೇಳಿದರು.
ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಪ್ರತಿ ಜಾಬಕಾರ್ಡಗೆ ೧೦೦ ಮಾನವ ದಿನಗಳ ಕೂಲಿ ಕೆಲಸ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆಯಬೇಕು. ಗ್ರಾಮೀಣ ಭಾಗದ ಕೂಲಿಕಾರರು ಕೂಲಿ ಅರಸಿ ಗುಳೆ ಹೋಗುವದನ್ನು ನಿಯಂತ್ರಿಸಿ ಸ್ಥಳೀಯವಾಗಿ ಉದ್ಯೋಗ ಒದಗಿಸಿ ಅವರಿಗೆ ಕೂಲಿ ಹಣ ಪಾವತಿಸಿ ಸ್ವಾವಂಬಿ ಜೀವನ ನಡೆಸಲು ಯೋಜನೆಯ ಸದುದ್ದೇಶವಾಗಿದೆ. ಎಲ್ಲಾ ಕೂಲಿಕಾರರು ಸಾಮಾಜಿಕ ಭದ್ರತೆ ವಿಮೆಗಳಾದ ಪಿಎಂಜೆಜೆಬಿವೈ, ಪಿಎಂಎಸ್ಬಿವೈ.ಗಳಲ್ಲಿ ನೊಂದಣಿ ಮಾಡಿಕೊಳ್ಳುವಂತೆ ಕರೆ ನೀಡಿದರು.
ಗ್ರಾಮ ಪಂಚಾಯತಿ ಡಿಇಒ ಕುಮಾರ ಪರಗಿ, ಬೇರ್ಪೂಟ್ ಟೆಕ್ನಿಷಿಯನ್ ಮಾರುತಿ ವಾಲ್ಮೀಕಿ, ಗ್ರಾಮ ಕಾಯಕ ಮಿತ್ರ ರಾಧಾ, ಕಾಯಕ ಬಂಧುಗಳಾದ ನಾಗರಾಜ ಮಲಾಜಿ, ಮುತ್ತು ಲಮಾಣಿ, ಕುಮಾರ ಚವ್ಹಾಣ್, ರಾಮಣ್ಣ ಉಪ್ಪಾರ, ವಿರೇಶ ಹರಿಜನ, ಕೂಲಿಕಾರರು ಉಪಸ್ಥಿತರಿದ್ದರು.
