ಬಾಗಲಕೋಟೆ : ಮೇ ೦೯ : ಕಳೆದ ೨೦೨೫-೨೬ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಸಕ್ಕರೆ ಕಾರ್ಖಾನೆಗಳು ಈಗಾಗಲೇ ಶೇ.೯೭ ರಷ್ಟು ಬಿಲ್ ಪಾವತಿ ಮಾಡಿದ್ದು, ಬಾಕಿ ಬಿಲ್ಲನ್ನು ವಾರದಲ್ಲಿ ಪಾವತಿಸುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಕಾರ್ಖಾನೆಗಳಿಗೆ ಗಡುವು ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಸಕ್ಕರೆ ಕಾರ್ಖಾನೆ ಮಾಲಿಕರ, ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಘೋಷಿಸಿದ ಎಫ್.ಆರ್.ಪಿ ದರದಂತೆ ಹಾಗೂ ಸರಕಾರದ ಆದೇಶದಂತೆ ಮೊದಲ ಕಂತಿನಲ್ಲಿ ಶೇ.೯೭ ರಷ್ಟು ಬಿಲ್ ಪಾವತಿ ಮಾಡಿದ್ದು, ಬಾಕಿ ಪಾವತಿಗೆ ಸಂಬಂಧಿಸಿದಂತೆ, ವಾರದಲ್ಲಿ ಪಾವತಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆಯುಕ್ತರು, ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ನಿರ್ದೇಶಕರು ಬೆಂಗಳೂರು ಇವರ ಆದೇಶದಂತೆ ೨೦೨೫-೨೬ನೇ ಹಂಗಾಮಿಗೆ ಕಬ್ಬು ಪೂರೈಸಿದ ರೈತರಿಗೆ ಹೆಚ್ಚುವರಿಯಾಗಿ ಘೋಷಿಸಿದ ಪ್ರತಿ ಮೆಟ್ರಿಕ್ ಟನ್ಗೆ ೫೦ ರೂ.ಗಳಂತೆ ಒಟ್ಟು ೮೩.೫೪ ಕೋಟಿ ರೂ.ಗಳ ಪೈಕಿ ಈಗಾಗಲೇ ಮೊದಲ ಕಂತಾಗಿ ೬೯.೬೦ ಕೋಟಿರೂ.ಗಳನ್ನು ಸರಕಾರ ಬಿಡುಗಡೆ ಮಾಡಿದೆ. ಅಲ್ಲದೇ ಎರಡನೇ ಕಂತು ೧೩.೯೪ ಕೋಟಿ ರೂ.ಗಳು ಬಿಡುಗೆಯಾಗಿದ್ದು, ಎರಡು ದಿನಗಳಲ್ಲಿ ಕಾರ್ಖಾನೆಗಳಿಗೆ ಜಮೆ ಆಗಲಿದೆ. ಕಾರ್ಖಾನೆಗಳು ಸಹ ಹೆಚ್ಚುವರಿ ಪ್ರತಿ ಮೆಟ್ರಿಕ್ ಟನ್ಗೆ ನೀಡಬೇಕಾದ ೫೦ ರೂ.ಗಳನ್ನು ಸೇರಿಸಿ, ಪ್ರತಿ ಮೆಟ್ರಿಕ್ ಟನ್ಗೆ ೧೦೦ ರೂ.ಗಳನ್ನು ರೈತರಿಗೆ ಜಮೆ ಮಾಡತಕ್ಕದ್ದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈಗಾಗಲೇ ಹೆಚ್ಚುವರಿಯಾಗಿ ಸರಕಾರಿ ಘೋಷಿಸಿದ ಪ್ರಟಿ ಮೆಟ್ರಿಕ್ ಟನ್ಗೆ ೫೦ ರೂ. ಹಾಗೂ ಕಾರ್ಖಾನೆಗಳ ಪಾಲಿನ ೫೦ ರೂ. ಸೇರಿ ಒಟ್ಟು ೧೦೦ ರೂ.ಗಳಂತೆ ನಾಯನೇಗಲಿಯ ಇಐಡಿ ಪ್ಯಾರಿ (ಇಂಡಿಯಾ ಲಿ) ಹಾಗೂ ಮುಧೋಳ ತಾಲೂಕಿನ ಉತ್ತೂರಿನ ಇಂಡಿಯನ್ ಕೇನ್ ಪಾವರ್ ಲಿಮಿಟೆಡ್ನವರು ಪಾವತಿ ಮಾಡಿರುತ್ತಾರೆ. ಉಳಿದ ಕಾರ್ಖಾನೆಗಳು ತುರ್ತಾಗಿ ರೈತರಿಗೆ ಪಾವತಿ ಮಾಡಿ ಉಪಯೋಗತಾ ಪ್ರಮಾಣ ಪತ್ರ (ಯುಸಿ) ವನ್ನು ನೀಡುವಂತೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾತನಾಡಿ, ಕಬ್ಬು ಪೂರೈಸಿದ ರೈತರಿಗೆ ನಗದಿತ ಅವಧಿಯೊಳಗೆ ಬಿಲ್ ಪಾವತಿಯಾಗಬೇಕು. ಪಾವತಿಗೆ ವಿಳಂಬ ದೋರಣೆ ಅನುಸರಿಯುವಂತಿಲ್ಲ. ರೈತರ ಹಿತದೃಷ್ಠಿಯಿಂದ ಕಬ್ಬಿನ ಬಿಲ್ ಪಾವತಿ ವಿಚಾರವನ್ನು ಜಿಲ್ಲಾಡಳಿತ ಗಂಭಿರವಾಗಿ ಪರಿಗಣಿಸಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ನೀಡಿದ ಗಡುವಿನೊಳಗಾಗಿ ಬಿಲ್ ಪಾವತಿಗೆ ಕ್ರಮವಹಿಸಲು ತಿಳಿಸಿದರು.
ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಮನೋಹರ ಅಹಿರೆ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ, ಜಿಲ್ಲಾ ಪರಿಸರ ಮಾಲಿನ್ಯ ಅಧಿಕಾರಿ ಅನೀಲಕುಮಾರ ಚಳಗೇರಿ ಸೇರಿದಂತೆ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ಮಾಲಿಕರು, ವ್ಯವಸ್ಥಾಪಕರ ನಿರ್ದೇಶಕರು ಉಪಸ್ಥಿತರಿದ್ದರು.
ಸಕ್ಕರೆ ಕಾರ್ಖಾನೆಗಳ ಮೂಲಕ ಸಸಿ ನೆಡುವ ಅಭಿಯಾನ ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆ ಹಾಗೂ ಹಸಿರು ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಜಿಲ್ಲಾಡಳಿವು ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಸಹಯೋಗದಲ್ಲಿ ಬೃಹತ್ ಮಟ್ಟದಲ್ಲಿ ಸಸಿ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಸಕ್ಕರೆ ಕಾರ್ಖಾನೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಯಡಿ ಅರಣ್ಯ ಇಲಾಖೆಯವರು ಪ್ರತಿ ಕಾರ್ಖಾನೆಗಳಿಗೆ ನಿಯೋಜಿಸಿದ ೧೦೦ ಹೆಕ್ಟರ್ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಡಲು ಪ್ರಾರಂಭಿಸಿ ಅವುಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಮಳೆಗಾಲದ ಪೂರ್ವ ಸಿದ್ದತೆಯಾಗಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಹಸಿರು ಜಿಲ್ಲೆ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಜಿಲ್ಲಾಧಿಕಾರಿ ಸಂಗಪ್ಪ ಅವರು ಮನವಿ ಮಾಡಿದ್ದಾರೆ.