ಬಾಗಲಕೋಟೆ, ಮೇ ೧೫ : ಜಿಲ್ಲೆಯಲ್ಲಿ ಮೇ ೧೮ ರಿಂದ ೨೫ ವರೆಗೆ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆ-೨ರಲ್ಲಿ ಒಟ್ಟು ೩೨೩೩ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆಂದು ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಎಸ್.ಎಸ್.ಎಲ್.ಸಿ ಪರೀಕ್ಷೆ-೨ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರತಿ ತಾಲೂಕಿಗೆ ಒಂದರಂತೆ ಒಟ್ಟು ೭ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಮೂಲಭೂತ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಪರೀಕ್ಷಾ ಕಾರ್ಯವನ್ನು ವೀಕ್ಷಿಸಲು ಜಿಲ್ಲಾ ಕೇಂದ್ರದಲ್ಲಿ ವೆಬ್ಕಾಸ್ಟಿಂಗ್ ಸೌಲಭ್ಯ ಮಾಡಲಾಗಿದೆ ಎಂದು ತಿಳಿಸಿದರು.
ಪರೀಕ್ಷಾ ಕಾರ್ಯಕ್ಕೆ ೭ ಜನ ಮುಖ್ಯ ಅಧೀಕ್ಷಕರು ೭ ಜನ ಅಭಿರಕ್ಷಕರು, ೬ ಜನ ಪರೀಕ್ಷಾ ವೀಕ್ಷಕರು, ೮ ಜನ ವೆಬ್ಕಾಸ್ಟಿಂಗ್ ಸಿಬ್ಬಂದಿ, ೭ ಜನ ಮೊಬೈಲ್ ಸ್ವಾಧೀನಾಧಿಕಾರಿಗಳು, ೭ ಜನ ಸ್ಥಾನಿಕ ಜಾಗೃತ ದಳದವರು, ೬ ಮಾರ್ಗಾಧಿಕಾರಿಗಳು ಹಾಗೂ ೧೩೫ ಕೊಠಡಿ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಒಟ್ಟು ೩೨೩೩ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಬಾದಾಮಿ ತಾಲೂಕಿನಲ್ಲಿ ೩೫೭, ಬಾಗಲಕೋಟೆಯಲ್ಲಿ ೫೧೦, ಬೀಳಗಿ ೬೦೬, ಹುನಗುಂದ ೩೨೫, ಜಮಖಂಡಿ ೮೦೧ ಹಾಗೂ ಮುಧೋಳ ೬೩೪ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಬಾದಾಮಿ ವೀರಪುಲಕೇಶಿ ಹೈಯರ್ ಸೆಕೆಂಡರಿ ಸ್ಕೂಲ, ನವನಗರದ ಆದರ್ಶ ವಿದ್ಯಾಲಯ ಆರ್.ಎಂ.ಎಸ್, ಬೀಳಗಿ ಆದರ್ಶ ವಿದ್ಯಾಲಯ, ಹುನಗುಂದ ವಿಜಯ ಮಹಾಂತೇಶ ಬಾಲಕರ ಪ್ರೌಢಶಾಲೆ, ಜಮಖಂಡಿ ಸರಕಾರಿ ಪ.ಭಾ.ಸಂ.ಪ.ಪೂ ಕಾಲೇಜ (ಪ್ರೌಢಶಾಲಾ ವಿಭಾಗ), ಬನಹಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜ ಹಾಗೂ ಮುಧೋಳ ಆರ್.ಎಂ.ಜಿ ಪ್ರೌಢಶಾಲೆಯಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲದೇ ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತ ೨೦೦ ಮೀಟರ ಪ್ರದೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಜಿ.ಮನ್ನಿಕೇರಿ ಸೇರಿದಂತೆ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಛಾಯಾಚಿತ್ರ ಲಗತ್ತಿಸಿದೆ.
