ಕೊಪ್ಪಳ: ಹುಬ್ಬಳ್ಳಿ ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದ 'ನರಗುಂದ-ನವಲಗುಂದ ರೈತ ಬಂಡಾಯ ವೇದಿಕೆ'ಯಲ್ಲಿ ಇದೇ ತಿಂಗಳ 16 (ಶನಿವಾರ) ಮತ್ತು 17ರಂದು (ಭಾನುವಾರ) ಎರಡು ದಿನಗಳ ಕಾಲ 12ನೇ 'ಮೇ ಸಾಹಿತ್ಯ ಮೇಳ' ನಡೆಯಲಿದೆ ಎಂದು ಹಿರಿಯ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದರು.
ಮಂಗಳವಾರ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಬಾರಿಯ ಮೇಳದಲ್ಲಿ 'ಸಾಂವಿಧಾನಿಕ ಪ್ರಜಾಸತ್ತೆಯ ಮೇಲಿನ ದಾಳಿ: ಚಹರೆ ಮತ್ತು ಹೊರದಾರಿಗಳು' ಎಂಬ ವಿಷಯದ ಕುರಿತು ಗಂಭೀರ ಚರ್ಚೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಜರುಗಲಿವೆ. ಸಮ ಸಮಾಜದ ನಿರ್ಮಾಣದ ಆಶಯದೊಂದಿಗೆ ಆಯೋಜಿಸಲಾಗಿರುವ ಈ ಮೇಳದಲ್ಲಿ ನಾಡಿನ ಖ್ಯಾತ ಚಿಂತಕರು ಹಾಗೂ ಹೋರಾಟಗಾರರು ಭಾಗವಹಿಸಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಗದಗದ ಲಡಾಯಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗ, ಕವಲಕ್ಕಿಯ ಕವಿ ಪ್ರಕಾಶನ ಹಾಗೂ ಹುಬ್ಬಳ್ಳಿಯ ಮೇ ಸಾಹಿತ್ಯ ಮೇಳ ಬಳಗದ ಸಂಯುಕ್ತ ಆಶ್ರಯದಲ್ಲಿ ಈ ಬೃಹತ್ ಮೇಳ ಆಯೋಜನೆಯಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸಮಾನ ಮನಸ್ಕರು ಪಾಲ್ಗೊಳ್ಳಲಿದ್ದು, ಕೊಪ್ಪಳ ಜಿಲ್ಲೆಯಿಂದಲೂ ನೂರಾರು ಸಂಖ್ಯೆಯಲ್ಲಿ ಸಾಹಿತ್ಯಾಭಿಮಾನಿಗಳು ಹಾಗೂ ಚಿಂತಕರು ಭಾಗವಹಿಸಲಿದ್ದಾರೆ. ಜಿಲ್ಲೆಯ ಪ್ರಗತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬೆಟ್ಟದೂರು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ಪ್ರಮುಖ ಚಿಂತಕರು ಹಾಗೂ ಹೋರಾಟಗಾರರಾದ ಟಿ. ರತ್ನಾಕರ, ಸುಖರಾಜ್ ತಾಳಕೇರಿ, ಶರಣಪ್ಪ ಬಾಚಲಾಪುರ, ಗೋವಿಂದರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
