ನಾಗ್ಪುರ(ಮಹಾರಾಷ್ಟ್ರ): ಭಾರಿ ಹಿಂಸಾಚಾರ ನಡೆದ ನಾಗ್ಪುರದಲ್ಲಿ ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೂ ನಗರದ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಫ್ಯೂ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಪರಿಸ್ಥಿತಿ ಪರಿಶೀಲಿಸಿದ ಬಳಿಕ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ರವೀಂದರ್ ಕುಮಾರ್ ಸಿಂಗಲ್, “ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಗೆ 2,000 ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದೆ. ಅದೇ ರೀತಿ, ಡಿಸಿಪಿ ನೇತೃತ್ವ ತಂಡದಲ್ಲಿ ತ್ವರಿತ ಪ್ರತಿಕ್ರಿಯ ತಂಡ (ಕ್ಯೂಆರ್ಟಿ) ಮತ್ತು ಸಂಘರ್ಷ ನಿಯಂತ್ರಣ ಪೊಲೀಸರು (ಆರ್ಸಿಪಿ) ಗಸ್ತು ನಡೆಸುತ್ತಿದ್ದಾರೆ” ಎಂದರು.
ಸೋಮವಾರ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಔರಂಗಜೇಬನ ಸಮಾಧಿ ತೆರವಿಗೆ ಆಗ್ರಹ ವಿಚಾರವಾಗಿ ಉಂಟಾದ ಪ್ರತಿಭಟನೆ ವೇಳೆ ಸಮುದಾಯವೊಂದರ ಪವಿತ್ರ ಧಾರ್ಮಿಕ ಗ್ರಂಥವನ್ನು ಸುಟ್ಟು ಹಾಕಲಾಗಿದೆ ಎಂಬ ಗಾಳಿ ಸುದ್ದಿ, ಸಂಘರ್ಷಕ್ಕೆ ಕಾರಣವಾಗಿತ್ತು. ನಾಗ್ಪುರದ ಮಹಲ್ ಪ್ರದೇಶದ ಚಿಟ್ನಿಸ್ ಪಾರ್ಕ್ನಲ್ಲಿ ಹಿಂಸಾಚಾರ ಭುಗಿಲೆದ್ದು, 34 ಪೊಲೀಸರು ಗಾಯಗೊಂಡಿದ್ದರು.
ಪರಿಸ್ಥಿತಿಯನ್ನು ಹತೋಟಿಗೆ ತರುವ ಉದ್ದೇಶದಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಜನರು ಮತ್ತು ವಾಹನಗಳ ಸಂಚಾರ ನಿರ್ಬಂಧಿಸಿ ಕರ್ಫ್ಯೂ ವಿಧಿಸಲಾಗಿದೆ. ಕೊತ್ವಾಲಿ, ಗಣೇಶ್ಪೇತ್, ತೆಹಸಿಲ್, ಲಕಡ್ಗಂಜ್, ಪಚ್ಪೋಲಿ, ಶಾಂತ್ ನಗರ, ಸಕರ್ದಾರ, ನಂದನ್ವನ್, ಇಮಾಂಬದ, ಯಶೋಧರ ನಗರ ಮತ್ತು ಕಪಿಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶಗಳಲ್ಲಿ ಕರ್ಪ್ಯೂ ಮುಂದುವರೆದಿದೆ.