ಹುಕ್ಕೇರಿ: ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ದಿ. ಅಪ್ಪಣಗೌಡ ಪಾಟೀಲ್ ಪೆನಲ್ ಗೆ ಬೆಂಬಲಿಸಿದರೆ ರೈತರು ತಮ್ಮ ಕೆಲಸ, ಕಾರ್ಯಗಳಿಗಾಗಿ ಯಾರ ಮನೆ ಕದ ತಟ್ಟುವ ಪರಿಸ್ಥಿತಿ ಬರುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ತಾಲೂಕಿನ ಕಮತನೂರು, ಕುರಣಿ, ಹಂದಿಗೂಡ ಗ್ರಾಮದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ನಿಮಿತ್ತ ಹಮ್ಮಿಕೊಂಡಿದ್ದ ಸಾರ್ವಜನಿಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತರಿಗೆ ಅನುಕೂಲವಾಗಲಿ, ರೈತರ ಸಂಕಷ್ಟ ಪರಿಹಾರವಾಗಲಿ ಎಂಬ ಉದ್ದೇಶದಿಂದ ಕಳೆದ 50 ವರ್ಷಗಳ ಹಿಂದೆಯೇ ಅಪ್ಪಣಗೌಡ ಪಾಟೀಲ್ ಅವರು ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘವನ್ನು ಕಟ್ಟಿದ್ದರು. ಆದರೆ ಈ ಹಿಂದಿನ ಆಡಳಿತ ಮಂಡಳಿ ಕಳೆದ ಮೂವತ್ತು ವರ್ಷಗಳಿಂದ ಈ ಸಂಘವನ್ನು ಕಟ್ಟಿ ಬೆಳೆಸುವಲ್ಲಿ, ರೈತರಿಗೆ ಓಲಳೆಯ ಸೇವೆ ನೀಡಲು ವಿಫಲವಾಗಿದೆ ಎಂದು ದೂರಿದರು.
ಜಯಗೌಡ ಪಾಟೀಲ್ ನೇತೃತ್ವದಲ್ಲಿ ಹೊಸದಾಗಿ ರಚನೆಗೊಂಡ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿ ಅರ್ಜಿ ಸಲ್ಲಿಸಿ 24 ಗಂಟೆ ಒಳಗೆ ರೈತರಿಗೆ ನೂತನ ಟಿಸಿಗಳನ್ನು ನೀಡುತ್ತಿದೆ. ಈ ಮುಂಚೆ ರೈತರು ಟಿಸಿ ಪಡೆಯಲು ಹರಸಾಹಸ ಮಾಡಬೇಕಾಗಿತ್ತು. ಆದ್ದರಿಂದ ಕಳೆದ ಮೂವತ್ತು ವರ್ಷಗಳ ಇಲ್ಲಿನ ರಾಜಕೀಯವನ್ನು ನೀವು ನೋಡಿದ್ದಿರಿ. ಇನ್ನು ಮುಂದೆಯಾದರೂ ಬದಲಾವಣೆ ಬಯಸಿದರೆ ನಮಗೆ ರಾಜಕೀಯವಾಗಿ ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.
ಸಹಕಾರಿ ಸಂಘ ರೈತರದು, ಇಲ್ಲಿ ನೀವು ದುಡ್ಡು ಕೊಟ್ಟು ಸೇವೆ ಪಡೆಯುವ ಅವಶಕತೆ ಇಲ್ಲ.ಇದಕ್ಕೆಲ್ಲ ಮುಕ್ತಿ ನೀಡಬೇಕೆಂದರೆ ದಿ. ಅಪ್ಪಣಗೌಡ ಪಾಟೀಲ್ ಪೆನಲ್ ಗೆ ಬೆಂಬಲಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿ.ಜಿ. ಪಾಟೀಲ್, ಶಿವಶಂಕರ ಪಾಟೀಲ್, ರಿಷಬ್ ಪಾಟೀಲ್ ಸೇರಿದಂತೆ ಕಮತನೂರು, ಕುರಣಿ, ಹಂದಿಗೂಡ ಗ್ರಾಮದ ಅಪಾರ ಸಂಖ್ಯೆ ಗ್ರಾಮಸ್ಥರು ಇದ್ದರು.