ಬಳ್ಳಾರಿ. ಆ. 28: ಎಲ್ಲಾ ಸರ್ಕಾರಗಳು ಬಹು ರಾಷ್ಟ್ರೀಯ ಕಂಪನಿಗಳ, ಬಂಡವಾಳಶಾಹಿದಾರರ ಕೈ ಗೊಂಬೆಗಳಾಗಿ ರೈತರ ಜಮೀನುಗಳನ್ನು ತಾವೇ ಕೈಯಾರ ಮಾರಾಟ ಮಾಡುವಂತ ಸಂದರ್ಭವನ್ನು ಸೃಷ್ಟಿಸುತ್ತಿದ್ದಾರೆ ಬಹಳಷ್ಟು ಜನ ರೈತರು ಇಂತಹ ಕಪಿಮುಷ್ಟಿಗೆ ಸಿಲುಕಿ ಕೃಷಿ ಭೂಮಿಯನ್ನು ಕಳೆದುಕೊಂಡಿದ್ದಾರೆ ಕೃಷಿಯೇ ನಮ್ಮ ಉಸಿರು ಎಂದುಕೊಂಡು ಜೀವನ ಮಾಡುತ್ತಿರುವ ರೈತ ಕುಟುಂಬಗಳನ್ನು ಈ ರೀತಿಯಾಗಿ ಬೀದಿಗೆ ತಳ್ಳಲಾಗುತ್ತಿದೆ ಅಥವಾ ಆತ್ಮಹತ್ಯೆ ಎಡೆಗೆ ನೂಕುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚುಕ್ಕಿ ನಂಜುಂಡಸ್ವಾಮಿ ಸರ್ಕಾರಗಳ ವಿರುದ್ಧ ಬೇಸರವನ್ನು ವ್ಯಕ್ತಪಡಿಸಿದರು.
ಅವರು ಬುಧವಾರದಂದು ನಗರದ ಗಾಂಧಿ ಭವನದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಮ್ದು ಸಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ರಾಸಾಯನಿಕ ಮತ್ತು ಕ್ರಿಮಿನಾಶಕಗಳಿಂದ ಬೆಳೆಯುವ ಬೆಳೆಯನ್ನು ಉಂಡು ಪ್ರತಿ ಐದು ಜನರಲ್ಲಿ ಒಬ್ಬರಿಗೆ ಕ್ಯಾನ್ಸರ್, ಕಿಡ್ನಿ, ಲಿವರ್ ಸೇರಿದಂತೆ ಹಲವು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ರೈತರು ಬೆಳೆಯುವ ಬೆಳೆಯಿಂದಲೇ ಅಥವಾ ಆಹಾರ ಪದಾರ್ಥಗಳಿಂದಲೇ ಈ ರೀತಿಯ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ, ಬಹುರಾಷ್ಟ್ರೀಯ ಕಂಪನಿಗಳು ರೈತರ ಹೊಲಗಳಿಗೆ ವಿಷಉಣ್ಣಿಸುವಂತೆ ಪ್ರೇರೇಪಿಸುತ್ತಿದ್ದಾರೆ, ಅದೇ ಹೊಲದಲ್ಲಿ ಬೆಳೆದ ರಸಾಯನಿಕ ಅಂಶಗಳನ್ನು ಒಳಗೊಂಡ ಆಹಾರಗಳನ್ನು ತಿನ್ನುತ್ತಿದ್ದಾರೆ ಇಂತಹ ಗಂಭೀರ ಕಾಯಿಲೆಗಳಿಗೆ ವಿಷಯುಕ್ತ ಆಹಾರವೇ ಮೂಲ ಕಾರಣ ಎಂದು ಕೇದವನ್ನು ವ್ಯಕ್ತಪಡಿಸಿದರು.
ಇದರಿಂದಾಗಿ ರೈತ ಸಂಘಟನೆ ಸಾವಯವ ಕೃಷಿ ಕಡೆಗೆ ಮಗ್ಗುಲು ಬದಲಾಯಿಸಿ ವಿಷಮುಕ್ತ ಆಹಾರಗಳನ್ನು ಬೆಳೆಯುವ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ, ಇಂತಹ ರೈತರನ್ನು ಸಹ ಇಳುವರಿ ಮತ್ತು ಬೆಲೆಯ ವಿಷಯವನ್ನು ಮುಂದಿಟ್ಟು ಅವರನ್ನು ಸಹ ದಾರಿ ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ, ಯಾವುದೇ ಕಾರಣಕ್ಕೂ ಸಾವಯವ ಕೃಷಿಯಿಂದ ನಷ್ಟವಾಗುವುದಿಲ್ಲ ಕಡಿಮೆ ಬೆಲೆ ಬಂದರೂ ಸಹ ಉತ್ತಮ ಬೆಲೆ ಪಡೆಯಬಹುದಾಗಿದೆ ಎಂದ ಅವರು, ಇಂಥ ರೈತರು ಬೆಳೆದ ಬೆಳೆಯನ್ನು ತಾವೇ ಬಳಕೆದಾರರಿಗೆ ಮಾರಾಟ ಮಾಡಿ ಅಧಿಕ ಲಾಭವನ್ನು ಗಳಿಸಬಹುದು, ಆದ್ದರಿಂದಲೇ ರೈತ ಸಂಘದಿಂದ ನಮ್ದು ಸಂತೆ ಕಲ್ಪನೆ ಅಡಿಯಲ್ಲಿ ಆರಂಭಿಸಲಾಗಿದೆ, ಇಲ್ಲಿ ದಲ್ಲಾಳಿಗಳಿಲ್ಲ ಆರ್ಗನಿಕ್ ಎಂಬ ಪದವಿಲ್ಲ ರೈತರೇ ತಮ್ಮ ಹೊಲಗಳಲ್ಲಿ ಬೆಳೆದ ವಿಷ ಮುಕ್ತ ಆಹಾರ ಪದಾರ್ಥಗಳನ್ನು ನೇರವಾಗಿ ಬಳಕೆದಾರರಿಗೆ ಮಾರಾಟ ಮಾಡುತ್ತಿದ್ದಾರೆ, ನೇರ ಮಾರಾಟವೇ ರೈತರ ಹೋರಾಟವಾಗಿದೆ ಎಂದು ಚುಕ್ಕಿ ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಾಲ ಮುಕ್ತ ಕೃಷಿ ಮಹಿಳೆ ಎಂಬ ಸಂಘವನ್ನು ಸಹ ಉದ್ಘಾಟಿಸಿದರು.