ವೀರಶೈವ ಲಿಂಗಾಯತ ಜಾಗತಿಕ ಬ್ಯುಸೆನೆಸ್ ಕಾನ್ ಕ್ಲೇವ್: ಉದಯೋನ್ಮುಖ ಉದ್ಯಮಿಗಳಿಗೆ ಉತ್ತಮ ವೇದಿಕೆ
ಬೆಂಗಳೂರು, ಜ.29: ಯುವಶಕ್ತಿ ಅಣುಶಕ್ತಿಗಿಂತ ಹಿರಿದಾಗಿದ್ದು, ಯುವಜನರಿಗೆ ಸೂಕ್ತ ಅವಕಾಶ ಕಲ್ಪಿಸಿ ಅವರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದಿರುವ ವೀರಶೈವ ಲಿಂಗಾಯತ ಜಾಗತಿಕ ಬ್ಯುಸೆನೆಸ್ ಕಾನ್ ಕ್ಲೇವ್ ನಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈ ಕಾನ್ ಕ್ಲೇವ್ ನಲ್ಲಿ ಉದಯೋನ್ಮುಖ ಉದ್ಯಮಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿದೆ. 40 ಕೈಗಾರಿಕಾ ಮಳಿಗೆಗಳಿದ್ದು, ವಿಶೇಷ ವ್ಯಾಪಾರ ಕಾರ್ಯಾಗಾರವನ್ನೂ ಏರ್ಪಡಿಸಲಾಗಿದೆ. ಆ ಮೂಲಕ ಸಮುದಾಯದ ಯುವಜನರಿಗೆ ಉದ್ಯಮಶೀಲತೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ವೀರಶೈವ ಲಿಂಗಾಯತ ಸಮುದಾಯದಲ್ಲೂ ಬಡವರಿದ್ದು, ಪ್ರತಿಭಾವಂತರಿದ್ದರೂ ಅವರಿಗೆ ಅವಕಾಶ ಲಭಿಸುತ್ತಿಲ್ಲ. ಸಮಾಜದ ಉದ್ದಿಮೆದಾರರು ಪ್ರತಿಭಾವಂತರಿಗೆ ಮತ್ತು ಕಡುಬಡತನದಲ್ಲಿರುವ ಸಮಾಜದ ಬಡವರಿಗೂ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಕರೆ ನೀಡಿದರು.
ಆಧುನಿಕತೆ ಬೆಳೆದಂತೆಲ್ಲಾ ನಮ್ಮ ಯುವಕರು ದುಶ್ಚಟಗಳ ದಾಸರಾಗುತ್ತಿದ್ದಾರೆ. ಅಂತಹ ಯುವಜನರಿಗೆ ಮಾರ್ಗದರ್ಶನ ಮಾಡಿ ಅವರನ್ನು ಸನ್ಮಾರ್ಗದಲ್ಲಿ ನಡೆಸುವಂತೆ ಮಾಡಬೇಕು. ಆತ್ಮವಿಶ್ವಾಸ ಮೂಡಿಸಬೇಕು. ಕಾಯಕವೇ ಕೈಲಾಸ ಎಂದು ಬಸವಣ್ಣ ಹೇಳಿದ್ದಾರೆ. ದುಡಿಯುವ ಕೈಗೆ ಉದ್ಯೋಗ ದೊರಕಿಸಬೇಕು ಎಂದರು.
ನಾವು ನಮ್ಮ ಹಿರಿಯರು ಸರ್ವೋತ್ತಮರು ಎಂದು ಹೇಳಿದರೆ ಸಾಲದು, ನಾವೂ ಉತ್ತಮರಾಗಿ ಬಾಳಬೇಕು. ಬಲವಿದ್ದವನು ಬಾಳುತ್ತಾನೆ ಎಂದು ಹೇಳುತ್ತಾರೆ. ನಾವು ನಮ್ಮ ಶಕ್ತಿಯನ್ನು ತೋರಿಸಬೇಕಾದರೆ ನಮ್ಮ ಸಮುದಾಯವನ್ನು ಆರ್ಥಿಕವಾಗಿ ಬಲಪಡಿಸುವುದರ ಜೊತೆಗೆ ಎಲ್ಲ ಸಮುದಾಯವನ್ನೂ ಜೊತೆಯಲ್ಲಿ ತೆಗೆದುಕೊಂಡು ಹೋಗುವ ಮೂಲಕ ಸುಂದರ ಸಮಾಜ ನಿರ್ಮಾಣ ಮಾಡಬೇಕು ಎಂದು ಈಶ್ವರ ಖಂಡ್ರೆ
ಸಮಾರಂಭದಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್, ವೀಣಾ ಕಾಶೆಪ್ಪನವರ್ ಮೊದಲಾದವರು ಪಾಲ್ಗೊಂಡಿದ್ದರು.


