ಬಳ್ಳಾರಿ.ಆ.06.: ಗೋಕಾಕ್ ತಾಲೂಕಿನ ಶಿಂಧಿ ಕುರಿಬೆಟ್ಟ ಗ್ರಾಮದ ವಿಠಲದೇವರ ಆವರಣದಲ್ಲಿ ಕರ್ನಾಟಕ ರಾಜ್ಯ ಕುಸ್ತಿ ಸಂಘ (ರಿ) ಹಾಗೂ ಬಾಲಚಂದ್ರ ಜಾರಕಿಹೊಳಿ ರಮೇಶ್ ಜಾರಕಿಹೊಳಿ ಅಭಿಮಾನಿ ಬಳಗ ಮತ್ತು ಮಹರ್ಷಿ ಶ್ರೀ ಭಗೀರಥ ಯುವಕ ಸಂಘದ ವತಿಯಿಂದ ಡಿ.ಲಕ್ಷ್ಮಣ ಅಜ್ಜಪ್ಪ ದೇವಋಷಿಗಳ ಹಾಗೂ ಬಸವ ಅಜ್ಜರ ಪುಣ್ಯತಿಥಿ ಅಂಗವಾಗಿ ಕರ್ನಾಟಕ ರಾಜ್ಯ ಮಟ್ಟದ 23 ವರ್ಷದೊಳಗಿನ ಪುರುಷ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು ಎಂದು ಕರ್ನಾಟಕ ರಾಜ್ಯ ಕುಸ್ತಿ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಜೆ ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇತರೆ ಮುಖಂಡರೊಂದಿಗೆ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಜೆ.ಶ್ರೀನಿವಾಸ, ರಾಜ್ಯದ ಕುಸ್ತಿ ಪಟುಗಳು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪ್ರಖ್ಯಾತಿಯನ್ನು ಗಳಿಸಬೇಕು ಅದಕ್ಕೆ ಅನುಕೂಲ ವಾಗುವಂತಹ ಸಹಕಾರವನ್ನು ನಮ್ಮ ಕರ್ನಾಟಕ ರಾಜ್ಯ ಕುಸ್ತಿ ಸಂಘ ಬೆನ್ನೆಲುಬಾಗಿ ನಿಲ್ಲಲಿದೆ . ಅದಕ್ಕಾಗಿ ನಮ್ಮ ಸಂಘದ ರಾಜ್ಯಾಧ್ಯಕ್ಷರಾದ ಗುಣ ರಂಜನ್ ಶೆಟ್ಟಿ ಅವರು ರಾಜ್ಯದಲ್ಲಿರುವ ಒಳ್ಳೆ ಒಳ್ಳೆ ಪ್ರತಿಭೆಯುಳ್ಳ ಕುಸ್ತಿ ಪಟುಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ಬೆಂಬಲವಾಗಿ ನಿಂತು ಮತ್ತು ಪ್ರೋತ್ಸಾಹ ನೀಡುವ ಸಲುವಾಗಿ ಇದೇ ಆಗಸ್ಟ್ 04 ರಂದು ಸೋಮವಾರ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಶಿಂಧಿ ಕುರಿಬೆಟ್ಟ ಗ್ರಾಮದಲ್ಲಿ ರಾಜ್ಯಮಟ್ಟದ ಪುರುಷ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಪದಾಧಿಕಾರಿಗಳಾದ ನಾಗೇಶ್, ಕುಮಾರ್, ಕುಸ್ತಿ ಸಂಘದ ಗದಗ ಜಿಲ್ಲಾಧ್ಯಕ್ಷ ಹಾಲಪ್ಪ, ಬಳ್ಳಾರಿ ಜಿಲ್ಲಾಧ್ಯಕ್ಷ ಶಂಕರ್ ಬಸಪ್ಪ, ಸೇರಿದಂತೆ ಕುಸ್ತಿ ಸಂಘದ ಪದಾಧಿಕಾರಿಗಳು, ಕುಸ್ತಿ ಪಟುಗಳು ಮತ್ತು ಮುಂತಾದವರು ಉಪಸ್ಥಿತರಿದ್ದರು.