ನೇಸರಗಿ: ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪದಲ್ಲಿ ಅಕ್ಟೋಬರ್ ೧೬ ರಂದು ವಿಶ್ವ ಆಹಾರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರದ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿಯವರು ನೆರವೇರಿಸಿದರು.
ನಂತರ ಮಾತನಾಡಿದ ಅವರು, ಮಹಿಳೆಯರಲ್ಲಿ ಅಪೌಷ್ಟಿಕತೆಯು ಬಹಳಷ್ಟಿದ್ದು, ಇದರ ಕೊರತೆನೀಗಿಸಲು ಮಹಿಳೆಯರು ಔಷಧಿಗಳನ್ನು ತೆಗೆದುಕೊಳ್ಳದೆ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿ ಸಿರಿಧಾನ್ಯಗಳು, ತರಕಾರಿ ಹಣ್ಣು ಇವುಗಳಲ್ಲಿ ನಾರಿನಾಂಶ ಹೆಚ್ಚು ಇದ್ದು, ಆಹಾರವು ನಿಧಾನವಾಗಿ ಜೀರ್ಣವಾಗುವುದರಿಂದ ದೇಹಕ್ಕೆ ಬಹಳ ಸಮಯದವರೆಗೆ ಶಕ್ತಿಯನ್ನು ಪೂರೈಕೆ ಮಾಡುವುದಲ್ಲದೆ, ಶರೀರಕ್ಕೆ ಬೇಕಾದ ಖನಿಜಗಳನ್ನು/ಪೋಷಕಾಂಶಗಳನ್ನು ಒದಗಿಸುತ್ತದೆ. ಪೌಷ್ಟಿಕ ಕೈತೋಟದ ಮಹತ್ವ ಮತ್ತು ಸ್ಥಳೀಯವಾಗಿ ದೊರೆಯುವಂತಹ ಆಹಾರ ಪದಾರ್ಥಗಳ ಸೇವನೆಗೆ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು.
ಕೇಂದ್ರದ ಗೃಹ ವಿಜ್ಞಾನಿ ಡಾ. ಭಾವಿನಿ ಪಾಟೀಲ ಇವರು ದಿನನಿತ್ಯ ಸೇವಿಸುವ ಆಹಾರದಲ್ಲಿ ಹಣ್ಣು ಮತ್ತು ತರಕಾರಿಗಳ ಮಹತ್ವ ಮತ್ತು ಪೌಷ್ಟಿಕತೆ, ಸಿರಿಧಾನ್ಯಗಳ ಮಹತ್ವ ವಿವರಿಸುತ್ತಾ, ಬದಲಾಗುತ್ತಿರುವ ಜೀವನಶೈಲಿ, ಅತಿಯಾದ ಎಣ್ಣೆ ಪದಾರ್ಥಗಳ ಸೇವನೆ ಹಾಗೂ ಉಪ್ಪು ಸಕ್ಕರೆಯಿಂದ ತಯಾರಿಸಿದ ಆಹಾರ ಪದಾರ್ಥಗಳ ಹೆಚ್ಚು ಸೇವಿಸುವುದರಿಂದ ಅತೀ ಚಿಕ್ಕ ವಯಸ್ಸಿನಲ್ಲಿಯೇ ರಕ್ತದೊತ್ತಡ, ಸಕ್ಕರೆ ರೋಗ, ಹೃದಯ ರೋಗ, ಕ್ಯಾನ್ಸರ್ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಈ ಎಲ್ಲ ರೋಗಗಳನ್ನು ಹತೋಟಿ ಮಾಡಲು ಕಿರುಧಾನ್ಯಗಳ ಉಪಯೋಗ ಒಂದು ವರದಾನವಾಗಿದೆ.
ಇತರ ಏಕದಳ ಧಾನ್ಯಗಳಂತೆ ಸಿರಿಧಾನ್ಯಗಳು ಸಹ ದೇಹಕ್ಕೆ ಧಾರಾಳವಾಗಿ ಶಕ್ತಿಯನ್ನು ಕೊಡುವುವು. ಸಾಮಾನ್ಯ ಜನರ ದಿನದ ಆಹಾರದಲ್ಲಿ ದೇಹಕ್ಕೆ ಬೇಕಾಗುವ ಶೇಕಡಾ ೭೦-೮೦ ರಷ್ಟು ಶಕ್ತಿಯು ಏಕದಳ ಧಾನ್ಯ ಮತ್ತು ಸಿರಿಧಾನ್ಯಗಳಿಂದ ದೊರಕುವುದು ಎಂದು ತಿಳಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ವಿಶ್ವ ಆಹಾರ ದಿನಾಚರಣೆಯ ಪ್ರತಿಜ್ಞೆಯನ್ನು ಬೋಧಿಸಿದರು.
ಕೇಂದ್ರದ ವಿಜ್ಞಾನಿ ಎಸ್. ಎಮ್. ವಾರದ ಇವರು ವಿಶ್ವ ಆಹಾರ ದಿನಾಚರಣೆ ಉದ್ದೇಶ ಮತ್ತು ಮಹತ್ವದ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಈ ವಿಶ್ವ ಆಹಾರ ದಿನಾಚರಣೆಯನ್ನು ವಿಶ್ವದ ೧೫೦ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಅಕ್ಟೋಬರ್ ೧೬ ರಂದು ಆಚರಿಸಲಾಗುತ್ತದೆ ಎಂದು ಹೇಳಿದರು.
ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ. ಎಸ್. ಎಸ್. ಹಿರೇಮಠ ಇವರು, ಪ್ರಾಚೀನ ಆಹಾರ ಪದ್ಧತಿಗಳಿಗೆ ಮರಳುವುದರ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಚೀಯಾವನ್ನು ಆಹಾರದಲ್ಲಿ ಸೇವಿಸುವುರಿಂದಾಗುವ ಆರೋಗ್ಯದ ಪ್ರಯೋಜನಗಳ ಬಗ್ಗೆ ತಿಳಿ ಹೇಳಿದರು. ಡಾ. ಪೃಥ್ವಿ ಹೆಗಡೆ ಔ?ಧೀಯ ಸಸ್ಯಗಳ ಮಹತ್ವದ ಬಗ್ಗೆ ತಿಳಿಸಿದರು. ಡಾ. ಮಧುರೀಮಾ ವಿನೋದ ಆಹಾರ ತಯಾರಿಕೆಯಲ್ಲಿ ಪೌಷ್ಟಿಕಾಂಶಗಳನ್ನು ಹೆಚ್ಚಿಸುವಲ್ಲಿ ಮಹಿಳೆಯರ ಪಾತ್ರದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ಸಿಬ್ಬಂದಿಗಳಾದ ಜಿ. ಬಿ. ವಿಶ್ವನಾಥ, ಡಾ. ಗುರುರಾಜ ಕೌಜಲಗಿ, ವಿನೋದ ಕೋಚಿ ಹಾಗೂ ಮಂಜುನಾಥ ಪಿ. ಐ. ಹಾಗೂ ೪೦ ಜನ ಕೃಷಿ ಸಖಿಯರು ಪಾಲ್ಗೊಂಡಿದ್ದರು.