ಯರಗಟ್ಟಿ- ತೀವ್ರ ಕಗ್ಗಂಟಾಗಿ ಪರಿಣಮಿಸಿದ್ದ ಯರಗಟ್ಟಿ ಕ್ಷೇತ್ರದ ಬಿಡಿಸಿಸಿ ಬ್ಯಾಂಕ್ ಚುನಾವಣಾ ಅಭ್ಯರ್ಥಿ ಆಯ್ಕೆಯು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ಸಂಧಾನದ ಫಲದಿಂದ ಸುಸೂತ್ರವಾಗಿ ನಡೆದಿದ್ದು, ಸವದತ್ತಿ ಶಾಸಕ ವಿಶ್ವಾಸ ವೈದ್ಯ ಅವರು ಯರಗಟ್ಟಿ ಕ್ಷೇತ್ರ ಮತ್ತು ಸವದತ್ತಿ ಕ್ಷೇತ್ರಕ್ಕೆ ವಿರುಪಾಕ್ಷಿ ಮಾಮನಿಯವರು ಅಭ್ಯರ್ಥಿಗಳಾಗಲಿದ್ದಾರೆ ಎಂದು ಅವರು ಪ್ರಕಟಿಸಿದರು.
*ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಸಂಧಾನ ಯಶಸ್ವಿ*
ಯರಗಟ್ಟಿ: ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಶನಿವಾರದಂದು ಯರಗಟ್ಟಿ ಭಾಗದ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿಯವರು ವೈದ್ಯ ಮತ್ತು ಅಜೀತಕುಮಾರ ದೇಸಾಯಿ ಬಣಗಳ ಮಧ್ಯ ನಡೆಯುತ್ತಿದ್ದ ಜಿದ್ದಾ ಜಿದ್ದಿನ ಹೋರಾಟಕ್ಕೆ ಬ್ರೆಕ್ ಹಾಕಿದ್ದು, ವಿಶ್ವಾಸ ವೈದ್ಯ ಅವರು ನಮ್ಮಗುಂಪಿನ ಅಭ್ಯರ್ಥಿಯಾಗಿದ್ದು, ಇದಕ್ಕೆ ಅಜೀತ ದೇಸಾಯಿಯವರು ಸಂಪೂರ್ಣ ಸಹಮತ ಸೂಚಿಸಿದ್ದಾರೆ ಎಂದು ಹೇಳಿದರು.
ಪ್ರವಾಸಿ ಮಂದಿರದ ಸಭೆಗೂ ಮುನ್ನ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಅಜೀತ ದೇಸಾಯಿ ಅವರ ನಿವಾಸಕ್ಕೆ ತೆರಳಿ ಸುದೀರ್ಘ ಚರ್ಚೆ ನಡೆಸಿದರು. ದೇಸಾಯಿ ಮತ್ತವರ ಬೆಂಬಲಿಗರ ಸಮಸ್ಯೆಗಳನ್ನು ಆಲಿಸಿದ ಅವರು, ಈಗಾಗಲೇ ನಾವೆಲ್ಲರೂ ಸೇರಿಕೊಂಡು ಸವದತ್ತಿ ಶಾಸಕ ವಿಶ್ವಾಸ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದು, ಇದಕ್ಕೆ ತಮ್ಮಗಳ ಸಹಮತವೊಂದೇ ಬಾಕಿ ಇದ್ದು, ಸವದತ್ತಿ ಮತ್ತು ಯರಗಟ್ಟಿ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಸವದತ್ತಿ ಕ್ಷೇತ್ರದಿಂದ ವಿರೂಪಾಕ್ಷ ಮಾಮನಿ ಅವರು ನಮ್ಮ ಅಭ್ಯರ್ಥಿ ಎಂದು ಅವರು ಘೋಷಿಸಿದರು. ಯರಗಟ್ಟಿ ಮತ್ತು ಸವದತ್ತಿ ಕ್ಷೇತ್ರಗಳಲ್ಲಿ ಎರಡೂ ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆ ಮಾಡುವಂತೆಯೂ ಇದೇ ಸಂದರ್ಭದಲ್ಲಿ ಮುಖಂಡರನ್ನು ಕೋರಿದರು.
ಸಹಕಾರಿ ತತ್ವದಡಿ ನಡೆಯುವ ಈ ಚುನಾವಣೆಯು ಪಕ್ಷಾತೀತವಾಗಿದೆ. ಮುಂದಿನ ದಿನಗಳಲ್ಲಿ ದೇಸಾಯಿ ಅವರಿಗೆ ಯಾವುದೇ ಅನ್ಯಾಯ ಆಗದಂತೆ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವುದಾಗಿ ತಿಳಿಸಿದರು.
ಸವದತ್ತಿ ಶಾಸಕರಿಂದ ಯಾವ ತೊಂದರೆಗಳು ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತೇನೆಂದು ಅವರು ದೇಸಾಯಿಯವರ ಬೆಂಬಲಿಗರಿಗೆ ವಾಗ್ದಾನ ಮಾಡಿದರು.
ನಂತರ ಪ್ರವಾಸಿ ಮಂದಿರದಲ್ಲಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿಯವರು ಅಕ್ಟೋಬರ್ ತಿಂಗಳಲ್ಲಿ ಜರುಗುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪಕ್ಷಾತೀತವಾಗಿ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ೧೬ ಸ್ಥಾನಗಳಲ್ಲಿ ನಾವು ೧೨ ಸ್ಥಾನಗಳನ್ನು ಗೆಲ್ಲುತ್ತೇವೆ. ಕೆಲವು ಕಡೆಗಳಲ್ಲಿ ಮಾತ್ರ ಚುನಾವಣೆ ನಡೆಯಬಹುದು. ಉಳಿದೆಡೆ ಅವಿರೋಧ ಆಯ್ಕೆಗೆ ಒತ್ತು ಕೊಟ್ಟಿದ್ದು, ಸಮಸ್ಯೆಗಳಿದ್ದ ಕಡೆಗಳಲ್ಲಿ ಚರ್ಚಿಸಿ ಒಮ್ಮತದ ಅಭ್ಯರ್ಥಿಗಳನ್ನು ಹಾಕುತ್ತಿದ್ದೇವೆ. ಬಹುತೇಕವಾಗಿ ಜಿಲ್ಲೆಯ ಎಲ್ಲ ಪಕ್ಷಗಳ ಮುಖಂಡರು ನಮಗೆ ಬೆಂಬಲವನ್ನು ನೀಡುತ್ತಿದ್ದಾರೆ. ಸತೀಶ್ ಜಾರಕಿಹೊಳಿ, ಡಾ. ಪ್ರಭಾಕರ ಕೋರೆ, ರಮೇಶ್ ಜಾರಕಿಹೊಳಿ ಮತ್ತು ಅಣ್ಣಾ ಸಾಹೇಬ ಜೊಲ್ಲೆಯವರು ಬಿಡಿಸಿಸಿ ಬ್ಯಾಂಕಿನ ಚುನಾವಣೆಯ ನೇತೃತ್ವವನ್ನು ವಹಿಸಿಕೊಂಡಿದ್ದಾರೆಂದು ಹೇಳಿದರು.
ನಮ್ಮದೇ ಗುಂಪು ಬ್ಯಾಂಕಿನ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಈಗಿರುವ ೬೫೦೦ ಕೋಟಿ ರೂಪಾಯಿ ಠೇವಣಿ ಮೊತ್ತವನ್ನು ೧೦ ಸಾವಿರ ಕೋಟಿ ರೂಪಾಯಿವರೆಗೆ ಮಾಡುತ್ತೇವೆ. ೩೮೦೦ ಕೋಟಿ ರೂಪಾಯಿ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗುವಂತೆ ಅತೀ ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ವಿತರಿಸಿ ಮಾದರಿ ಬ್ಯಾಂಕ್ ಎಂಬುವಂತೆ ಮಾಡಿ ತೋರಿಸುತ್ತೇವೆ. ರೈತರ ಆರ್ಥಿಕ ಸುಧಾರಣೆಗಾಗಿ ಹಲವಾರು ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ ಎಂದು ಹೇಳಿದರು.
ದೇಸಾಯಿಗೆ ಬೆಮುಲ್ ನಿರ್ದೇಶಕ ಸ್ಥಾನ..?
ಈಗಾಗಲೇ ಬ್ಯಾಂಕಿನ ಪ್ರಚಾರದಲ್ಲಿ ತೊಡಗಿದ್ದ ಯರಗಟ್ಟಿಯವರಾದ ಅಜೀತಕುಮಾರ ದೇಸಾಯಿ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾದ ಬಾಲಚಂದ್ರ ಜಾರಕಿಹೊಳಿಯವರು ಬೆಮುಲ್ ನಿರ್ದೇಶಕ ಸ್ಥಾನವನ್ನು ನೀಡಲಿದ್ದಾರೆ. ಎರಡು ಸ್ಥಾನಗಳು ಭರ್ತಿ ಮಾಡಲಿಕ್ಕೆ ಅವಕಾಶವಿರುವುದರಿಂದ ಯರಗಟ್ಟಿ ತಾಲ್ಲೂಕು ಕೇಂದ್ರದಿಂದ ಅಜೀತಕುಮಾರ ದೇಸಾಯಿ ಅವರನ್ನು ನಿರ್ದೇಶಕ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಉಳಿದ ಒಂದು ಸ್ಥಾನವು ಮೂಡಲಗಿ ಅಥವಾ ಗೋಕಾಕ ತಾಲ್ಲೂಕಿಗೆ ಹೋಗಲಿದೆ ಎನ್ನಲಾಗುತ್ತಿದೆ.
ಅಸಮಾಧಾನಿತಗೊಂಡ ದೇಸಾಯಿ(ಧಣಿ) ಅವರಿಗೆ ದಸರಾ ಅಥವಾ ದೀಪಾವಳಿ ಹಬ್ಬಕ್ಕೆ ಕೊಡುಗೆ ರೂಪದಲ್ಲಿ ಬೆಮುಲ್ ನಿರ್ದೇಶಕ ಸ್ಥಾನ ಒಲಿದು ಬರುವುದನ್ನು ಸ್ವತಃ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಬಹಿರಂಗಪಡಿಸಿದರು.
ಸವದತ್ತಿ ಶಾಸಕ ವಿಶ್ವಾಸ ವೈದ್ಯ, ವಿಶ್ವನಾಥ ಮಾಮನಿ, ಪ್ರಭು ಪ್ರಭುನವರ, ಸಿ.ಪಿ.ಬಾಳಿ, ಚಂದ್ರು ಜಂಬರಿ, ಕೆಎಂಎಫ್ ಶಂಕರ ಇಟ್ನಾಳ, ರಮೇಶ ಅಣ್ಣಿಗೇರಿ, ಪಂಚನಗೌಡ ದ್ಯಾಮನಗೌಡರ, ಪ್ರಕಾಶ ನರಿ, ಪ್ರಕಾಶ ವಾಲಿ, ಮಲಿಕಸಾಬ ಬಾಗವಾನ, ನಿಖಿಲ್ ಪಾಟೀಲ, ಪರ್ವತಗೌಡ ಪಾಟೀಲ, ಬಸಯ್ಯ ಹಿರೇಮಠ,
ಡಾ ಕೆ ವಿ ಪಾಟೀಲ,
ವಿನಯಕುಮಾರ ದೇಸಾಯಿ, ಈರಣ್ಣ ಚಂದರಗಿ, ವೆಂಕಟೇಶ್ ದೇವರೆಡ್ಡಿ, ಕುಮಾರ ಹಿರೇಮಠ, ಮಹದೇವ ಯಡ್ರಾವಿ ನಾಗಪ್ಪ ಪುಂಜಿ, ನೀಲಕಂಠ ಸಿದ್ದ ಬಸಣ್ಣವರ್, ಡಿ ಡಿ ಟೂಪುಜಿ,ಸೇರಿದಂತೆ ಯರಗಟ್ಟಿ- ಸವದತ್ತಿ ಭಾಗದ ಅನೇಕ ಮುಖಂಡರು ಉಪಸ್ಥಿತರಿದ್ದರು.