ಮುದ್ದೇಬಿಹಾಳ: ತಾಲ್ಲೂಕಿನ ಚವನಭಾವಿ ಗ್ರಾಮದಲ್ಲಿ ಜಲ ಜೀವನ ಮಿಷನ್ (ಜೆಜಿಎಂ) ಯೋಜನೆಯಡಿ ಅನುಷ್ಠಾನಗೊಂಡಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ಮಂಗಳವಾರ ಬೆಂಗಳೂರಿನ ರಾಜ್ಯ ಗುಣಮಟ್ಟದ ಮೇಲ್ವಿಚಾರಣಾ ಅಧಿಕಾರಿ (SQM) ಮೋಹನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ನಳದ ಸಂಪರ್ಕಗಳನ್ನು ವೀಕ್ಷಿಸಿದ ಅಧಿಕಾರಿಗಳು, ಮನೆಯ ಯಜಮಾನಿಯರನ್ನು ಮಾತನಾಡಿಸಿ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿದೆಯೇ ಎಂದು ವಿಚಾರಿಸಿದರು. ಈ ವೇಳೆ ಉತ್ತರಿಸಿದ. ಕೆಲವು ನಳಗಳಿಗೆ ನೀರು ಬರುತ್ತದೆ,
ಕೆಲವು ನಳಗಳಲ್ಲಿ ನೀರು ಸರಿಯಾಗಿ ಬರುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ನೀರಿನ ಮೂಲದ ಕೊರತೆ: ಪರಿಶೀಲನೆ ವೇಳೆ ಗ್ರಾಮಸ್ಥರು ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡು, “ಗ್ರಾಮದಲ್ಲಿ ಕೇವಲ ಒಂದೇ ಒಂದು ಕೊಳವೆ ಬಾವಿ ಇದೆ. ಸರಿಯಾದ ನೀರಿನ ಮೂಲ (ಸೋರ್ಸ್) ಇಲ್ಲದ ಕಾರಣ ನಳಗಳಿಗೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಅಡಿ ನೀರು ಬಂದರೆ ಮಾತ್ರ ನಮಗೆ ಸೌಲಭ್ಯ ಸಿಗುತ್ತದೆ, ಇಲ್ಲದಿದ್ದರೆ ಕುಡಿಯುವ ನೀರಿಗೆ ಪರದಾಡುವಂತಾಗಿದೆ,” ಎಂದು ವಿವರಿಸಿದರು.
ಸರಿಯಾಗಿ ಬಾರದ ನೀರು: ಗ್ರಾಮದ ಕೆಲವು ವಾರ್ಡ್ಗಳಲ್ಲಿ ಜೆಜಿಎಂ ನಳದಲ್ಲಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು. ಕಾಮಗಾರಿಯ ಗುಣಮಟ್ಟ ಮತ್ತು ನೀರಿನ ಹಂಚಿಕೆಯಲ್ಲಿನ ಲೋಪಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.
ವರದಿ ಸಲ್ಲಿಕೆ:
ಎಲ್ಲಾ ದೂರುಗಳನ್ನು ಆಲಿಸಿದ ಅಧಿಕಾರಿ ಮೋಹನ್ ಅವರು, ಗ್ರಾಮದ ಕಾಮಗಾರಿಗಳ ಕುರಿತು ಸಮಗ್ರವಾಗಿ ಪರಿಶೀಲಿಸಿದ್ದು, ಈ ಬಗ್ಗೆ ಶೀಘ್ರವೇ ವರದಿಯನ್ನು ಸಿದ್ಧಪಡಿಸಿ ಸರಕಾರಕ್ಕೆ
ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್ ಎ ಎಲ್ ರಾಠೋಡ, ಅಡವಿ ಸೋಮನಾಳ ಗ್ರಾಪಂ ಕಾರ್ಯದರ್ಶಿ ಬಸನಗೌಡ ಬಿರಾದಾರ, ಗ್ರಾಮಸ್ಥರಾದ ಅಂಬ್ರಯ್ಯ ಮಠ, ಬಸವರಾಜ ಕುಂಬಾರ,ಬಸಪ್ಪ ಬಿರಾದಾರ,ವಿರೇಶ ಚಲವಾದಿ,ಬೀರಪ್ಪ ಸೋಮುನಾಳ,ಮೌನೇಶ ಬಿರಾದಾರ,ಜೆಜಿಎಂ ಯೋಜನೆಯ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಹಾಜರಿದ್ದರು.


