ಬಳ್ಳಾರಿ (ಚೇಳ್ಳಗುರ್ಕಿ) : (ಡಿ.11) ಶ್ರೀಕ್ಷೇತ್ರ ಎರ್ರಿತಾತನವರ ಸನ್ನಿಧಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ನಡೆದ ಪೌರತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿದ ಡಾ.ಸಾಹೇಬ್ಆಲಿ ಹೆಚ್. ನಿರಗುಡಿ ಯವರು ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳನ್ನು ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಯನ್ನಾಗಿಸಿ, ಗೌರವಯುತ ಸ್ಥಾನದಲ್ಲಿ ಕೂರಿಸಬೇಕೆನ್ನುವುದು ಪ್ರತಿಯೊಬ್ಬ ತಂದೆ-ತಾಯಿಯರ ಕನಸಾಗಿರುತ್ತದೆ. ಹಾಗಾಗಿ ಶಿಕ್ಷಣವು ಮಕ್ಕಳಲ್ಲಿ ದೇಶಭಕ್ತಿ, ಶಿಸ್ತು, ಸಂಯಮ, ಸಂಸ್ಕಾರವನ್ನು ಸೃಷ್ಟಿಸುವುದರಿಂದ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ಮಕ್ಕಳಿಗೆ ಮೌಲ್ಯ ಶಿಕ್ಷಣದ ಅವಶ್ಯಕತೆ ಇದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಸಾಹಿತಿಗಳಾದ ಶ್ರೀ ಕೆ.ಬಿ. ಸಿದ್ದಲಿಂಗಪ್ಪರವರು ಪುರ ಮತ್ತು ಪೌರದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಸದಾಶಿವನಗೌಡ, ಸಿಂದಗಿ ಗವಿಸಿದ್ದಪ್ಪ ಉಪಸ್ಥಿತರಿದ್ದರು. ಶಿಬಿರದ ನಿರ್ದೇಶಕರಾದ ಡಾ.ಸತೀಶ್ ಎ ಹಿರೇಮಠ್ ರವರು ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಶಿಬಿರದ ಸಂಯೋಜಕರಾದ ಡಾ. ವಿಕ್ರಂ ಪಿ ಹಿರೇಮಠ್ ರವರು ಶಿಬಿರಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿಗಳು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.


