ತಮಟೆ ಚಳುವಳಿ” ಮೂಲಕ ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಬಂಜಾರರ ಪ್ರತಿಭಟನೆ
ಗದಗ 13 : ಪರಿಶಿಷ್ಟ ಜಾತಿಗಳಲ್ಲಿನ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣದ ವಿರುದ್ಧವಾಗಿ, ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ, ನಗರದ ಗಾಂಧಿ ವೃತ್ತದಲ್ಲಿ ಸೋಮವಾರದಿಂದ ಆರಂಭವಾದ ಬೃಹತ್ ಪ್ರತಿಭಟನೆ ಮತ್ತು ಅನಿರ್ಧಿಷ್ಟಾವಧಿಯ ಅಹೋರಾತ್ರಿ ಧರಣಿ ಶನಿವಾರ 7ನೇ ದಿನದತ್ತ ತಲುಪಿದೆ.
ಈ ಹೋರಾಟದಲ್ಲಿ ಜಿಲ್ಲೆಯ ವಿವಿಧ ತಾಂಡಾಗಳ ಸಾವಿರಾರು ಜನರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಶನಿವಾರ ಗದಗ ಜಿಲ್ಲೆಯ 72 ತಾಂಡಾಗಳ ಪೈಕಿ ತಮ್ಮ ವೇಳಾಪಟ್ಟಿಯಂತೆ – ಕಬಲಾಯತ್ ಕಟ್ಟಿ, ಹಮ್ಮಿಗಿ, ಮಜ್ಜೂರ, ಅಕ್ಕಿಗುಂದ, ಉಳ್ಳಟ್ಟಿ, ಬೆಣಸಮಟ್ಟಿ, ಗೌಡಗೇರಿ ತಾಂಡಾಗಳ ಬಂಜಾರರು ಬೆಳಿಗ್ಗೆ 11.00 ಗಂಟೆಗೆ ಗದಗ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಸರ್ಕಾರದ ವಿರುದ್ಧ “ತಮಟೆ ಚಳುವಳಿ” ಮೂಲಕ ಮೆರವಣಿಗೆಯಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿದರು.
ಪ್ರತಿಭಟನಾಕಾರರು ತಮಟೆ, ನಗಾರಿ ಮೂಂತಾದ ವಾದ್ಯಗಳನ್ನು ರಸ್ತೆಯುದ್ದಕ್ಕೂ ಬಾರಿಸುತ್ತಾ “ತಮಟೆ ಚಳುವಳಿ” ಮುಖಾಂತರ ಸರ್ಕಾರದ ಅವೈಜ್ಞಾನಿಕ ಒಳಮೀಸಲಾತಿ ನಿರ್ಧಾರವನ್ನು ಕೂಡಲೇ ಕೈಬಿಡಬೇಕೆಂದು ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ಕೆ.ಸಿ. ನಭಾಪುರ, ಎನ್.ಟಿ ಪೂಜಾರ, ಪರಮೇಶ ನಾಯಕ್, ಚಂದು ನಾಯಕ್, ಧನಸಿಂಗ್ ನಾಯಕ್, ಈಶ್ವರ್ ನಾಯಕ್, ಐ.ಎಸ್. ಪೂಜಾರ್, ಟಿ.ಡಿ. ಪೂಜಾರ್, ಮಜ್ಜುರ್ ತಾಂಡೆ ಆನಂದ ನಾಯಕ್, ಶಿವಪ್ಪ ಲಮಾಣಿ, ಚನ್ನಪ್ಪ ಕಾರಬಾರಿ, ವಸಂತ್ ಲಮಾಣಿ, ವೆಂಕಪ್ಪ ಲಮಾಣಿ, ಬಾಲು ಲಮಾಣಿ, ಕೃಷ್ಣ ಲಮಾಣಿ, ಭೀಮಪ್ಪ ಪೂಜಾರಿ, ರಾಜೇಶ್ ಲಮಾಣಿ, ಧನ್ಯಪ್ಪ ಲಮಾಣಿ, ಸುರೇಶ ಲಮಾಣಿ, ಬಾಪೂಜಿ ಲಮಾಣಿ, ಕಬಲಾಯತ್ ಕಟ್ಟಿ, ನೂರಪ್ಪ ನಾಯಕ್, ರಾಮಪ್ಪ ದೊಡ್ಮನಿ, ಕೇಶಪ್ಪಾ ಲಮಾಣಿ, ಧರಮಪ್ಪ ಲಮಾಣಿ, ಥಾಕುರ್ ಲಮಾಣಿ, ಅಕ್ಕಿಗುಂದ ತಾಂಡಾದ ವೆಂಕಪ್ಪ ಕಾರಬಾರಿ ಸಕ್ರಪ್ಪ ನಾಯಕ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.