ಹರಪನಹಳ್ಳಿ: ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದ ಪುಷ್ಪಗಿರಿ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಪ್ರಚಲಿತ ವಿದ್ಯಮಾನ, ವಿಜ್ಞಾನದ ಆಗು ಹೋಗುಗಳ ಅರಿವಿಗೆ ಉತ್ತಮ ವೇದಿಕೆಯಾಯಿತು.
ವಿವಿಧ ಮಾದರಿಗಳು, ರಸಗೊಬ್ಬರ ತಯಾರಿಕಾ ವಿಧಾನ, ಹಸಿ ಹಾಗೂ ಒಣ ಕಸ ವಿಂಗಡಣೆ, ಆಹಾರ ಸಂಸ್ಕರಣೆಯ ವಿಧಾನಗಳು, ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ಪರಿಸರ ಸಂರಕ್ಷಣೆ, ನೀರಿನ ಮೂಲಗಳು ಹಾವುಗಳ ಸಂರಕ್ಷಣೆ, ಅರಣ್ಯ ನಾಶದಿಂದಾಗುವ ದುಷ್ಪರಿಣಾಮಗಳು, ಪರಿಸರ ಸಮತೋಲನ ಕಾಪಾಡುವಲ್ಲಿ ವನ್ಯಜೀವಿಗಳ ಪಾತ್ರ ಮುಂತಾದ ಅಂಶಗಳನ್ನೊಳಗೊಂಡ 165 ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸಿ ಗಮನ ಸಳೆದರು.
ರಸ್ತೆ ದಾಟುವಾಗ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳು, ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವಾಗ ಪಾಲಿಸಬೇಕಾದ ನಿಯಮಗಳು, ಉಲ್ಲಂಘಿಸಿದರೆ ದಂಡ ವಿಧಿಸುವ ಪ್ರಕ್ರಿಯೆಗಳ ಬಗ್ಗೆ ಸುಲಲಿತವಾಗಿ ವಿವರಿಸುವ ಮೂಲಕ ವಿದ್ಯಾರ್ಥಿಗಳು ಮೆಚ್ಚುಗೆಗೆ ಪಾತ್ರರಾದರು.
ವಿಜ್ಞಾನ ವಸ್ತು ಪ್ರದರ್ಶನಕ್ಕೆ ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರು ಭೇಟಿನೀಡಿದ್ದರು. ಮಕ್ಕಳು ತಯಾರಿಸಿದ ವಿಜ್ಞಾನದ ಮಾದರಿಗಳನ್ನು ವೀಕ್ಷಣೆ ಮಾಡಿ ಸಂತಸಪಟ್ಟರು. ಮಕ್ಕಳಲ್ಲಿರುವ ಕ್ರಿಯಾಶೀಲತೆ, ವಿಜ್ಞಾನದ ಬಗ್ಗೆ ಇರುವ ಕುತೂಹಲ ಕಂಡು ಬೆರಗುಗೊಂಡರು.
ಶಾಲಾ ವಾರ್ಷಿಕೋತ್ಸವದ ಅಂಗವಾಗಿ ನಡೆದ ಮಕ್ಕಳ ಹಾಗೂ ಪೋಷಕರ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಪಟುಗಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ನೀಡಿ ಅಭಿನಂದಿಸಲಾಯಿತು.ತರಗತಿ ಉತ್ತಮ ವಿದ್ಯಾರ್ಥಿ ಪ್ರಶಸ್ತಿ, ಉತ್ತಮ ವಸ್ತು ಪ್ರದರ್ಶನದಲ್ಲಿ ಗಮನ ಸೆಳೆದ ಮಾದರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದೇಶದ ಸಮಗ್ರ ಪ್ರಗತಿಗೆ ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ. ಪುಷ್ಪಗಿರಿ ಶಾಲೆ ಗ್ರಾಮೀಣ ಭಾಗದಲ್ಲಿ ಗುಣ ಮಟ್ಟದ ಶಿಕ್ಷಣ ನೀಡುತ್ತಿರುವುದು ಹೆಮ್ಮೆ ಎನಿಸುತ್ತಿದೆ ಎಂದು ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ ಡಾ.ಶಕುಂತಲಾ ತಿಳಿಸಿದರು.’ಮಕ್ಳಳ ಸೃಜನಶೀಲತೆ, ಆಸಕ್ತಿ, ಪ್ರತಿಭೆ ಅನಾವರಣಗೊಳ್ಳಲು ವಸ್ತು ಪ್ರದರ್ಶನ ಸಾಕ್ಷಿಯಾಗಿದೆ. ಕಲಿಕೆಯ ಜ್ಞಾನ ಎಲ್ಲರಿಗೂ ತಲುಪಲಿ’ಎಂದು ಶಾಲಾ ಕಾರ್ಯದರ್ಶಿ ನಾಗರಾಜಪ್ಪ ತಿಳಿಸಿದರು.ಪುಷ್ಪಗಿರಿ ಕಲ್ಯಾಣ ಸಂಸ್ಥೆ ಅಧ್ಯಕ್ಷ ಮಹಾರುದ್ರಾಚರ್, ಪರೀಕ್ಷೆಗಳು ಸಮೀಪಿಸುತ್ತಿದೆ, ಪೋಷಕರು ಮಕ್ಕಳಿಗೆ ಮನೆಯಲ್ಲಿ ಓದಲು ಉತ್ತೇಜಿಸಬೇಕು ಎಂದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ನಿರ್ದೇಶಕ ಪ್ರಶಾಂತ್ ಎನ್. ಮುಖ್ಯ ಶಿಕ್ಷಕ ಸಂತೋಷ್ ಸೇರಿದಂತೆ ಶಿಕ್ಷಕರು ಪೋಷಕರು ಹಾಜರಿದ್ದರು.


