*ಟರ್ಮಿನಲ್ಗಳ ಅಭಿವೃದ್ಧಿಗೆ ಸರ್ಕಾರದ ಹಿತಾಸಕ್ತಿ ಮುಖ್ಯ
*ಲಾರಿ ಚಾಲಕರಿಗೆ ಒಂದು ತಿಂಗಳು ಟ್ರಕ್ ಟರ್ಮಿನಲ್ ಉಚಿತ ಸೇವೆ
* ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ
ವಿಜಯನಗರ (ಹೊಸಪೇಟೆ),: ಲಾರಿಗಳಲ್ಲಿ ಬರುವ ಸರಕುಗಳನ್ನು ಸುರಕ್ಷಿತವಾಗಿ ಆಯಾ ಸ್ಥಳಕ್ಕೆ ತಲುಪಿಸಲು, ವಾಹನ ಚಾಲಕರು ವಿಶ್ರಾಂತಿ ಪಡೆಯಲು, ವಾಹನ ದಟ್ಟನೆ ಮತ್ತು ರಸ್ತೆ ಅಪಘಾತಗಳನ್ನು ತಡೆಗಟ್ಟಲು ಟ್ರಕ್ ಟರ್ಮಿನಲ್ಗಳು ಅತ್ಯಂತ ಸಹಕಾರಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಹೊಸಪೇಟೆ ಬಳಿಯ ಅಮರಾವತಿಯ ಬಳಿ ಚಿತ್ರದುರ್ಗದಿಂದ ಬಿಜಾಪುರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ 50 ರ ಬಲಭಾಗದಲ್ಲಿ ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ನಿಂದ ನೂತನವಾಗಿ ನಿರ್ಮಿಸಿರುವ ಹೊಸಪೇಟೆ ಟ್ರಕ್ ಟರ್ಮಿನಲ್ನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ನೂತನ ಟ್ರಕ್ ಟರ್ಮಿನಲ್ನಲ್ಲಿ ಒಂದು ತಿಂಗಳ ಕಾಲ ಲಾರಿ ಚಾಲಕರಿಗೆ ಉಚಿತ ಸೇವೆ ಒದಗಿಸಲು ಕ್ರಮ ವಹಿಸಲಾಗಿದೆ. ರಾಜ್ಯದಲ್ಲಿ ಬೆಂಗಳೂರು ನಗರದ ಯಶವಂತಪುರ, ದಾಸನಪುರ, ಮೈಸೂರು ನಗರದ ಬಂಡಿಪಾಳ್ಯ ಮತ್ತು ನಾಚನಹಳ್ಳಿ, ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶ, ಹೊಸಪೇಟೆಯ ಅಮರಾವತಿ, ಉತ್ತರಕನ್ನಡದ ದಾಂಡೇಲಿ, ಹುಬ್ಬಳಿಯ ಅಂಚಟಗೇರಿ, ಚಾಮರಾಜನಗರದ ಗುಂಡ್ಲುಪೇಟೆ, ರಾಯಚೂರು ಯರಮರಸ್ ಸೇರಿದಂತೆ ಒಟ್ಟು 9 ಟ್ರಕ್ ಟರ್ಮಿನಲ್ಗಳ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ ಎಂದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಾರಿ ಚಾಲಕರಿಗೆ, ಕ್ಲೀನರ್ಗಳಿಗೆ, ಮಾಲೀಕರುಗಳಿಗೆ ನಿರ್ವಹಣೆದಾರರಿಗೆ ತಂಗುದಾಣ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಸರಕುಗಳನ್ನು ಇಳಿಸುವ ಮತ್ತು ಲೋಡಿಂಗ್ ವ್ಯವಸ್ಥೆ, ವಾಹನ ಚಾಲಕರಿಗೆ ಅಗತ್ಯ ಸೌಲಭ್ಯಗಳಾದ ಇಂಧನ ತುಂಬುವಿಕೆ, ವಾಹನ ಸ್ವಚ್ಚತೆ, ವಿಶ್ರಾಂತಿ ಕೊಠಡಿಗಳು, ಕ್ಯಾಂಟೀನ್ಗಳು, ಶೌಚಾಲಯ, ವೈದ್ಯಕೀಯ ಸೌಲಭ್ಯ ಒದಗಿಸಲು ಟ್ರಕ್ ಟರ್ಮಿನಲ್ ಸಹಕಾರಿಯಾಗಲಿವೆ. ಇದರಿಂದಾಗಿ ನಗರದೊಳಗೆ ವಾಹನಗಳು ಉಗುಳುವ ಹೊಗೆಯಿಂದ ಉಂಟಾಗುವ ವಾಯುಮಾಲಿನ್ಯ ಕಡಿಮೆ ಮಾಡಲು ಸಾಧ್ಯವಿದೆ. ಇದೀಗ ಉದ್ಘಾಟಿಸಿರುವ ಹೊಸಪೇಟೆಯ ಹೈಟೆಕ್ ಟ್ರಕ್ ಟರ್ಮಿನಲ್ ರಾಜ್ಯದಲ್ಲೇ ಮಾದರಿಯಾಗಲಿದೆ. ಇವುಗಳ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಹಿತಾಸಕ್ತಿಯು ಮುಖ್ಯವಾಗಲಿದೆ. ಲಾರಿ ಚಾಲಕರು ಮತ್ತು ಮಾಲೀಕರ ಶ್ರೇಯೋಭಿವೃದ್ಧಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದೆ ಎಂದರು.
ಶಾಸಕ ಹೆಚ್.ಆರ್.ಗವಿಯಪ್ಪ ಮಾತನಾಡಿ, ಈ ಭಾಗದ ಲಾರಿ ಚಾಲಕರ, ಮಾಲೀಕರ ಮೂರ್ನಾಲ್ಕು ದಶಕದ ಬೇಡಿಕೆ ಇಂದು ಸಾಕಾರಗೊಂಡಿದೆ. ಇಂತಹ ಬೃಹತ್ ಟರ್ಮಿನಲ್ ನಿರ್ಮಾಣಕ್ಕೆ ಸಚಿವರ ಮುತುವರ್ಜಿಯೇ ಕಾರಣವಾಗಿದೆ ಎಂದರು.
ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಮಾತನಾಡಿ, ನೂತನ ಟರ್ಮಿನಲ್ನಲ್ಲಿ ಸುಮಾರು 350 ಕ್ಕೂ ಹೆಚ್ಚು ಟ್ರಕ್ಗಳನ್ನು ನಿಲುಗಡೆ ಮಾಡಬಹುದಾಗಿದೆ. ಸಿಮೆಂಟ್ ಕಾಂಕ್ರಿಟ್ ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಸೌಕರ್ಯ, ಹೈಮಾಸ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಚಾಲಕರು ಮತ್ತು ಕ್ಲೀನರ್ಗಳಿಗೆ ಶೌಚಾಲಯ, ಸ್ನಾನದಗೃಹ ಸೇರಿದಂತೆ ವಿಶಾಲವಾದ ಡೈನಿಂಗ್ ಹಾಲ್, ಅಡುಗೆ ಮನೆ, ಉಗ್ರಾಣ, 128 ಬೆಡ್ಗಳ ಡಾರ್ಮಿಟರಿ ವ್ಯವಸ್ಥೆ ಕಲ್ಪಿಸುವ ಕಟ್ಟಡ ಟರ್ಮಿನಲ್ ಆವರಣದಲ್ಲಿದೆ. ಪೆಟ್ರೋಲ್ ಬಂಕ್ ಮತ್ತು ಸರ್ವೀಸ್ ಸ್ಟೇಷನ್, ವೇಬ್ರಿಡ್ಜ್ ಗೆ ನಿವೇಶನಗಳನ್ನು ಕಾಯ್ದಿರಿಸಲಾಗಿದೆ. ಅಷ್ಟಲ್ಲದೇ 100 ಸಾರಿಗೆ ನಿವೇಶನವನ್ನು ಲಾರಿ ಮಾಲೀಕರು ಮತ್ತು ಏಜೆಂಟ್ಗಳಿಗಾಗಿ ನಿರ್ಮಿಸಲಾಗಿದೆ. ಗೋಡೌನ್ ಪ್ಲಾಟ್ಗಾಗಿ ಒಟ್ಟು 22 ನಿವೇಶನಗಳ ಸಹಿತ ಸುಂದರ ಹಸಿರು ಪರಿಸರ ಆಕರ್ಷಣೀಯವಾಗಿದೆ ಎಂದರು.
ಈ ವೇಳೆ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ, ಲಾರಿ ಮಾಲೀಕರ ಫೆಡೆರೇಷನ್ ಅಧ್ಯಕ್ಷರಾದ ನವೀನ್ ರೆಡ್ಡಿ ಮಾತನಾಡಿದರು, ಈ ವೇಳೆ ವಿಧಾನ ಪರಿಷತ್ ಸದಸ್ಯ ರಾಮೋಜಿ, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎನ್.ಎಫ್.ಇಮಾಮ್ ನಿಯಾಜಿ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ, ಎಸ್ಪಿ ಶ್ರೀಹರಿಬಾಬು, ಸಾರಿಗೆ ಇಲಾಖೆ ಜಂಟಿ ನಿರ್ದೇಶಕ ಸಿದ್ದಪ್ಪ ಪಲ್ಲೇದ್, ಸಾರಿಗೆ ಅಧಿಕಾರಿ ವಸಂತ ಕುಮಾರ್ ಚವ್ಹಾಣ್ ಸೇರಿದಂತೆ ಲಾರಿ ಮಾಲೀಕರಗಳು, ಚಾಲಕರು ಭಾಗವಹಿಸಿದ್ದರು.