ರಾಮದುರ್ಗ: ತಾಲೂಕಿನ ಅವರಾದಿ ಗ್ರಾಮದ ಅನುಪಮಾ ವಿದ್ಯಾ ಮಂದಿರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 1999 ರಿಂದ 2010 ನೇ ಸಾಲಿನ ಏಳನೇ ತರಗತಿ ವಿದ್ಯಾರ್ಥಿಗಳಿಂದ ಜ್ಞಾನ ದಾಸೋಹಿ ಮೃತ್ಯುಂಜಯ ಶ್ರೀಗಳ ದಿವ್ಯ ಬೆಳಗಿನಲ್ಲಿ ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನ ಸಮಾರಂಭವು ಶ್ರೀ ಫಲಾಹಾರೇಶ್ವರ ಮಠದಲ್ಲಿ ಪೂಜ್ಯ ಶ್ರೀ ಮ.ನಿ.ಪ್ರ.ಸ್ವ ಶಿವಮೂರ್ತಿ ಮಹಾ ಸ್ವಾಮಿಜೀಗಳ ದಿವ್ಯ ಸಾನಿಧ್ಯದಲ್ಲಿ ದೀಪ ಬೆಳಗಿಸುವದರೊಂದಿಗೆ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಶಿಕ್ಷಕರಾದ ಮುದಕಪ್ಪ ಜಲಗೇರಿ ಅವರು ಅವರು ಮಾತನಾಡಿ ವಿದ್ಯಾರ್ಥಿಗಳು ಕೇವಲ ವಿದ್ಯಾರ್ಥಿಗಳಲ್ಲ ಅವರು ನಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ಅಂತಾ ಭಾವಿಸಿ ನಿಮಗೆಲ್ಲ ಶಿಕ್ಷಣ ನೀಡಿದ್ದು ನಮ್ಮ ಸೌಭಾಗ್ಯ, ಶಿಕ್ಷಣ ಅನ್ನುವುದು ಕಷ್ಟ ಪಟ್ಟು ಕಲಿಯುವದಲ್ಲ ಇಷ್ಟ ಪಟ್ಟು ಕಲಿತಾಗ ಉನ್ನತ ಸ್ಥಾನ ಮುಟ್ಟಲು ಸಾಧ್ಯ, ನಿಮಗೆಲ್ಲ ಶಿಕ್ಷಣ ನೀಡಿರುವುದು ನಿಮ್ಮ ಜೊತೆ ಇದ್ದ ಒಡನಾಟ ಭಾಂದವ್ಯವನ್ನು ಮರೆಯಲಿಕ್ಕೆ ಆಗುದಿಲ್ಲ, ನಾವು ಕಲಿಸಿದ ವಿದ್ಯಾರ್ಥಿಗಳು ನೀವೆಲ್ಲ ಉನ್ನತ ಸ್ಥಾನದಲ್ಲಿ ಹೊಂದಿದ್ದೀರಿ. ಜೊತೆಗೆ ನಿಮ್ಮ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣವನ್ನು ನೀಡಿ ಅವರನ್ನು ನಿಮ್ಮಂತೆ ಉನ್ನತ ಸ್ಥಾನಕ್ಕೆ ಕೊಂಡೋಯಿರಿ ಎಂದು ನುಡಿದರು.
ಗುರು ಮಾತೆಯರಾದ ವಿದ್ಯಾ ಕುಲಕರ್ಣಿ ಅವರು ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡಿ ಈ ಮಹಾವಿದ್ಯಾಲಯದಲ್ಲಿ 6 ವರ್ಷ ಸೇವೆ ಸಲ್ಲಿಸಿದ್ದೇನೆ. 20 ವರ್ಷದ ಹಿಂದೆ ನಾನು ಇಲ್ಲಿ ನಿಮ್ಮ ಜೊತೆಗೆ ಪಾಠ ಮಾಡಿರುವ ನೀವೆಲ್ಲ ಪ್ರಾಮಾಣಿಕವಾಗಿ ಕಲಿತಿದ್ದೀರಿ ಅಂದಿನ ನೆನಪುಗಳನ್ನು ಈಗ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ನಮಗೆಲ್ಲ ಮೆಲಕು ಹಾಕುವಂತೆ ಮಾಡಿರುವದನ್ನು ಕಣ್ಣುತುಂಬಿ ಕೊಳ್ಳುವ ಸೌಭಾಗ್ಯ ಬಂದಿರುವುದು ತುಂಬಾ ಖುಷಿ, ಹೆಮ್ಮೆ ಎನಿಸುತ್ತಿದೆ. ಜೊತೆಗೆ ನಮ್ಮ ಕೈಯಲ್ಲಿ ಕಲಿತ ನೀವು ವಿವಿಧ ಇಲಾಖೆಗಳಲ್ಲಿ ಉನ್ನತವಾದ ಹುದ್ದೆ ಅಲಂಕರಿಸಿರುವುದು ತುಂಬಾ ಹೆಮ್ಮೆ ಪಡುವ ವಿಷಯವಾಗಿದೆ ಎಂದು ನುಡಿದರು
ಈ ಸಂದರ್ಭದಲ್ಲಿ ಶಿಕ್ಷಕರಾದ ರಾಮದುರ್ಗ ಸರ್ ಅವರು ಮಾತನಾಡಿ ನಾವು ಇಲ್ಲಿ ನಿಮಗೆ ಪಾಠ ಹೇಳುವ ಸಮಯದಲ್ಲಿ ನಿಮ್ಮ ತಂದೆ ತಾಯಿಗಳು ನಮಗೆ ಉತ್ತಮವಾದ ಪ್ರೇರಣೆ ನೀಡಿದ್ದಾರೆ, ನೀವೆಲ್ಲ ಇಲ್ಲಿಯ ಶಿಕ್ಷಣ ಪಡೆದು, ವಿವಿಧ ಕ್ಷೇತ್ರದಲ್ಲಿ ವಿವಿಧ ಹುದ್ದೆಗಳನ್ನು ಪಡೆದು ನಾನಾಕಡೆ ಸೇವೆ ಸಲ್ಲಿಸುತ್ತಿದ್ದೀರಿ. ಎಲ್ಲರನ್ನೂ ಒಗ್ಗೂಡಿಸಿ ಗುರುಗಳಿಗೆ ಭಕ್ತಿ ಭಾವದಿಂದ ಗುರುವಂದನಾ ಸಲ್ಲಿಸುವ ಮೂಲಕ ನಮ್ಮ ಮನಸ್ಸು ಗೆದ್ದಿದ್ದೀರಿ ಎಂದು ನುಡಿದರು.
ಈ ಸಂದರ್ಭದಲ್ಲಿ ಗುರುವೃಂದದವರಿಗೆ ಹಾಗೂ ಅಥಿತಿಗಳಿಗೆ ಸನ್ಮಾನಿಸುವ ಮೂಲಕ ಗೌರವ ವಂದನೆಗನ್ನು ಅರ್ಪಿಸಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಶ್ರೀಗಳು ಆಶೀರ್ವಚನ ನುಡಿಗಳನ್ನಾಡಿ ಸ್ನೇಹ ಸಮ್ಮಿಲನ ಅನ್ನುವುದು ಹಿಂದಿನ ವಿಚಾರ ಆಚಾರ ಆತ್ಮಾವಲೋಕನ ಹಂಚಿಕೊಳ್ಳುವುದು, ಗುರು ಶಿಷ್ಯರ ಸಂಬಂಧ ಅನ್ನುವುದು ಭಕ್ತಿಭಾವದಿಂದ ಕಾಣುವುದು, ಶಿಕ್ಷಕರು ದಾರಿದೀಪಗಳಾಗಿ ಜೀವನ ಬೆಳಗಿಸುವವರು.ನೀವೆಲ್ಲ ಒಂದೇ ಬಳ್ಳಿಯ ಹೂವುಗಳು ಬದಕನ್ನು ರೂಪಿಸಲು ಶಿಕ್ಷಕರ ಪಾತ್ರ ಬಹಳ ದೊಡ್ಡದು. ಹಿಂದೆ ಕಲಿಸಿದ ಗುರುಗಳಿಗೆ ಇಂದು ಗುರುವಂದನಾ ಅರ್ಪಿಸುವುದು ವಿದ್ಯಾರ್ಥಿಗಳ ಸಮ್ಮಿಲನ ಖುಷಿ ಅನಿಸಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸರಕಾರಿ ಆದರ್ಶ ಪದವಿ ಪೂರ್ವ ಕಾಲೇಜು ಕಟಕೋಳ ಮಹಾವಿದ್ಯಾಲಯದ ಪ್ರಭಾರಿ ಪ್ರಚಾರ್ಯರು ಡಾ. ಸಿದ್ದಪ್ಪ ಕಟ್ಟೆಕಾರ ಹಾಗೂ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪವಿತ್ರಾ ಜಲಗೇರಿ ಸ್ವಾಗತಿಸಿದರು, ಶಿದ್ದಪ್ಪ ಹಕ್ಕೆನ್ನವರ ನಿರೂಪಿಸಿ ವಂದಿಸಿದರು.