ಭಾನು ಪೃಥ್ವಿ 100 ಮಾರ್ಕ್ಸ್ ಫಿಲಂಸ್ ಲಾಂಛನದಲ್ಲಿ ಶೋಭಾವತಿ ಕಪಿಲ್ ಅವರು ನಿರ್ಮಿಸುತ್ತಿರುವ, ಆರ್. ಲಕ್ಷ್ಮಿ ನಾರಾಯಣ ಗೌಡ ಅರ್ಪಿಸುವ, ನೃತ್ಯ ಸಂಯೋಜಕ ಎಂ.ಆರ್. ಕಪಿಲ್ ಅವರ ನಿರ್ದೇಶನದ ಚಿತ್ರ ‘ಒಂದು ಸುಂದರ ದೆವ್ವದ ಕಥೆ’.
ಈ ಹಿಂದೆ ದಾಸರಹಳ್ಳಿ, ಬಿಡುಗಡೆಗೆ ಸಿದ್ದವಾಗಿರುವ ದೇವದೂತ ಚಿತ್ರಗಳ ನಿರ್ದೇಶಕ ಕಪಿಲ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 10ನೇ ಚಿತ್ರ ಇದಾಗಿದೆ.
‘ಒಂದು ಸುಂದರ ದೆವ್ವದ ಕಥೆ’ ಟೈಟಲ್ ನಷ್ಟೇ ಕುತೂಹಲಕಾರಿ ಹಾಗೂ ವಿಭಿನ್ನ ಕಥಾವಸ್ತು ಒಳಗೊಂಡ ಈ ಚಿತ್ರದಲ್ಲಿ ಇದೇ ಮೊದಲಬಾರಿಗೆ ನಾಯಕ ನಟರಾಗಿ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಅಭಿನಯಿಸುತ್ತಿದ್ದಾರೆ. ಇದೇ ತಿಂಗಳ 23ರಿಂದ ಚಿತ್ರೀಕರಣ ಆರಂಭಿಸಿ ಬೆಂಗಳೂರು ಸುತ್ತಮುತ್ತ ಈ ಚಿತ್ರದ ಶೂಟಿಂಗ್ ನಡೆಸಲಾಗುವುದು.
ಆರು ಜನ ಪ್ರತಿಭಾವಂತ ಹೆಣ್ಣುಮಕ್ಕಳು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕೂಡಿಟ್ಟ ಹಣವನ್ನು ನಿಮಗೆ ಕಾಲೇಜಿನಲ್ಲಿ ಸೀಟು ಕೊಡಿಸುತ್ತೇನೆಂದು ನಂಬಿಸಿ ಮೋಸ ಮಾಡುತ್ತಾರೆ. ಅದೇ ಕಾಲೋನಿಯಲ್ಲಿ ಕಾವಲುಗಾರನಾಗಿ ಕೆಲಸ ಮಾಡುವ ನಾಯಕ ಈ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುತ್ತಾನೆ. ಹೀಗೆ ಕುತೂಹಲಕರ ಕಥಾಹಂದರ ಒಳಗೊಂಡ ಒಂದು ಸುಂದರ ದೆವ್ವದ ಕಥೆ ಚಿತ್ರದಲ್ಲಿ ಇದೇ ಮೊದಲಬಾರಿಗೆ ಒಬ್ಬ ಸಾಹಸ ನಿರ್ದೇಶಕ ಹಾಗೂ ನೃತ್ಯ ನಿರ್ದೇಶಕ ನಾಯಕ, ನಿರ್ದೆಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಸಾಯಿ ಕೃಷ್ಣ ಹೆಬ್ಬಾಳ ಚಿತ್ರಕಥೆ, ಸಂಭಾಷಣೆ, ಹರ್ಷ ಕೊಗೋಡ್ ಸಂಗೀತ, ಶಂಕರ್ ಆರಾಧ್ಯ ಛಾಯಾಗ್ರಹಣ, ವಿನಯ್ ಜಿ. ಆಲೂರು ಸಂಕಲನ, ಶರಣ್ ಗದ್ವಾಲ್ ತಾಂತ್ರಿಕ ನಿರ್ದೇಶನ ಈ ಚಿತ್ರಕ್ಕಿದೆ.
ಕೌರವ ವೆಂಕಟೇಶ್, ಕೆ.ಟಿ. ಮುನಿರಾಜ್, ಆರ್. ಲಕ್ಷ್ಮೀನಾರಾಯಣಗೌಡ, ಗುರು ಪ್ರಸಾದ್, ಸುರೇಶ್ ಮುರಳಿ, ವಿ. ಸಿ.ಎನ್. ಮಂಜು, ವಿಕ್ಟರಿ ದಯಾಲನ್, ನಾರಾಯಣಸ್ವಾಮಿ, ವಿಕ್ಟರಿ ವಾಸು, ಶಂಕರ್ ಭಟ್, ಪ್ರೇಮ್ ಪಾವಗಡ ಸೇರಿದಂತೆ ಸಾಕಷ್ಟು ಜನ ರಂಗಕಲಾವಿದರುಗಳು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ