ಬಳ್ಳಾರಿ: 04.:ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ವತಿಯಿಂದ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ನಗರದ ಆಟಲ್ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ರಂಗ ಗೀತೆಗಳು, ಬಯಲಾಟ ಪದಗಳು ಹಾಗೂ ಬಯಲಾಟದ ಸ್ತ್ರೀ ಪಾತ್ರದಾರಿ ಮಾತಿನ ಸನ್ನಿವೇಶ ಕಾರ್ಯಕ್ರಮ ನಡೆಯಿತು.
ಮುಖಂಡರಾದ ಬಂಡೆಗೌಡ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಹಲವು ವರ್ಷಗಳಿಂದ ಅನೇಕ ಬಯಲಾಟ ಕಾರ್ಯಕ್ರಮಗಳು, ರಂಗಗೀತೆಗಳು, ಸಾಂಸ್ಕೃತಿಕ ಚಟುವಟಿಕೆಗಳು ಕರ್ನಾಟಕ ರಾಜ್ಯಾಧ್ಯಂತ ನಡೆಸಿಕೊಂಡು ಬಂದಿರುತ್ತಾರೆ, ಇವರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜಕ್ಕೆ ಮಾದರಿಯಾಗಿ ಹೆಚ್ಚಿನ ರೀತಿಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಕಲೆಯನ್ನು ಬೆಳೆಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೈತ ಮುಖಂಡ ಮಲ್ಲಾಪುರ ಎಂ. ಈಶ್ವರರೆಡ್ಡಿ ಮಾತನಾಡಿ, ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಸಾಂಸ್ಕೃತಿಕ ಕಲೆಗಳ ಬಗ್ಗೆ ಇನ್ನೂ ಒತ್ತು ನೀಡಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡರಾದ ರಾಜೇಂದ್ರ ಪ್ರಸಾದ್, ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿ ಗುರುಸ್ವಾಮಿಗಳಾದ ಕೆ. ಶ್ರೀನಿವಾಸ, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸುಜಾತಮ್ಮ, ಅಕ್ಷರ ಇಂಡಿಪೆಂಡೆಂಟ್ ಪಿ.ಯು.ಕಾಲೇಜಿನ ಉಪನ್ಯಾಸಕರಾದ ಡಿ.ಚಕ್ರವರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ರಂಗಭೂಮಿ ಕಲಾವಿದರಾದ ಎರ್ರೆಮ್ಮ, ಕೆ. ಕುಸುಮಾ ಅವರು ರಂಗ ಗೀತೆಗಳನ್ನು ಹಾಡಿ ನೆರೆದಿದ್ದ ಜನಮನ ರಂಜಿಸಿದರು.
ಡಿ.ಚಕ್ರವರ್ತಿ ಮತ್ತು ಕೆ. ಶ್ರೀನಿವಾಸ ಅವರಿಂದ ಭಕ್ತಿಗೀತೆ ಗಾಯನ ನಡೆಯಿತು.
ರಂಗಭೂಮಿ ಕಲಾವಿದೆ ಬಿ. ಸುಜಾತಮ್ಮ ಅವರ ನೇತೃತ್ವದಲ್ಲಿ ಬಯಲಾಟದ ಸ್ತ್ರೀ ಪಾತ್ರದಾರಿ ಸನ್ನಿವೇಶ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ನ ಕಾರ್ಯದರ್ಶಿ ಬಿ.ಲಕ್ಷ್ಮೀ ನಾರಾಯಣ ಹಾರ್ಮೋನಿಯಂ ಸಾಥ್ ನೀಡುವ ಮೂಲಕ ಪ್ರಾರ್ಥನಾ ಗೀತೆ ಹಾಡಿದರು.
ಕೆ. ಕುಸುಮಾ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಬಿ. ಲಕ್ಷ್ಮೀನಾರಾಯಣ ವಂದಿಸಿದರು.


