ಬಳ್ಳಾರಿ03. : ವಿಠಲಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸಲು ತಡೆಯುತ್ತಿರುವ ಅರಣ್ಯ ಇಲಾಖೆಯ ಕ್ರಮವನ್ನು ವಿರೋಧಿಸಿ, ಬಳ್ಳಾರಿ ಜಿಲ್ಲಾ ಕುರುಬರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಸಂಘದ ಪ್ರಕಾರ, ದಿನನಿತ್ಯ ಈ ಪ್ರದೇಶದಲ್ಲಿ ಸುಮಾರು 15,000 ಕುರಿಗಳು ಮೇಯುತ್ತಿದ್ದು, 280 ಕುರಿಗಾಹಿ ಕುಟುಂಬಗಳು ತಮ್ಮ ಜೀವನೋಪಾಯವನ್ನು ಕುರಿ ಸಾಕಣೆ ಮೂಲಕ ಸಾಗಿಸುತ್ತಿದ್ದಾರೆ.
ಈವರೆಗೆ ಯಾವುದೇ ಆಹಾರದ ಕೊರತೆ ಅಥವಾ ಪರಿಸರ ನಾಶವಾಗದೇ ಕುರಿ ಸಾಕಣೆ ಸುಗಮವಾಗಿ ನಡೆಯುತ್ತಿತ್ತು. ಆದರೆ ಇತ್ತೀಚೆಗೆ ಅರಣ್ಯ ಇಲಾಖೆ ಅರಣ್ಯ ಗಡಿಭಾಗದಲ್ಲಿ ತಡೆಗೋಡೆ ಹಾಗೂ ಮುಳ್ಳು ತಂತಿಗಳನ್ನು ಅಳವಡಿಸಿ, ಕುರಿಗಳನ್ನು ಮೇಯಲು ಅಡ್ಡಿಪಡಿಸುತ್ತಿರುವುದರಿಂದ, ಕುರಿಗಳ ಸಂರಕ್ಷಣೆಯಲ್ಲಿ ತೊಂದರೆ ಉಂಟಾಗಿದೆ.
“ಇದು ಕುರಿಗಳ ಆಹಾರ ಸಮಸ್ಯೆ ಮಾತ್ರವಲ್ಲ, ಇಡೀ ಕುಟುಂಬಗಳ ಜೀವನಾಧಾರಕ್ಕೆ ಹೊಡೆತ ನೀಡುವಂತಹ ವಿಷಯ,” ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್ ಅವರು ತಿಳಿಸಿದ್ದಾರೆ. ಮುಖಂಡರು ತಿಳಿಸಿದರು. ಅವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕುರಿಗಳಿಗೆ ಮೇವು ಹಕ್ಕು ನೀಡುವಂತೆ ಹಾಗೂ ಕುರಿಗಾಹಿಗಳಿಗೆ ಆಸರೆ ನೀಡುವಂತೆ ಅರಣ್ಯ ವಲಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಅರಣ್ಯ ಪ್ರದೇಶದಲ್ಲಿ ನಿಯಮಿತ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಕುರಿ ಮೇಯಿಸಲು ಸಮಂಜಸವಾದ ವ್ಯವಸ್ಥೆ ಕಲ್ಪಿಸುವಂತೆ ಸಂಘ ಆಗ್ರಹಿಸಿದೆ.
ಮನವಿ ನೀಡುವ ಸಂದರ್ಭದಲ್ಲಿ ಕುರುಬರ ಸಂಘದ, ಅಧ್ಯಕ್ಷ ಗಾದಿಲಿಂಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಮೋಹನ್, ಖಜಾಂಚಿ ಕಾಮರಾಜ್, ಪಾಟೀಲ್ ಗೂ ವಿಠಲಾಪುರ ಗ್ರಾಮದ ಕುರಿಗಾಹಿಗಳು ಸೇರಿದಂತೆ ಉಪಸ್ಥಿತರಿದ್ದರು.