ಪರಮಪೂಜ್ಯ ಶ್ರೀ ಸಿದ್ದರಾಮನಂದ ಮಹಾಸ್ವಾಮಿಗಳ ಲಿಂಗೈಕ್ಯ -ಬಳ್ಳಾರಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ
ಬಳ್ಳಾರಿ, ಜ.16..: ಪರಮಪೂಜ್ಯ ಶ್ರೀ ಕಾಗಿನೆಲೆ ಕನಕ ಗುರುಪೀಠ, ಗುಲ್ಬರ್ಗ ವಿಭಾಗದ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಸಿದ್ದರಾಮನಂದ ಮಹಾಸ್ವಾಮಿಗಳು ಗುರುವಾರ ಬೆಳಿಗ್ಗೆ 4 ಗಂಟೆಗೆ ಲಿಂಗೈಕ್ಯರಾಗಿದ್ದಾರೆ. ಶ್ರೀಗಳ ನಿಧನದ ಸುದ್ದಿ ಹಾಲುಮತ ಸಮಾಜ ಸೇರಿದಂತೆ ಕುರುಬ ಸಮುದಾಯದ ಬಂಧುಗಳಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.
ಸಮಾಜದ ಏಕತೆ, ಧಾರ್ಮಿಕ ಜಾಗೃತಿ ಹಾಗೂ ಸಾಮಾಜಿಕ ಸೇವೆಗಳಿಗೆ ಅಪಾರ ಕೊಡುಗೆ ನೀಡಿದ ಮಹಾನ್ ಸಂತರಾಗಿದ್ದ ಶ್ರೀ ಸಿದ್ದರಾಮನಂದ ಮಹಾಸ್ವಾಮಿಗಳ ಲಿಂಗೈಕ್ಯವು ಸಮಾಜಕ್ಕೆ ಭರಿಸಲಾಗದ ನಷ್ಟವಾಗಿದೆ ಎಂದು ಕುರುಬ ಸಮುದಾಯದ ಮುಖಂಡರು ಕಂಬನಿ ಮಿಡಿದರು.
ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಬಳ್ಳಾರಿ ಜಿಲ್ಲಾ ಕುರುಬರ ಸಂಘದ ವತಿಯಿಂದ ಇಂದು ಸಂಜೆ ದೇವಿನಗರದಲ್ಲಿರುವ ಸಂಘದ ಕಚೇರಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರು ಹಾಗೂ ಹಾಲುಮತ ಸಮುದಾಯದ ಅನೇಕರು ಪಾಲ್ಗೊಂಡು ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಅಂತಿಮ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜದ ಪ್ರಧಾನ ಕಾರ್ಯದರ್ಶಿ ಕೆ. ಮೋಹನ್, ಶ್ರೀ ಸಿದ್ದರಾಮನಂದ ಮಹಾಸ್ವಾಮಿಗಳ ಆದರ್ಶಗಳು, ಸಂದೇಶಗಳು ಹಾಗೂ ಸಮಾಜಮುಖಿ ಚಿಂತನೆಗಳು ಮುಂದಿನ ಪೀಳಿಗೆಗೆ ಸದಾ ಮಾರ್ಗದರ್ಶಕವಾಗಿವೆ ಎಂದರು.
ಈ ವೇಳೆ ಸಮುದಾಯದ ಮುಖಂಡರಾದ ಬಜಾರಪ್ಪ, ಸಂಗನಕಲ್ಲು ಲಿಂಗರಾಜು, ಗೋನಾಳ್ ಮಾನಯ್ಯ, ಓಪಿಡಿ ರಾಮಚಂದ್ರ, ಮಲ್ಲೇಶ್ವರಿ, ಪಿ. ಶೇಖಲಿಂಗ ಸಿರವಾರ, ಡಿ. ಗಾದಿಲಿಂಗಪ್ಪ, ಕೆ. ರಾಮಾಂಜಿನಿ, ಕೆ. ಸುರೇಶ್, ಗೋನಾಳ್ ಎಂ. ತಿಮಪ್ಪ, ದೇವರಾಜ್, ಗಾದಿಲಿಂಗ ಅಮರಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


