ಬಳ್ಳಾರಿ,ಆ.13.: ಬಯಲಾಟ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಇತರೆ ಪ್ರಶಸ್ತಿಗಳಿಂದ ಅರ್ಹ ಕಲಾವಿದರು ವಂಚಿತರಾಗುತ್ತಿದ್ದಾರೆ. ಕೇವಲ ರೆಕಮೆಂಡ್ ಇದ್ದವರು ಮಾತ್ರ ಪ್ರಶಸ್ತಿಗಳನ್ನು ಪಡೆಯುತ್ತಿದ್ದು, ಸರಕಾರ ಅರ್ಹ ಕಲಾವಿದರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಬೇಕು ಎಂದು ಜೆ.ಕೆ.ಫೌಂಡೇಷನ್ ಅಧ್ಯಕ್ಷ ಹಾಗು ವಕೀಲ ಜೋಳದರಾಶಿ ತಿಮ್ಮಪ್ಪ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದೇವಿಶ್ರೀ ಸಾಂಸ್ಕೃತಿಕ ಬಯಲಾಟ ಕಲಾ ಟ್ರಸ್ಟ್ ನಿಂದ ಗಿರಿಜನ ಉಪ ಯೋಜನೆಯಡಿ ನಗರದ ಸಾಂಸ್ಕೃತಿಕ ಸಮುಚ್ಛಯ ಹೊಂಗಿರಣ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಮಾಯಣ ಬಯಲಾಟ ಪ್ರದರ್ಶನ ಕಾರ್ಯಕ್ರ ಮ ಉದ್ಘಾಟಿ ಮಾತನಾಡಿದ ಅವರು, ಕಲೆಗೆ ಮನ ಸೋಲದ ವ್ಯಕ್ತಿಗಳೇ ಇಲ್ಲ ಅದರಲ್ಲೂ ಬಯಲಾಟ ಕಲೆ ಮತ್ತಷ್ಟೂ ವಿಶೇಷವಾದದ್ದು. ರೋಗ ರುಜಿನಿಗಳನ್ನು ವಾಸಿ ಮಾಡುವ ಶಕ್ತಿ ಬಯಲಾಟಕ್ಕಿದೆ. ನಿಜ ಜೀವನದಲ್ಲಿ ನಡೆಯುವ ಅಂಶಗಳೇ ಬಯಲಾಟದಲ್ಲಿವೆ. ಕಲಾವಿದರು ದೇಶಕ್ಕೆ ಶಕ್ತಿಯಾಗಿದ್ದಾರೆ. ಅಂತಹ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ ಎಂದರು.
ಬಯಲಾಟಗಳನ್ನು ಪ್ರದರ್ಶನ ಮಾಡುವುದರಿಂದ ಊರುಗಳಲ್ಲಿ ಮಳೆ,ಬೆಳೆ ಸಮೃದ್ದಿಯಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತರೂ ಹಾಗು ಬಯಲಾಟ ಕಲಾವಿದರೂ ಸಿದ್ದರಾಮಪ್ಪ ಸಿರಿಗೇರಿ ಮಾತನಾಡಿ, ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರನ್ನು ಉಳಿಸುವ ಕೆಲಸ ಸರಕಾರ ಮಾಡಬೇಕು ಎಂದು ಹೇಳಿದರು.
ಜಾನಪದ ಪರಿಷತ್ ಅಧ್ಯಕ್ಷ ಚಾನಾಳ್ ಅಮರೇಶಪ್ಪ, ಕೆ.ವೀರಾಪುರ ಶ್ರೀನಿವಾಸ, ನವಕೋಟಿ ರೆಡ್ಡಿ, ಶ್ರೀನಿವಾಸ ಕೆ. ವೀರಾಪುರ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಯಲಾಟ ಕಲಾವಿದ ಕರ್ಚೇಡು ನಾಗರಾಜ ಗೌಡ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ರಂಗಭೂಮಿ ಕಲಾವಿದರಾದ ಸುಜಾತಮ್ಮ, ದೇವಿಶ್ರೀ ಸಾಂಸ್ಕೃತಿಕ ಬಯಲಾಟ ಕಲಾ ಟ್ರಸ್ಟ್ ನ ಅಧ್ಯಕ್ಷ ವೈ.ರಂಗಾರೆಡ್ಡಿ, ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ನ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ನಿಂದ ರಾಮಾಯಣ ಬಯಲಾಟ ಪ್ರದರ್ಶನ ನಡೆಯಿತು.