ಬೆಂಗಳೂರು, ಜುಲೈ 9: ಕರ್ನಾಟಕದಾದ್ಯಂತ ಅನ್ನಭಾಗ್ಯ ಅಕ್ಕಿ ಪೂರೈಕೆ ಮಾಡಿದ ಲಾರಿ ಮಾಲೀಕರಿಗೆ ಕಳೆದ ಐದು ತಿಂಗಳಿನಿಂದ ಬಿಡುಗಡೆ ಮಾಡಬೇಕಿದ್ದ 260 ಕೋಟಿ ರೂ.ನಷ್ಟು ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಲಾರಿ ಮಾಲೀಕರ ಸಂಘ ಸೋಮವಾರದಿಂದ ಮುಷ್ಕರ ಆರಂಭಿಸಿತ್ತು. ಇದರ ಬೆನ್ನಲ್ಲೇ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ, ಎರಡು ದಿನಗಳಲ್ಲಿ ಹಣ ಸಂದಾಯ ಮಾಡುತ್ತೇವೆಂದು ಭರವಸೆ ನೀಡಿದ್ದರು. ಆದರೆ ಇದರಿಂದ ತೃಪ್ತರಾಗದ ಲಾರಿ ಮಾಲೀಕರು ನಮ್ಮ ಬ್ಯಾಂಕ್ ಅಕೌಂಟ್ಗೆ ಹಣ ಸಂದಾಯ ಆಗುವವರೆಗೂ ಮುಷ್ಕರ ವಾಪಸ್ಸು ಪಡೆಯಲ್ಲ ಎಂದು ಪಟ್ಟು ಹಿಡಿದು ಮುಷ್ಕರ ಮುಂದುವರಿಸಿದ್ದರು.