ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಹೊಸ ಟೆಂಡರ್ ಕರೆಯಲು ಮುಂದಾದ ಸರ್ಕಾರ

Ravi Talawar
ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಹೊಸ ಟೆಂಡರ್ ಕರೆಯಲು ಮುಂದಾದ ಸರ್ಕಾರ
WhatsApp Group Join Now
Telegram Group Join Now

ಬೆಂಗಳೂರು, ಜುಲೈ 26: ಇತ್ತೀಚೆಗಷ್ಟೇ ಇಂದಿರಾ ಕ್ಯಾಂಟೀನ್ ಬಂದ್ ಮಾಡಿದ್ದ ಶೆಫ್ ಟಾಕ್ ಸಂಸ್ಥೆಯನ್ನು ಕೈಬಿಟ್ಟು ಅದರ ಬದಲಿಗೆ ಕ್ಯಾಂಟೀನ್ ನಿರ್ವಹಣೆಗೆ ಹೊಸ ಟೆಂಡರ್ ಕರೆಯಲು ಸರ್ಕಾರ ಮುಂದಾಗಿದೆ. ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವೆಡೆ ಇಂದಿರಾ ಕ್ಯಾಂಟೀನ್​​ಗಳನ್ನು ಸಂಸ್ಥೆ ಬಂದ್ ಮಾಡಿತ್ತು. ಈ ವಿಚಾರ ಕಾಂಗ್ರೆಸ್ ಸರ್ಕಾರ ಮುಜುಗರಕ್ಕೀಡಾಗಲು ಕಾರಣವಾಗಿತ್ತು.

ಬೆಂಗಳೂರಿನ ಇಂದಿರಾ ಕ್ಯಾಂಟೀನ್​​ಗಳ ನಿರ್ವಹಣೆಗೆ ಇದೀಗ ಬಿಬಿಎಂಪಿ ಹೊಸ ಸಂಸ್ಥೆಗಳಿಗೆ ಟೆಂಡರ್ ಆಹ್ವಾನ ನೀಡಿದೆ. ಆಗಸ್ಟ್ ನಿಂದ ಹೊಸ ಟೆಂಡರ್​​ದಾರರಿಗೆ ಜವಬ್ದಾರಿ ವಹಿಸಲು ಬಿಬಿಎಂಪಿ ಸಜ್ಜಾಗಿದೆ. ಇಂದಿರಾ ಕ್ಯಾಂಟೀನ್​ಗಳಿಗೆ ಆಹಾರ ಪೂರೈಕೆಗೆ ರಾಜ್ಯ ಸರ್ಕಾರ ಹೊಸ ಗುತ್ತಿಗೆ ನೀಡಿದ್ದು, ಸದ್ಯ ಬಿಬಿಎಂಪಿಯ 6 ವಲಯಗಳ ಕ್ಯಾಂಟೀನ್​​ಗೆ ಆಹಾರ ಪೂರೈಕೆಗೆ ಟೆಂಡರ್ ಅಂತಿಮಗೊಳಿಸಿದೆ. ಒಟ್ಟು 132 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಾಲ್ಕು ಪ್ಯಾಕೇಜ್​​ನಲ್ಲಿ ಟೆಂಡರ್ ನೀಡಲಾಗಿದೆ. ಒಟ್ಟು 192 ಇಂದಿರಾ ಕ್ಯಾಂಟೀನ್‌ಗೆ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಪೂರೈಕೆಗೆ ಟೆಂಡರ್‌ ಅನ್ವಯವಾಗಲಿದೆ. ಈ ಪೈಕಿ ದಾಸರಹಳ್ಳಿ ಮತ್ತು ಪಶ್ಚಿಮ ವಲಯದ ಟೆಂಡರ್‌ಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ.

ಸತೀಶ್‌ ಕುಮಾರ್‌ ಮಾಲೀಕತ್ವದ ರಿವಾರ್ಡ್ಸ್ ಎಂಬ ಸಂಸ್ಥೆಗೆ 6 ವಲಯದ 142 ಕ್ಯಾಂಟೀನ್​​ಗಳಿಗೆ ಆಹಾರ ಪೂರೈಕೆಯ ಗುತ್ತಿಗೆಯನ್ನು ಎರಡು ವರ್ಷದ ಅವಧಿಗೆ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ ನಿರ್ಮಿಸುವ 50 ಕ್ಯಾಂಟೀನ್​​ಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾದ 2 ಇಂದಿರಾ ಕ್ಯಾಂಟೀನ್‌ಗೂ ಈ ಸಂಸ್ಥೆ ಆಹಾರ ಪೂರೈಕೆ ಮಾಡಬೇಕಿದೆ.

WhatsApp Group Join Now
Telegram Group Join Now
Share This Article