ಬಳ್ಳಾರಿ.06.: ಬಳ್ಳಾರಿ ಜಿಲ್ಲಾ ಕುರುಬರ ಸಂಘದ ವಿರುದ್ಧ ಸಂಘಗಳ ನೋಂದಣಾಧಿಕಾರಿ ಗಳು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು ಹೊರಡಿಸಿರುವ ಕಾನೂನು ಬಾಹಿರ ಆದೇಶಕ್ಕೆ, ಧಾರವಾಡದ ಮಾನ್ಯ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಅಲಿಪುರ ಕೆ.ಮೋಹನ್ ಅವರು ಹೇಳಿದರು. ನಗರದ ದೇವಿನಗರ ಪ್ರದೇಶದ ಸಂಘದ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಳ್ಳಾರಿ ಜಿಲ್ಲಾ ಕುರುಬರ ಸಂಘಕ್ಕೆ ಕಾನೂನು ಬದ್ಧವಾಗಿಯೇ ಪದಾಧಿಕಾರಿಗಳು ಆಯ್ಕೆಯಾಗಿದ್ದು, ಸಮಾಜದ ಅಭಿವೃದ್ಧಿಗಾಗಿ ನಾವೆಲ್ಲರೂ ಹಗಲಿರುಳು ಶ್ರಮಿಸುತ್ತಿದ್ದೇವೆ. ಹೀಗಿರುವಾಗ ಸಂಘಗಳ ನೋಂದಣಾಧಿಕಾರಿ ಗಳು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು, ಕಾನೂನು ಬದ್ಧವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಕಾನೂನು ಬಾಹಿರವಾಗಿ ಮಾಡಿದ್ದರು. ಕಳೆದ ಮಾ.3 ರಂದು ಕಾರ್ಯಕಾರಿ ಸಮಿತಿಯನ್ನು ಕಾನೂನು ಬಾಹಿರವಾಗಿ ರಚಿಸಿ ನೂತನ ಪದಾಧಿಕಾರಿಗಳನ್ನು ನೇಮಿಸಿ, ಅದನ್ನು ಅಧಿಕಾರಿಗಳು ಅನುಮೋದಿಸಿದ್ದರು. ಇದಕ್ಕೆ ಧಾರವಾಡದ ಮಾನ್ಯ ಉಚ್ಛ ನ್ಯಾಯಾಲಯ ಎ.26ರಂದು ತಡೆಯಾಜ್ಞೆ ನೀಡಿದೆ. ರಿಟ್ ಅರ್ಜಿಯಲ್ಲಿ ಮೂರು ಹಾಗೂ ನಾಲ್ಕನೇ ಪ್ರತಿವಾದಿಗಳಾದ ಕೆ.ಮಹಾಲಿಂಗನ ಗೌಡ, ಕೆ.ಎಸ್.ರಘು ಎನ್ನುವವರು, ಮೇ.5 ರಂದು ಆಕ್ಷೇಪಣೆಗಳನ್ನು ಸಲ್ಲಿಸಿ, ನೀಡಿದ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ಕೋರಿದ್ದಾರೆ, ನ್ಯಾಯಾಲಯ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದರು. ಸಂಘದ ಜಿಲ್ಲಾಧ್ಯಕ್ಷ ಡಾ. ಪಿ.ಎಲ್.ಗಾದಿಲಿಂಗನ ಗೌಡ ಅವರು ಮಾತನಾಡಿ, ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಒಗ್ಗಟ್ಟಿನಿಂದ ಸಮಾಜದ ಅಭಿವೃದ್ಧಿಗಾಗಿ, ಸಮಾಜದ ಮಕ್ಕಳ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದು, ಇದನ್ನು ಸಹಿಸದ ಕೆಲವರು ಕಾನೂನು ಬಾಹಿರ ಕೆಲಸಕ್ಕೆ ಮುಂದಾಗಿದ್ದಾರೆ, ನ್ಯಾಯಾಲಯವೇ ಉತ್ತರ ನೀಡಲಿದೆ, ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ಕೆ. ಬಿ. ಕೊಳಗಲ್ ಅಂಜನಿ, ಯುವ ನಾಯಕ ಬಿ.ಎಂ.ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.