ಬೆಂಗಳೂರು: ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿ, ಮೂವರು ಸಾವನ್ನಪ್ಪಿರುವ ಘಟನೆ ನಗರದ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ನಗರ್ತಪೇಟೆಯಲ್ಲಿ ಇಂದು (ಶನಿವಾರ) ಬೆಳಗಿನಜಾವ 3:30ರ ಸುಮಾರಿಗೆ ನಡೆದಿದೆ.
ಘಟನೆಯಲ್ಲಿ, ರಾಜಸ್ಥಾನ ಮೂಲದ ಮದನ್ ಸಿಂಗ್ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಕಟ್ಟಡದ ನೆಲಮಹಡಿಯಲ್ಲಿದ್ದ ಪ್ಲಾಸ್ಟಿಕ್ ಮ್ಯಾಟ್ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಅವಘಡ ಸಂಭವಿಸಿದೆ ಎನ್ನಲಾಗುತ್ತಿದ್ದು, ಸದ್ಯ ಐದು ಅಗ್ನಿಶಾಮಕ ದಳದ ವಾಹನಗಳಲ್ಲಿ ಬಂದಿರುವ ಸಿಬ್ಬಂದಿ ಬೆಂಕಿ ನಂದಿಸುತ್ತಿದ್ದಾರೆ.
ಅವಘಡ ಸಂಭವಿಸಿದ್ದು ಹೇಗೆ?: ನಾಲ್ಕು ಅಂತಸ್ತಿನ ಕಟ್ಟಡದ ನೆಲಮಹಡಿ ಹಾಗೂ ಮೊದಲ ಮಹಡಿಯಲ್ಲಿ ಪ್ಲಾಸ್ಟಿಕ್ ಮ್ಯಾಟ್ಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿತ್ತು. ಮೂರನೇ ಮಹಡಿಯಲ್ಲಿದ್ದ ಮನೆಯಲ್ಲಿ ಮದನ್ ಕುಮಾರ್, ಅವರ ಪತ್ನಿ ಸಂಗೀತಾ, ಮಕ್ಕಳಾದ ವಿಹಾನ್ ಹಾಗೂ ನಿತೇಶ್ ವಾಸವಿದ್ದರು. ನಾಲ್ಕನೇ ಮಹಡಿಯಲ್ಲಿ ಒಂದು ರೂಮ್ ಇತ್ತು. ಅಗ್ನಿ ಅವಘಡದಿಂದಾಗಿ ಮದನ್ ಕುಮಾರ್ ಕುಟುಂಬ ಹಾಗೂ ಮೊದಲ ಮಹಡಿಯಲ್ಲಿನ ಗೋದಾಮಿನೊಳಗೆ ಮೂವರು ಕಾರ್ಮಿಕರು ಸಿಲುಕಿಕೊಂಡಿದ್ದರು. ಸದ್ಯ ಮದನ್ ಕುಮಾರ್ ಸೇರಿದಂತೆ ಮೂವರು ಮೃತಪಟ್ಟಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.